ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನಿಂದ 47 ಜೀವಂತ ಆಮೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಪ್ರಾಣಿಗಳಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳು ಸೇರಿದ್ದು, ವನ್ಯಜೀವಿ ಕಳ್ಳಸಾಗಾಣಿಕೆ ಜಾಲದ ಭಾಗವಾಗಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಿದೇಶದಿಂದ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದ್ದ 47 ಜೀವಂತ ಆಮೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಸಂಬಂಧ ಬ್ಯಾಕಾಂಕ್‌ನಿಂದ ಬಂದಿಳಿದ ಪ್ರಯಾಣಿಕನನ್ನು ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

ವರದಿ ಪ್ರಕಾರ, ಕಸ್ಟಮ್ಸ್ ಅಧಿಕಾರಿಗಳು ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ, ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ವೇಳೆ ವಿವಿಧ ಜಾತಿಯ ಆಮೆಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಪ್ರಾಣಿಗಳಲ್ಲಿ ರೆಡ್ ಫೂಟೆಡ್ ಆಮೆ, ಆಫ್ರಿಕನ್ ಸ್ಪರ್‌ಡ್ ಆಮೆ, ಅರ್ಜೆಂಟೀನಾದ ಕಪ್ಪು-ಬಿಳಿ ಟೆಗು ಹಾಗೂ ಗೋಯಲ್ಡಿಯ ಮಾರ್ಮೊಸೆಟ್ ಸೇರಿದಂತೆ ಅಪರೂಪದ ಜಾತಿಗಳು ಸೇರಿವೆ.

ಕಳ್ಳ ಸಾಗಾಣಿಕೆ ದಂಧೆ

ಈ ಪ್ರಾಣಿಗಳನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಯತ್ನಿಸಲಾಗುತ್ತಿದ್ದು, ಕಳ್ಳ ಸಾಗಾಣಿಕೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕೆಲವರು ಆಮೆಗಳು ಅದೃಷ್ಟ ತರಲಿವೆ ಎಂಬ ನಂಬಿಕೆಯನ್ನು ಬಳಸಿಕೊಂಡು ಜನರಿಗೆ ಮಾರಾಟ ಮಾಡುವುದರಿಂದ ಇಂತಹ ಅಕ್ರಮ ದಂಧೆಗಳು ಹೆಚ್ಚಾಗುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಳಿವಿನಂಚಿನಲ್ಲಿರುವ ಅಮೆಗಳೂ ಸೇರಿವೆ

ವಶಪಡಿಸಿಕೊಂಡ ಕೆಲವು ಪ್ರಭೇದಗಳು ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಸೇರಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂರಕ್ಷಣೆಗೊಳಪಡಿಸಿರುವ “CITES” (Convention on International Trade in Endangered Species) ಅನುಬಂಧ-II ಅಡಿಯಲ್ಲಿ ಪಟ್ಟಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಕಾಯ್ದೆ 1962ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ ಪ್ರಯಾಣಿಕನನ್ನು ಮುಂದಿನ ಕ್ರಮಕ್ಕಾಗಿ ವನ್ಯಜೀವಿ (ರಕ್ಷಣೆ) ಕಾಯ್ದೆ 1972ರಡಿ ಬೆಂಗಳೂರು ಗ್ರಾಮಾಂತರ ವಲಯದ ಅರಣ್ಯಾಧಿಕಾರಿ (RFO) ಅವರಿಗೆ ಹಸ್ತಾಂತರಿಸಲಾಗಿದೆ.

ಈ ಕಾರ್ಯಾಚರಣೆಯ ಮೂಲಕ ಮತ್ತೊಂದು ದೊಡ್ಡ ಮಟ್ಟದ ವನ್ಯಜೀವಿ ಕಳ್ಳ ಸಾಗಾಣಿಕೆ ಯತ್ನವನ್ನು ವಿಫಲಗೊಳಿಸಿದ ಕಸ್ಟಮ್ಸ್ ಅಧಿಕಾರಿಗಳು, ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.