ಬೆಂಗಳೂರು ನಗರ ಜಿಲ್ಲಾಡಳಿತವು ನಗರದಾದ್ಯಂತ ಬೃಹತ್ ಕಾರ್ಯಾಚರಣೆ ನಡೆಸಿ, ಒತ್ತುವರಿಯಾಗಿದ್ದ 8.04 ಎಕರೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದಿದೆ. ಈ ಜಮೀನಿನ ಒಟ್ಟು ಮೌಲ್ಯ 27.72 ಕೋಟಿ ರೂಪಾಯಿಗಳಾಗಿದ್ದು, ಪೂರ್ವ, ಆನೇಕಲ್, ದಕ್ಷಿಣ, ಯಲಹಂಕ ಮತ್ತು ಉತ್ತರ ತಾಲೂಕುಗಳಲ್ಲಿ ಈ ತೆರವು ಕಾರ್ಯಾಚರಣೆ ನಡೆದಿದೆ.

ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 27.72 ಕೋಟಿ ರು. ಮೌಲ್ಯದ 8.04 ಎಕರೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಡಳಿತ ತೆರವುಗೊಳಿಸಿ ವಶಕ್ಕೆ ಪಡೆದಿದೆ.

ಒತ್ತುವರಿಯಾಗಿದ್ದ ಗೋಮಾಳ, ಸರ್ಕಾರಿ ಖರಾಬು ಕೆರೆ, ಮುಪತ್ತು ಕಾವಲ್, ಸರ್ಕಾರಿ ಬಂಜರು, ಖರಾಬು ತೋಪು, ಹದ್ದುಗಿಡದಹಳ್ಳ, ಇನಾಂತಿ ಜಮೀನು ಹಾಗೂ ಗುಂಡುತೋಪು ಜಾಗಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.

ಎಲ್ಲೆಲ್ಲಿ ಅಕ್ರಮ ತೆರವು?

ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಖಾಜಿಸೊಣ್ಣೇನಹಳ್ಳಿಯಲ್ಲಿ 6 ಕೋಟಿ ರು. ಮೌಲ್ಯದ 1.30 ಎಕರೆ ಗೋಮಾಳ, ಕಣ್ಣೂರಲ್ಲಿ 2 ಕೋಟಿ ರು. ಮೌಲ್ಯದ 22 ಗುಂಟೆ ಗೋಮಾಳ, ಆನೇಕಲ್ ತಾಲೂಕಿನ ಎಸ್. ಬಿಂಗೀಪುರದಲ್ಲಿ 9 ಕೋಟಿ ರು. ಮೌಲ್ಯದ 1.20 ಗುಂಟೆ ಖರಾಬು ಕೆರೆ, ಸರ್ಜಾಪುರದಲ್ಲಿ 45 ಲಕ್ಷ ರು. ಮೌಲ್ಯದ 13 ಗುಂಟೆ ಮುಪತ್ತು ಕಾವಲ್ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ದಕ್ಷಿಣ ತಾಲೂಕಿನಲ್ಲಿಯೂ ತೆರವು ಕಾರ್ಯಾಚರಣೆ

ಬೆಂಗಳೂರು ದಕ್ಷಿಣ ತಾಲೂಕಿನ ಶೇಷಗಿರಿಪುರಲ್ಲಿ 15 ಲಕ್ಷ ರು. ಮೌಲ್ಯದ 20 ಗುಂಟೆ ಸರ್ಕಾರಿ ಬಂಜರು, ಯಲಹಂಕ ತಾಲೂಕಿನ ಬಾಗಲೂರಿನಲ್ಲಿ 4 ಕೋಟಿ ರು. ಮೌಲ್ಯದ 1 ಎಕರೆ ಖರಾಬ್ ತೋಪು, ಇಟ್ಟಗಲಾಪುರದಲ್ಲಿ 65 ಲಕ್ಷ ರು. ಮೌಲ್ಯದ 32 ಗುಂಟೆ ಹದ್ದುಗಿಡದಹಳ್ಳ, ಉತ್ತರ ತಾಲೂಕಿನ ದಾಸನಪುರ ಬೈಯಂಡಹಳ್ಳಿ ಗ್ರಾಮದಲ್ಲಿ 5 ಕೋಟಿ ರು. ಮೌಲ್ಯದ 1.03 ಎಕರೆ ಇನಾಂತಿ ಜಮೀನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.