ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ, ಭಾವಿ ಪತ್ನಿಯ ಮೇಲೆ ಅನುಮಾನಗೊಂಡ ಶಬೀಲ್ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ನಿಶ್ಚಿತಾರ್ಥವಾಗಿದ್ದ ಅಪ್ರಾಪ್ತೆಯನ್ನು ಪಾಳುಬಿದ್ದ ಮನೆಗೆ ಕರೆಸಿ ಕತ್ತು ಸೀಳಿ ಹತ್ಯೆಗೈದು ರಾಜಸ್ಥಾನಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅಜ್ಮೀರ್ನಲ್ಲಿ ಬಂಧಿಸಿದ್ದಾರೆ.
ಬೆಂಗಳೂರು (ಮಾ.22): ಸಿಲಿಕಾನ್ ಸಿಟಿಯ ಡಿಜೆ ಹಳ್ಳಿಯಲ್ಲಿ ಕಳೆದ ಗುರುವಾರ ನಡೆದಿದ್ದ ಅಪ್ರಾಪ್ತ ಬಾಲಕಿಯ ಭೀಕರ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನನ್ನೇ ಮದುವೆಯಾಗಬೇಕಿದ್ದ ಭಾವಿ ಪತ್ನಿಯ ಮೇಲೆ ಅನುಮಾನಗೊಂಡ ಆರೋಪಿ ಶಬೀಲ್, ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು. ತಲೆಮರೆಸಿಕೊಂಡಿದ್ದ ಈ ಹಂತಕನನ್ನು ಬೆಂಗಳೂರು ಪೊಲೀಸರು ರಾಜಸ್ಥಾನದ ಅಜ್ಮೀರ್ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಘಟನೆ?
ಮೂಲತಃ ಕೋಲಾರ ಜಿಲ್ಲೆಯವಳಾದ ಅಪ್ರಾಪ್ತ ಬಾಲಕಿ, ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. 2025ರ ಜೂನ್ ತಿಂಗಳಲ್ಲಿ ಈ ಬಾಲಕಿಯ ಜೊತೆ ಆರೋಪಿ ಶಾಬೀಲ್ನ ನಿಶ್ಚಿತಾರ್ಥ (ಎಂಗೇಜ್ಮೆಂಟ್) ನಡೆದಿತ್ತು. ಮನೆಯವರ ಸಮ್ಮತಿಯ ಮೇರೆಗೆ ಮದುವೆಯೂ ನಿಶ್ಚಯವಾಗಿತ್ತು.
ಅನುಮಾನವೇ ಮುಳುವಾಯಿತು!
ನಿಶ್ಚಿತಾರ್ಥದ ನಂತರ ಶಾಬೀಲ್ಗೆ ಬಾಲಕಿಯ ಮೇಲೆ ಅನುಮಾನ ಶುರುವಾಗಿತ್ತು. ಅವಳು ಬೇರೆಯವರ ಜೊತೆ ಸಂಪರ್ಕದಲ್ಲಿದ್ದಾಳೆ ಎಂದು ಶಂಕಿಸುತ್ತಿದ್ದ ಶಾಬೀಲ್, ಅವಳನ್ನು ಮುಗಿಸಲು ಸಂಚು ರೂಪಿಸಿದ್ದನು. ಕಳೆದ ಗುರುವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಮನೆಯವರಿಗೆ ತಿಳಿಯದಂತೆ ಬಾಲಕಿಯನ್ನು ಡಿಜೆ ಹಳ್ಳಿಯ ಸಕ್ಕರೆ ಮಂಡಿ ಬಳಿಯ ಪಾಳುಬಿದ್ದ ಮನೆಗೆ ಕರೆಸಿಕೊಂಡಿದ್ದನು. ಬಾಲಕಿ ತನ್ನ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಆತನನ್ನು ಭೇಟಿಯಾಗಲು ಹೋಗಿದ್ದಳು.
ಕ್ರೌರ್ಯದ ಪರಾಕಾಷ್ಠೆ: ಕತ್ತು ಸೀಳಿ ಹತ್ಯೆ
ಪಾಳುಬಿದ್ದ ಮನೆಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಶಾಬೀಲ್ ತನ್ನ ಬಳಿಯಿದ್ದ ಚಾಕುವಿನಿಂದ ಬಾಲಕಿಯ ಎದೆಯ ಭಾಗ ಮತ್ತು ಗುಪ್ತಾಂಗಕ್ಕೆ ಮನಬಂದಂತೆ ಇರಿದಿದ್ದಾನೆ. ನೋವಿನಿಂದ ಆಕೆ ಕಿರುಚಾಡದಂತೆ ಬಾಯಿಯನ್ನು ಗಟ್ಟಿಯಾಗಿ ಒತ್ತಿ ಹಿಡಿದು, ಬಳಿಕ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಾಲಕಿ ಪ್ರಾಣ ಬಿಟ್ಟ ನಂತರ ಆರೋಪಿ ಅಲ್ಲಿಂದ ಪರಾರಿಯಾಗಿದ್ದನು.
ಪತ್ತೆಯಾಗಿದ್ದು ಹೇಗೆ?
ಬಾಲಕಿ ಬಹಳ ಹೊತ್ತಾದರೂ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಶಾಬೀಲ್ಗೆ ಕರೆ ಮಾಡಲು ಯತ್ನಿಸಿದ್ದಾರೆ. ಆದರೆ ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಶಾಬೀಲ್ ಕುಟುಂಬಸ್ಥರನ್ನು ವಿಚಾರಿಸಿದಾಗ ಅವರು ಇಬ್ಬರು ಭೇಟಿಯಾಗುತ್ತಿದ್ದ ಪಾಳುಬಿದ್ದ ಮನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲಿ ಹೋಗಿ ನೋಡಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಅಜ್ಮೀರ್ನಲ್ಲಿ ಆರೋಪಿ ಅರೆಸ್ಟ್
ಪ್ರಕರಣ ದಾಖಲಿಸಿಕೊಂಡ ಡಿಜೆ ಹಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಆರೋಪಿ ಶಾಬೀಲ್ ರಾಜಸ್ಥಾನಕ್ಕೆ ಓಡಿಹೋಗಿರುವ ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ಪೊಲೀಸರು ಅಜ್ಮೀರ್ನಲ್ಲಿ ಆತನನ್ನು ಸೆರೆಹಿಡಿದಿದ್ದಾರೆ. ಸದ್ಯ ಆರೋಪಿಯನ್ನು ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.


