ಇಂದು ಮಧ್ಯಾಹ್ನ 12.17 ಕ್ಕೆ ನಗರದಲ್ಲಿ ನಮ್ಮ ನೆರಳು ನಮಗೇ ಕಾಣಿಸುವುದಿಲ್ಲ. ಇದನ್ನು ಶೂನ್ಯ ನೆರಳಿನ ಕ್ಷಣ ಎಂದು ಕರೆಯಲಾಗುತ್ತದೆ.

ಬೆಂಗಳೂರು (ಏಪ್ರಿಲ್ 25, 2023): ಎಲ್ಲಿ ಹೋದರೂ ನಮ್ಮನ್ನು ಹಿಂಬಾಲಿಸುವ ನಮ್ಮ ನೆರಳು ಎಲ್ಲಿಗೆ ಹೋಯಿತು ಎಂದು ಏಪ್ರಿಲ್ 25ರಂದು ಮಧ್ಯಾಹ್ನ ಹುಡುಕಾಡಬೇಡಿ. ಏಕೆಂದರೆ ಶೂನ್ಯ ನೆರಳಿನ ಪ್ರಭಾವದ ಅಪರೂಪದ ಖಗೋಳ ವಿದ್ಯಮಾನ ಮಂಗಳವಾರ ನಡೆಯಲಿದೆ.

ಇಂದು ಮಧ್ಯಾಹ್ನ 12.17 ಕ್ಕೆ ನಗರದಲ್ಲಿ ನಮ್ಮ ನೆರಳು ನಮಗೇ ಕಾಣಿಸುವುದಿಲ್ಲ. ಇದನ್ನು ಶೂನ್ಯ ನೆರಳಿನ ಕ್ಷಣ ಎಂದು ಕರೆಯಲಾಗುತ್ತದೆ. ಸೂರ್ಯ ನಮ್ಮ ನೆತ್ತಿಯ ಮೇಲೆ ಹಾದು ಹೋಗುವಾಗ ಈ ವಿದ್ಯಮಾನ ಘಟಿಸಲಿದೆ. ವರ್ಷದಲ್ಲಿ 2 ದಿನ ಮಾತ್ರ ಇಂತಹ ಕೌತುಕ ನಡೆಯಲಿದ್ದು ನಮ್ಮ ನೆರಳಿನ ಮೇಲೆ ನಾವು ನಿಂತಿರುವುದರಿಂದ ನಮ್ಮ ನೆರಳು ನೇರವಾಗಿ ನಮ್ಮ ಕಾಲ ಕೆಳಗಿರುತ್ತದೆ. ಯಾವುದೇ ಲಂಬ ವಸ್ತುವಿನ ನೆರಳು ಕಾಣಿಸುವುದಿಲ್ಲ. ವಿಶೇಷ ಉಪಕರಣಗಳಿಲ್ಲದೇ ಇದನ್ನು ವೀಕ್ಷಿಸಬಹುದಾಗಿದೆ.

ಇದನ್ನು ಓದಿ: ಮನೆ ಬಾಡಿಗೆಯಲ್ಲಿ ಭಾರೀ ಏರಿಕೆ: ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ!

ಶೂನ್ಯ ನೆರಳು ಎಂಬುದು ಅಪರೂಪವಾದ ಖಗೋಳ ವಿದ್ಯಮಾನವಾಗಿದ್ದು ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ಒಳಗೆ ಬರುವ ಯಾವುದೇ ವ್ಯಕ್ತಿ ಹಾಗೂ ವಸ್ತುವಿನ ನೆರಳು ಮೂಡುವುದಿಲ್ಲ. ಏಪ್ರಿಲ್ 25 ರಂದು ಶೂನ್ಯ ನೆರಳನ್ನು ಕಾಣಬಹುದಾಗಿದ್ದು, ಒಂದೊಂದು ಜಿಲ್ಲೆಯಲ್ಲಿ ಒಂದೆರಡು ದಿವಸ ಹಿಂದೆ - ಮುಂದೆ ಈ ವಿದ್ಯಮಾನ ಸಂಭವಿಸಲಿದೆ.
‘ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಸೂರ್ಯ ಎತ್ತರದಲ್ಲಿದ್ದು ಉತ್ತರಕ್ಕೆ ಚಲಿಸುತ್ತಿರುತ್ತಾನೆ. ಇದರಿಂದಾಗಿ ನಮ್ಮ ನೆತ್ತಿಯ ಮೇಲೆ ಸೂರ್ಯ ಬಂದಾಗ ಶೂನ್ಯ ನೆರಳು ಉಂಟಾಗುತ್ತದೆ. ಬರೀ ಕಣ್ಣಿನಿಂದಲೇ ಇದನ್ನು ವೀಕ್ಷಿಸಬಹುದು’ ಎಂದು ರಾಜ್ಯ ವಿಜ್ಞಾನ ಪರಿಷತ್‌ ಖಜಾಂಚಿಯೂ ಆಗಿರುವ ಹವ್ಯಾಸಿ ಖಗೋಳ ವೀಕ್ಷಕ ಚಿತ್ರದುರ್ಗದ ಎಚ್‌.ಎಸ್‌.ಟಿ.ಸ್ವಾಮಿ ತಿಳಿಸಿದ್ದಾರೆ.

ಇಂದು ಶೂನ್ಯ ನೆರಳು ದಿನ ವಿದ್ಯಮಾನ ಹಿನ್ನೆಲೆ, ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ವಿದ್ಯಮಾನವನ್ನು ಸಂಭ್ರಮಿಸಲಿದೆ. ನಮ್ಮ ಕೋರಮಂಗಲ ಕ್ಯಾಂಪಸ್‌ನಲ್ಲಿ ಏಪ್ರಿಲ್ 25 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಝೀರೋ ಶ್ಯಾಡೋ ಡೇ #ZSD ಆಚರಿಸಲು ಬನ್ನಿ. ಸೂರ್ಯನು ನೇರವಾಗಿ 12:17 ಕ್ಕೆ ತಲೆಯ ಮೇಲಿರುತ್ತಾನೆ" ಎಂದು IIA ಟ್ವೀಟ್ ಮಾಡಿದೆ.

ಇದನ್ನೂ ಓದಿ: ಬೆಂಗಳೂರು: ಮೆಟ್ರೋ ಕ್ಯೂಆರ್‌ ಟಿಕೆಟ್‌ ಬಳಕೆ ಮೂರು ಪಟ್ಟು ಹೆಚ್ಚಳ..!

ಶೂನ್ಯ ನೆರಳು ದಿನ ಎಂದರೇನು?
ಶೂನ್ಯ ನೆರಳು ದಿನವು +23.5 ಮತ್ತು -23.5 ಡಿಗ್ರಿ ಲ್ಯಾಟಿಟ್ಯೂಡ್‌ ನಡುವಿನ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುವ ವಿಶೇಷ ಆಕಾಶ ಘಟನೆಯಾಗಿದೆ. ಈ ಸಮಯದಲ್ಲಿ, ಸೂರ್ಯನು ಆಕಾಶದಲ್ಲಿ ಅತ್ಯುನ್ನತ ಹಂತದಲ್ಲಿದ್ದಾಗ ಯಾವುದೇ ವಸ್ತು ಅಥವಾ ಜೀವಿಗಳ ನೆರಳುಗಳು ಕಂಡುಬರುವುದಿಲ್ಲ. ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ (ASI) ಪ್ರಕಾರ, ಸೂರ್ಯನು ವಸ್ತುವಿನ ಮೇಲೆ ನಿಖರವಾಗಿ ಉತ್ತುಂಗ ಸ್ಥಾನದಲ್ಲಿದ್ದಾಗ ಅದರ ನೆರಳು ಬೀಳುವುದಿಲ್ಲ.

"+23.5 ಮತ್ತು -23.5 ಡಿಗ್ರಿ ಲ್ಯಾಟಿಟ್ಯೂಡ್‌ ನಡುವೆ ವಾಸಿಸುವ ಜನರಿಗೆ, ಸೂರ್ಯನ declination ಆ ಲ್ಯಾಟಿಟ್ಯೂಡ್‌ಗೆ ಎರಡು ಬಾರಿ - ಅಂದರೆ ಒಮ್ಮೆ ಉತ್ತರಾಯಣದಲ್ಲಿ ಮತ್ತು ಒಮ್ಮೆ ದಕ್ಷಿಣಾಯಣದ ಸಮಯದಲ್ಲಿ ಸಮನಾಗಿರುತ್ತದೆ. ಈ ಎರಡು ದಿನಗಳಲ್ಲಿ, ಸೂರ್ಯನು ಮಧ್ಯಾಹ್ನದ ಸಮಯದಲ್ಲಿ ನಿಖರವಾಗಿ ಮೇಲಕ್ಕೆ ಬರುತ್ತಾನೆ ಮತ್ತು ನೆಲದ ಮೇಲಿರುವ ವಸ್ತುವಿನ ನೆರಳನ್ನು ಬಿತ್ತರಿಸುವುದಿಲ್ಲ." ಎಂದು ASI ತನ್ನ ವೆಬ್‌ಸೈಟ್‌ನಲ್ಲಿ ಬರೆದಿದೆ.

ಇದನ್ನೂ ಓದಿ: ಮತದಾನ ಹೆಚ್ಚಿಸಲು ತಂತ್ರ: ಚುನಾವಣಾ ಕಚೇರಿಗೆ ವರ್ಣರಂಜಿತ ಮೇಕ್ ಓವರ್ ನೀಡಿದ ಮಂಗಳಮುಖಿಯರು