ಬೆಂಗಳೂರಿನ ಪುಲಕೇಶಿನಗರದಲ್ಲಿ, ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕೆ ಒಡಿಶಾ ಮೂಲದ ಯುವತಿ ಮತ್ತು ಆಕೆಯ ಸ್ನೇಹಿತೆಯ ಮೇಲೆ ಜುಹೇದ್ ಎಂಬಾತ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು: ಹಿಂದೂ ಯುವತಿ ಮದುವೆ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಪುಲಕೇಶಿನಗರ ಪೊಲೀಸರು ಜುಹೇದ್ (30) ಎಂಬಾತನನ್ನು ಬಂಧಿಸಿದ್ದಾರೆ. ಒಡಿಶಾ ಮೂಲದ ಯುವತಿ ಹಾಗೂ ಆಕೆಯ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಿದ ಆರೋಪ ಇದ್ದು ಈತನ ಮೇಲೆ ದೂರು ದಾಖಲಿಸಲಾಗಿದೆ.

ದೂರುದಾರ ಯುವತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾಳೆ. ಆಕೆ ತನ್ನ ಸ್ನೇಹಿತೆಯೊಂದಿಗೆ ಪುಲಕೇಶಿನಗರ ಪ್ರದೇಶದಲ್ಲಿ ವಾಸವಾಗಿದ್ದಳು. ಇದೇ ವೇಳೆ ಆರೋಪಿ ಜುಹೇದ್ ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿದ್ದನು. ಕೆಲವು ವರ್ಷಗಳ ಹಿಂದೆ ಒಂದೇ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಇವರಿಬ್ಬರಿಗೂ ಪರಿಚಯವಾಗಿತ್ತು.

ಮದುವೆಯಾಗುವಂತೆ ಒತ್ತಾಯ ಒಪ್ಪದ್ದಕ್ಕೆ ಹಲ್ಲೆ

ಆ ಪರಿಚಯದ ಬಳಿಕ ಜುಹೇದ್, 2024ರಿಂದ ಯುವತಿಯ ಹಿಂದೆ ಬಿದ್ದು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದನೆಂದು ಯುವತಿ ಆರೋಪಿಸಿದ್ದು, ನನ್ನ ಬಳಿ ಅದಕ್ಕೆ ಸಾಕ್ಷಿ ಇದೆ ಎಂದು ವಿಡಿಯೋ ಬಿಡುಗಡೆ ಮಾಡಿ ಆರೋಪಿಸಿದ್ದಾಳೆ. ಯಾವಾಗ ಜುಹೇದ್‌ ನನ್ನು ಮದುವೆಯಾಗಲು ನಿರಾಕರಿಸಿದಳೋ ಅಂದಿನಿಂದ ಆಕೆಗೆ ಪ್ರಾಣ ಬೆದರಿಕೆ ಹಾಕುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸ್ನೇಹಿತೆ ಮೇಲೂ ಹಲ್ಲೆ ನಡೆಸಿದ ಆರೋಪಿ

ಇತ್ತೀಚೆಗೆ ಆರೋಪಿ ತನ್ನ ಡಿಪಿಯಲ್ಲಿ ಕೂಡ ಯುವತಿಯ ಫೋಟೋವನ್ನು ಹಾಕಿಕೊಂಡಿದ್ದನಂತೆ. ಇದನ್ನು ಪ್ರಶ್ನಿಸಲು ಮಂಗಳವಾರ ಯುವತಿ ತನ್ನ ಸ್ನೇಹಿತೆಯೊಂದಿಗೆ ಆರೋಪಿ ಮನೆಯ ಬಳಿ ತೆರಳಿದ್ದಳು. ಈ ವೇಳೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿ, ಆರೋಪಿ ಇಬ್ಬರ ಮೇಲೂ ಥಳಿಸಿ ರಕ್ತ ಬರುವಂತೆ ಹೊಡೆದಿದ್ದಾನೆ.

ಈ ಸಂಬಂಧ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪುಲಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ಆರೋಪಿ ಜುಹೇದ್ ಅನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿಸಲಾಗಿದೆ. ಈ ಘಟನೆ ನಗರದಲ್ಲಿ ಮಹಿಳೆಯರ ಮೇಲಿನ ಹಲ್ಲೆಗಳ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿ ಹೆಚ್ಚಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.