ಮಂಡ್ಯದಲ್ಲಿ ಅಂಗವಿಕಲರ ರಿಯಾಯ್ತಿ ಬಸ್ ಪಾಸ್ ದುರುಪಯೋಗಪಡಿಸಿಕೊಂಡ ಸರ್ಕಾರಿ ನೌಕರೊಬ್ಬರಿಗೆ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ವಂಚನೆ ಪ್ರಕರಣದಲ್ಲಿ ದೋಷಿ ಎಂದು ಸಾಬೀ ಹಿನ್ನೆತುಲೆಯಲ್ಲಿ, 10 ಸಾವಿರ ರೂ. ದಂಡ ಮತ್ತು ಸಾರಿಗೆ ನಿಗಮಕ್ಕೆ 47 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ.
ಮಂಡ್ಯ (ಮೇ.19): ಅಂಗವಿಕಲರ ರಿಯಾಯ್ತಿ ದರದ ಪಾಸನ್ನು ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಮಹಿಳಾ ನೌಕರರೊಬ್ಬರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ದಂಡ ವಿಧಿಸಿರುವ ನ್ಯಾಯಾಲಯ ಸಾರಿಗೆ ನಿಗಮದವರಿಗೆ 47 ಸಾವಿರ ರು. ಪರಿಹಾರ ನೀಡುವಂತೆ ಆದೇಶಿಸಿದೆ.

ಮದ್ದೂರು ತಾಲೂಕು ಎರಗನಹಳ್ಳಿ ಗ್ರಾಮದ ಎ.ಶ್ರುತಿ (47) ಶಿಕ್ಷೆಗೊಳಗಾದ ಸರ್ಕಾರಿ ಮಹಿಳಾ ನೌಕರೆ. ಸರ್ಕಾರಿ ನೌಕರರು ಅಂಗವಿಕರ ರಿಯಾಯ್ತಿ ದರದ ಬಸ್ ಪಾಸ್ ಸೌಲಭ್ಯ ಪಡೆಯಲು ಅರ್ಹರಿಲ್ಲದಿದ್ದರೂ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನೀಡುವ ಅಂಗವಿಕಲರ ರಿಯಾಯ್ತಿ ದರದ ಪಾಸನ್ನು ಪಡೆದುಕೊಂಡು ದುರುಪಯೋಗಪಡಿಸಿಕೊಂಡಿದ್ದರು.
ರಸ್ತೆ ಸಾರಿಗೆ ನಿಗಮದ ಮಂಡ್ಯ ಮತ್ತು ಮದ್ದೂರು ಘಟಕದಿಂದ ಅಂಗವಿಕಲರ ಬಸ್ ಪಾಸ್ ಪಡೆದು 1.1.2014ರಿಂದ 17.10.2015ರ ವರೆಗೆ ನಿಗಮದ ಬಸ್ಗಳಲ್ಲಿ ಸಂಚರಿಸಿ ನಿಗಮಕ್ಕೆ 46,640 ರು. ನಷ್ಟವುಂಟು ಮಾಡಿ ಮೋಸ ಮಾಡಿರುವ ಬಗ್ಗೆ ದೂರು ಬಂದಿತ್ತು.
ಪ್ರಕರಣ ದಾಖಲಿಸಿಕೊಂಡ ಪೂರ್ವ ಠಾಣೆ ಪೊಲೀಸರು ಕಲಂ 420 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿ ಶ್ರುತಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಸಾಕ್ಷ್ಯಧಾರಗಳನ್ನು ಪರಿಗಣಿಸಿ ನ್ಯಾಯಾಲಯವು ಆರೋಪಿ ಎ.ಶ್ರುತಿ ಕಲಂ 420 ಐಪಿಸಿ ರೀತ್ಯಾ ವಂಚನೆ ಮಾಡಿರುವುದಾಗಿ ಪರಿಗಣಿಸಿ ನ್ಯಾಯಾಧೀಶ ಜಿ.ಜೆ.ಶಿವಕುಮಾರ್ ಅವರು ಭಾರತೀಯ ದಂಡ ಸಂಹಿತೆ ಕಲಂ 420ರಡಿ ಅಪರಾಧಕ್ಕೆ 1 ವರ್ಷಗಳ ಸೆರೆಮನೆ ವಾಸ ಮತ್ತು 10 ಸಾವಿರ ರು. ದಂಡ ವಿಧಿಸಿದರು. ಜೊತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮರವರಿಗೆ 47,000 ರು. ಪರಿಹಾರ ನೀಡಬೇಕೆಂದು ತೀರ್ಪು ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಶಿವಕುಮಾರ್ ವಾದ ಮಂಡಿಸಿದ್ದರು.


