ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಂದು ಒಂದು ವರ್ಷ. ಒಂದು ವರ್ಷವಾದರೂ ಪಾಲಿಕೆ ಸದಸ್ಯರಿಗಿಲ್ಲ ಅಧಿಕಾರ ಭಾಗ್ಯ. ಕೇಕ್ ಕಟ್ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಚಾಟಿ.

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

Add Asianetnews Kannada as a Preferred SourcegooglePreferred

ಬೆಳಗಾವಿ (ಸೆ.6): ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಂದು ಇಂದಿಗೆ ಬರೋಬ್ಬರಿ ಒಂದು ವರ್ಷವಾಗಿದೆ. ಕಾರ್ಪೊರೇಟರ್‌ಗಳಾಗಿ ಆಯ್ಕೆ ಆಗಿ ಒಂದು ವರ್ಷವಾಯಿತು. ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದರೂ ಈವರೆಗೂ ಮೇಯರ್ ಉಪಮೇಯರ್ ಚುನಾವಣೆ ಆಗಿಲ್ಲ. ಇದರಿಂದಾಗಿ ಕಾರ್ಪೊರೇಟರ್‌ಗಳಿಗೆ ಅಧಿಕಾರ ಭಾಗ್ಯ ಸಿಕ್ಕಿಲ್ಲ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದು ಒಂದು ವರ್ಷವಾಗಿದೆ. ಇಂದಿಗೆ ಒಂದು ವರ್ಷದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಂದಿತ್ತು. ಗೆದ್ದ ಹುಮ್ಮಸ್ಸಿನಲ್ಲಿ ಪಾಲಿಕೆ ಸದಸ್ಯರು ಬೆಂಬಲಿಗರ ಜೊತೆ ಸಂಭ್ರಮಿಸಿದ್ದರು. 58 ವಾರ್ಡ್‌ಗಳ ಪೈಕಿ 35 ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ಸ್ಪಷ್ಟ ಬಹುಮತ ಪಡೆದ ಬಿಜೆಪಿಗೆ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ಮಾಡಲಾಗುತ್ತಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮಹಾನಗರ ಪಾಲಿಕೆಯ ಸದಸ್ಯರಿಗೆ ವರ್ಷ ಕಳೆದರೂ ಪ್ರಮಾಣ ವಚನ ಸ್ವೀಕರಿಸಲೂ ಆಗಿಲ್ಲ.

ಮೇಯರ್ ಉಪಮೇಯರ್ ಮೀಸಲಾತಿ ವಿಚಾರವಾಗಿ ಗೊಂದಲ ಮುಂದುವರಿದಿದ್ದು ಇನ್ನೂ ಚುನಾವಣೆ ನಡೀತಿಲ್ಲ‌. ಇದರಿಂದ ಬೇಸತ್ತ ಕಾಂಗ್ರೆಸ್‌, ಎಐಎಂಐಎಂ, ಎಂಇಎಸ್, ಪಕ್ಷೇತರ ಪಾಲಿಕೆ ಸದಸ್ಯರು ಇಂದು ಮಹಾನಗರ ಪಾಲಿಕೆ ಕಚೇರಿಗೆ ನುಗ್ಗಿ ಕೇಕ್ ಕಟ್ ಮಾಡಲು ಯತ್ನಿಸಿದರು. ‌ಈ ವೇಳೆ ಪೊಲೀಸರು ಮತ್ತು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಜೊತೆ ಮಾತಿನ ಚಕಮಕಿ ನಡೆಯಿತು‌.

ಕೇಕ್ ಕಟ್ ಮಾಡಿ ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ ಎಂದು ಪ್ರಶ್ನಿಸಿದ ಕಾರ್ಪೊರೇಟರ್‌ಗಳು
ಇನ್ನು ಒಂದು ವರ್ಷವಾದರೂ ಅಧಿಕಾರ ಭಾಗ್ಯ ಸಿಗದಿದ್ದಕ್ಕೆ ಮಹಾನಗರ ಪಾಲಿಕೆ ಕಾರ್ಪೊರೇಟರ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಂದು ಒಂದು ವರ್ಷವಾದರೂ ಕಾರ್ಪೊರೇಟರ್‌ಗಳಿಗೆ ಅಧಿಕಾರ ಭಾಗ್ಯ ಸಿಗದಿದ್ದಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕೇಕ್ ಕಟ್ ಮಾಡಿ ವಿನೂತನ ಪ್ರತಿಭಟನೆ‌ ನಡೆಸಿದರು‌. ದ್ವಿಚಕ್ರವಾಹನ ಮೇಲೆ ಕೇಕ್ ಇಟ್ಟು ಕಟ್ ಮಾಡಿದ ಕಾರ್ಪೊರೇಟರ್‌ಗಳು, ಪರಸ್ಪರ ಕೇಕ್ ತಿನ್ನಿಸಿ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು‌‌. 

ಯಾರಾಗಲಿದ್ದಾರೆ ಬೆಳಗಾವಿಯ ಬಿಜೆಪಿ ಮೊದಲ ಮೇಯರ್.?

ಕಾಂಗ್ರೆಸ್‌, ಎಂಇಎಸ್, ಎಐಎಂಐಎಂ, ಪಕ್ಷೇತರ ಸೇರಿ 20ಕ್ಕೂ ಹೆಚ್ಚು ಕಾರ್ಪೊರೇಟರ್‌ಗಳು ಕೇಕ್ ಕಟ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಅಧಿಕಾರ ಇಲ್ಲದೇ ಒಂದು ವರ್ಷ ಕಳೆದು ಹೋಯಿತು. ಈ ವರ್ಷವಾದರೂ ಅಧಿಕಾರ ಭಾಗ್ಯ ಸಿಗುತ್ತೆ ಅನ್ನೋದು ಗೊತ್ತಿಲ್ಲ. ಮಳೆಯಿಂದ ವಾರ್ಡ್‌ಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಜನರ ಪರದಾಡುತ್ತಿದ್ದಾರೆ. ನಮ್ಮ ವಾರ್ಡ್‌ಗಳಲ್ಲಿ ಯಾವುದೇ ಕೆಲಸ ಆಗ್ತಿಲ್ಲ,ಜನ ನಮ್ಮನ್ನ ಕೇಳುತ್ತಿದ್ದಾರೆ. ಹೀಗಾಗಿ ಕೇಕ್ ಕಟ್ ಮಾಡಿ ಮೊದಲ ವರ್ಷಾಚರಣೆ ಮಾಡುತ್ತಿದ್ದೇವೆ. ಕೆಲಸ ಅಂತೂ ಆಗುತ್ತಿಲ್ಲ ಚುನಾವಣೆ ಆರಿಸಿ ಬಂದ ಒಂದು ವರ್ಷದ ಸೆಲೆಬ್ರೇಷನ್ ಆದರೂ ಮಾಡೋಣ ಅಂತಾ ಬಂದಿದ್ದೇವೆ ಎಂದರು‌.

ಸಿಎಂ ಬೊಮ್ಮಾಯಿ ಭೇಟಿಯಾದ ಬೆಳಗಾವಿ ಪಾಲಿಕೆ ಸದಸ್ಯರು

ಅದೇನೇ ಇರಲಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಮೀಸಲಾತಿ ಗೊಂದಲ ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಲಿ. ಕಾರ್ಪೊರೇಟರ್‌ಗಳಿಗೆ ಅಧಿಕಾರ ನೀಡಿ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಇರುವ ಸಮಸ್ಯೆಗಳ ಬಗೆ ಹರಿಸಲು ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹ.