ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದ ಆಯುಕ್ತರು : ಮೆಚ್ಚುಗೆ
ಬೆಂಗಳೂರಿನ ಖಾಸಗಿ ಶಾಲೆಗಳಿಗೆ ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಗೆ ಸಹಸ್ರಾರು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು (ಜ.31) : ಇತ್ತೀಚಿಗೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿಗಳಿಗೆ ಬಿಸಿ ಮುಟ್ಟಿಸಿದ್ದ ನಗರ ಪೊಲೀಸ್ ಆಯುಕ್ತ ಎಸ್.ಭಾಸ್ಕರ್ ರಾವ್ ಅವರು, ಈಗ ಕುರಿ ಮಂದೆಯಂತೆ ಮಕ್ಕಳನ್ನು ಕರೆದೊಯ್ಯುವ ಖಾಸಗಿ ಶಾಲಾ ವಾಹನಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸುವ ಶಾಲಾ ವಾಹನಗಳ ಮೇಲೆ ಕ್ರಮ ಜರುಗಿಸಿದರೆ ಪೊಲೀಸರನ್ನು ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರು ದೂರುತ್ತಾರೆ. ಚಾಲಕ ಸೇರಿ ಐದು ಮಂದಿ ಕುಳಿತುಕೊಳ್ಳುವ ಕಾರಿನಲ್ಲಿ 15 ಮಕ್ಕಳು ಹೇಗೆ ಕೂರಲು ಸಾಧ್ಯ. ಕಾರುಗಳ ಸಿಲಿಂಡರ್ ಮೇಲೆ ಮಕ್ಕಳು ಕೂರುತ್ತಾರೆ. ಅನಾಹುತಗಳು ನಡೆದರೆ ಯಾರು ಹೊಣೆಯಾಗುತ್ತಾರೆ.
3 ಲಕ್ಷ ಬಾಂಗ್ಲಾದೇಶಿಗಳು ಬೆಂಗಳೂರಿನಲ್ಲಿದ್ದಾರೆ; ಸಾಕ್ಷ್ಯ ಕೊಟ್ಟ ಭಾಸ್ಕರ್ ರಾವ್
ಇದಕ್ಕೆ ಮೂವರು ಕಾರಣ ಎಂದು ಆಯುಕ್ತರು ಟ್ವೀಟ್ ಮಾಡಿ ಸಿಟ್ಟು ಹೊರ ಹಾಕಿದ್ದಾರೆ. ಅಲ್ಲದೆ, ಇದೇ ರೀತಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ಈ ಟ್ವಿಟ್ಗೆ ಸಹಸ್ರಾರು ಮಂದಿ ಲೈಕ್ ಮಾಡಿದ್ದಾರೆ. ಹಲವು ಜನರು ಶೇರ್ ಮಾಡಿದ್ದಾರೆ. ಅಲ್ಲದೆ, ಮಕ್ಕಳನ್ನು ಕುರಿಗಳ ರೀತಿ ತುಂಬಿಕೊಂಡು ಹೋಗುವ ಶಾಲಾ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ಕೆಲವರು ಪೋಷಕರನ್ನು ಸಹ ತಪ್ಪಿತಸ್ಥರನ್ನಾಗಿಸಿ ಎಂದೂ ಸಹ ಆಗ್ರಹಿಸಿದ್ದಾರೆ.