ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದ ಹಂಸಲೇಖ ಬೆಂಬಲಿಸಿ ಬೃಹತ್ ಪ್ರತಿಭಟನೆ
- ಸಂಗೀತ ದಿಗ್ಗಜ ಹಂಸಲೇಖ ಹೇಳಿಕೆ ಬೆಂಬಲಿಸಿ ಬೃಹತ್ ಪ್ರತಿಭಟನೆ
- ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಂಸಲೇಖ ಅವರನ್ನು ಬೆಂಬಲಿಸಿ ಇಂದು ಪ್ರತಿಭಟನೆ
ಬೆಂಗಳೂರು (ನ.18): ಸಂಗೀತ ದಿಗ್ಗಜ ಹಂಸಲೇಖ (Hamsalekha) ಹೇಳಿಕೆ ಬೆಂಬಲಿಸಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (Bengaluru VV) ವಿದ್ಯಾರ್ಥಿಗಳು (Students) ಹಂಸಲೇಖ ಅವರನ್ನು ಬೆಂಬಲಿಸಿ ಇಂದು ಪ್ರತಿಭಟನೆ (Protest) ನಡೆಸಿದ್ದಾರೆ.
ಬೆಂಗಳೂರು ಸ್ನಾತಕೋತ್ತರ ಮತ್ತು ಸಂಶೋಧನಾ ವಿಧ್ಯಾರ್ಥಿಗಳು ಸೇರಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
ಹಂಸಲೇಖ ಅವರಿಗೆ ಸದ್ಯ ಭದ್ರತೆ (Security) ಸಮಸ್ಯೆ ಕಾಡುತ್ತಿದೆ. ಅನೇಕ ಬೆದರಿಕೆಗಳಿದ್ದು, ಸೂಕ್ತ ಭದ್ರತೆ ನೀಡುವಂತೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ರಾಮನಗರದಲ್ಲಿಯು ಬೆಂಬಲಿಸಿ ಪ್ರತಿಭಟನೆ : ನಾದಬ್ರಹ್ಮ ಹಂಸಲೇಖ ಅವರು ಅಸ್ಪೃಶ್ಯತೆ (Untouchebility) ನಿರ್ಮೂಲನೆಗೆ ಸಂಬಂಧಿಸಿದಂತೆ ಆಡಿರುವ ಮಾತುಗಳಿಗೆ ಬೆಂಬಲ ವ್ಯಕ್ತಪಡಿಸಿ ದಲಿತ - ಪ್ರಗತಿಪರ ಚಿಂತಕರ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದ್ದರು.
ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟಿಸಿದ ಪದಾಧಿಕಾರಿಗಳು, ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಪರ ಘೋಷಣೆ ಕೂಗಿದ್ದರು.
ಸಂಗೀತ ನಿರ್ದೇಶಕ ಹಂಸಲೇಖ ಅವರು ಅಸಮಾನತೆ ಮತ್ತು ತಾರತಮ್ಯ ಹಾಗೂ ವಾಸ್ತವಗಳ ಬಗ್ಗೆ ಮಾತನಾಡಿರುವುದು ಒಂದು ವಿವಾದವಾಗಿರುವುದು ಒಂದು ಅಚ್ಚರಿಗೆ ಕಾರಣವಾಗಿದೆ. ಇದರಲ್ಲಿ ವಿರೋಧಿಸುವಂತಹದ್ದೇನಿದೆ. ಪೇಜಾವರ ಶ್ರೀಗಳು (Pejawara shri) ದಲಿತರ ಮನೆಗೆ ಭೇಟಿ ನೀಡಬಹುದು. ಆದರೆ, ದಲಿತರ ಆಹಾರ ಪದ್ಧತಿಯಾದ ಮಾಂಸಾಹಾರವನ್ನು ಅವರಿಂದ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರಲ್ಲಿ ತಪ್ಪು ಎಂದೆನಿಸುವ ಅಂಶ ಎಲ್ಲಿದೆ ಎಂದು ಪ್ರಶ್ನಿಸಿದರು.
ಹಂಸಲೇಖ ಅವರು ಹೇಳಿರುವ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ, ಜಾತಿ ಬೇಧದ ಪರವಾಗಿರುವ ಕೆಲವು ವ್ಯಕ್ತಿಗಳು ಇದನ್ನು ವಿವಾದ ಎಂಬಂತೆ ತೋರಿಸುತ್ತಿದ್ದಾರೆ. ಹಂಸಲೇಖ ಅವರು ಪ್ರಚಾರಕ್ಕಾಗಿ ಈ ಹೇಳಿಕೆ ನೀಡಿದ್ದಾರೆ ಎಂದು ಕೆಲವರು ಜಾತಿ (Cast) ಬೇಧದ ವಿರುದ್ಧದ ಹಂಸಲೇಖ ಅವರ ಮಾತನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಲು ಮುಂದಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರವೇ ಆಗಿದೆ.
ಸಮತಾ ಸೈನಿಕಾ ದಳದ ಡಾ.ಜಿ.ಗೋವಿಂದಯ್ಯ, ಒಕ್ಕೂಟದ ಮುಖಂಡರಾದ ಶಿವಕುಮಾರಸ್ವಾಮಿ, ಎಸ್.ಜಯಕಾಂತ, ಕೂಡ್ಲೂರು ರವಿಕುಮಾರ್ , ಅಪ್ಪಗೆರೆ ಪ್ರದೀಪ್ , ಮರಳವಾಡಿ ಮಂಜು, ಶಿವರಾಜು, ಸುರೇಶ್ ,ಡಾ.ಜಯಸಿಂಹ, ಕೀರ್ತಿರಾಜ್, ಲಕ್ಷ್ಮಣ್,ಬಿವಿಎಸ್ ವೆಂಕಟೇಶ್, ಹರೀಶ್ ಬಾಲು, ಕುಮಾರಸ್ವಾಮಿ, ಜೆ.ಎಂ.ಶಿವಲಿಂಗಯ್ಯ, ನರಸಿಂಹಯ್ಯ, ಜಯಚಂದ್ರ, ಪುಟ್ಟಸ್ವಾಮಿ, ಭಾಸ್ಕರ್, ಶ್ರೀನಿವಾಸ್, ಸಿದ್ದರಾಮು, ಬ್ಯಾಡರಹಳ್ಳಿ ಶಿವಕುಮಾರ್, ಬನಶಂಕರಿ ನಾಗು, ಜಿ.ಗೋಪಾಲ್ , ಶಿವಲಿಂಗಯ್ಯ, ಸುರೇಂದ್ರ ಶ್ರೀನಿವಾಸ್, ಸುಜೀವನ್, ಚಾಂದ್ ಪಾಷ, ಸೈಯದ್ ಮತೀನ್ , ಅಬ್ದುಲ್ಲಾ ಮತ್ತಿತರರು ಭಾಗವಹಿಸಿದ್ದರು.
ಹಂಸಲೇಖ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು: ಉಡುಪಿಯ (Udupi) ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಡಿ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ವಿಪ್ರ ಯುವ ವೇದಿಕೆ ಪದಾಧಿಕಾರಿಗಳು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವೇದಿಕೆ, ಹಂಸಲೇಖರ ಈ ಹೇಳಿಕೆ ವರ್ಗ ವರ್ಗಗಳ ಮಧ್ಯೆ ದ್ವೇಷ ಉಂಟು ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಪೇಜಾವರ ಶ್ರೀಗಳ ಚಾರಿತ್ರ್ಯಕ್ಕೆ ಕಪ್ಪು ಚುಕ್ಕೆ ಇರಿಸುವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಏನಾದರೂ ಗಲಾಟೆಗಳಾದರೇ ಹಂಸಲೇಖ ಅವರೇ ಕಾರಣ. ಪ್ರಚಾರಕ್ಕಾಗಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹೇಳಿಕೆ ನೀಡಿರುವ ಹಂಸಲೇಖ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಎಫ್ಐಆರ್ ದಾಖಲು: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಡಿ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಹಂಸಲೇಖ ಅವರಿಗೆ ಪೊಲೀಸರು ಶೀಘ್ರವೇ ನೋಟಿಸ್ ನೀಡಲಿದ್ದಾರೆ.