Asianet Suvarna News Asianet Suvarna News

'ಇನ್ನು ಕೇವಲ ಹತ್ತೇ ವರ್ಷದಲ್ಲಿ ಬೆಂಗ್ಳೂರಿನ ಜನಸಂಖ್ಯೆ 2.50 ಕೋಟಿಗೆ ತಲುಪಲಿದೆ'

ಬೆಂಗಳೂರಿನಂತಹ ಬೃಹತ್‌ ನಗರಗಳಲ್ಲಿ ಜನರ ಆರೊಗ್ಯವನ್ನು ಕಾಪಾಡಬೇಕೆಂದರೆ ಸರಿಯಾದ ನೀತಿ ಮತ್ತು ಆಡಳಿತಗಳು ಪ್ರಮುಖವಾಗಿವೆ ಎಂದು ಅವರು ಎಚ್ಚರಿಸಿದ ಡಾ.ತ್ರಿಲೋಕಚಂದ್ರ 

Bengaluru Population Will Reach 2.50 Crore in the Next 10 Years grg
Author
First Published Nov 17, 2022, 10:30 PM IST

ಬೆಂಗಳೂರು(ನ.17):  ಈಗ 1.30 ಕೋಟಿ ಇರುವ ನಗರದ ಜನಸಂಖ್ಯೆಯು ಮುಂದಿನ ಹತ್ತು ವರ್ಷಗಳಲ್ಲಿ 2.50 ಕೋಟಿ ತಲುಪಲಿದೆ. ಅವೈಜ್ಞಾನಿಕ ನಗರೀಕರಣ ಮತ್ತು ಅತಿಕ್ರಮಣಗಳಿಂದಾಗಿ ನಮ್ಮ ಮುಂದೆ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳು ಬೃಹದಾಕಾರವಾಗಿವೆ. ಇವುಗಳನ್ನು ಬಗೆಹರಿಸಲು ನಿರಂತರ ನಿಗಾ ವ್ಯವಸ್ಥೆ ಇರಬೇಕಾದ ಜರೂರಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ಹೇಳಿದ್ದಾರೆ. ಬೆಂಗಳೂರು ತಂತ್ರಜ್ಞಾನ ಸಮಾವೇಶದ ಎರಡನೇ ದಿನವಾದ ಇಂದು(ಗುರುವಾರ) ಅವರು 'ಒನ್‌ ಹೆಲ್ತ್ ಮತ್ತು ಸಾಂಕ್ರಾಮಿಕಗಳ ತಡೆ' ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಜನರು ಬೇರೆ ಬೇರೆ ಕಾರಣಗಳಿಂದ ನಗರಗಳತ್ತ ವಲಸೆ ಬರುತ್ತಲೇ ಇದ್ದಾರೆ. ಆದರೆ, ನಮ್ಮ ನಗರಗಳ ಧಾರಣಾಶಕ್ತಿ ಬರಿದಾಗಿದೆ. ಬೆಂಗಳೂರಿನಂತಹ ಬೃಹತ್‌ ನಗರಗಳಲ್ಲಿ ಜನರ ಆರೊಗ್ಯವನ್ನು ಕಾಪಾಡಬೇಕೆಂದರೆ ಸರಿಯಾದ ನೀತಿ ಮತ್ತು ಆಡಳಿತಗಳು ಪ್ರಮುಖವಾಗಿವೆ ಎಂದು ಅವರು ಎಚ್ಚರಿಸಿದರು.

2023ರಲ್ಲಿ ಚೀನಾ ಹಿಂದಿಕ್ಕಿ ನಂ. 1 ಜನಸಂಖ್ಯಾ ದೇಶವಾಗಲಿದೆ ಭಾರತ..!

ಆರೋಗ್ಯ ಎಂದರೆ ಕೇವಲ ಮನುಷ್ಯಕೇಂದ್ರಿತವಲ್ಲ. ನಾವು ಇದರಲ್ಲಿ ಪರಿಸರ, ಪ್ರಾಣಿ ಮತ್ತು ಅರಣ್ಯಗಳನ್ನು ಕೂಡ ಒಳಗೊಳ್ಳಬೇಕು.ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯ ಸೇರಿದಂತೆ ಹಲವು ಪ್ರಾಣಿಜನ್ಯ ರೋಗಗಳನ್ನು ಎದುರಿಸುತ್ತಿದ್ದೇವೆ. ಒಟ್ಟಾರೆಯಾಗಿ, ಹೀಗೆ ಪ್ರಾಣಿಗಳಿಂದ ಹಬ್ಬುವ ರೋಗಗಳ ಪ್ರಮಾಣ ಶೇ.75ರಷ್ಟಿದ್ದು, ಇದು ಕಳವಳಕಾರಿಯಾಗಿದೆ ಎಂದು ಅವರು ವಿವರಿಸಿದರು.

ನಮ್ಮ ನಗರಗಳಲ್ಲಿ ತ್ಯಾಜ್ಯ, ಮಾಲಿನ್ಯ, ಧೂಳು, ಇಂಗಾಲದ ಕಾರುವಿಕೆ ಎಲ್ಲವೂ ಅಂಕೆ ಮೀರಿವೆ. ಇವುಗಳನ್ನು ಬಗೆಹರಿಸಲು ಎಷ್ಟೇ ಪ್ರಯತ್ನಪಟ್ಟರೂ ಅವು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇವು ಬಗೆಹರಿಯಬೇಕೆಂದರೆ ವಾರ್ಡ್ ಮತ್ತು ಸಮುದಾಯಗಳ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದೆ ಹೋದರೆ ನಾವು ದುಷ್ಪರಿಣಾಮಗಳಿಗೆ ಒಳಗಾಗಬೇಕಾಗುತ್ತದೆ ಎಂದು ಅವರು ನುಡಿದರು.

ಇದೇ ಗೋಷ್ಠಿಯಲ್ಲಿ ಮಾತನಾಡಿದ ಡಾ.ಫರಾ ಇಷ್ತಿಯಾಕ್‌ ಅವರು, "ನಮ್ಮಲ್ಲಿರುವ ನಗರೀಕರಣದ ಸ್ವರೂಪವೇ ಹಲವು ಸಮಸ್ಯೆಗಳ ಮೂಲವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಆಧಾರದ ಮೇಲೆ ನಗರೀಕರಣದ ಸ್ವರೂಪವನ್ನೇ ಆಮೂಲಾಗ್ರವಾಗಿ ಬದಲಿಸಿಕೊಳ್ಳಬೇಕಾದ ತುರ್ತು ನಮ್ಮ ಎದುರಿಗಿದೆ. ಮುಖ್ಯವಾಗಿ ಎಲ್ಲ ನಗರಗಳಲ್ಲೂ ಅಲ್ಲಿರುವ ಕೆರೆಕಟ್ಟೆ ಮತ್ತು ಇನ್ನಿತರ ನೀರಿನ ಮೂಲಗಳನ್ನು ಸುಸ್ಥಿತಿಯಲ್ಲಿ ಸಂರಕ್ಷಿಸಿಕೊಳ್ಳಬೇಕು" ಎಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಡಾ.ಪರಮೇಶ್‌, ಡಾ.ವರ್ಷಾ ಶ್ರೀಧರ್‍‌ ಮತ್ತು ಡಾ.ಸಿಂಧೂರ ಗಣಪತಿ ಕೂಡ ತಮ್ಮ ವಿಚಾರಗಳನ್ನು ಮಂಡಿಸಿದರು.
 

Follow Us:
Download App:
  • android
  • ios