ಬೆಳಗಾವಿ ಜಿಲ್ಲೆಯ ಅರವಳ್ಳಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಪತ್ನಿ ಆತ್ಮ*ಹತ್ಯೆ ಮಾಡಿಕೊಂಡರೆ, ಆಕೆಯ ಮೃತದೇಹ ನೋಡಲು ಹೊರಟ ಪತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಮೂವರು ಮಕ್ಕಳು ಅನಾಥರಾಗಿದ್ದಾರೆ.

ಬೆಳಗಾವಿ: ಪ್ರತ್ಯೇಕ ಅವಘಡಗಳಲ್ಲಿ ಗಂಡ ಮತ್ತು ಹೆಂಡತಿ ಇಬ್ಬರು ಒಂದೇ ದಿನ ಮೃತಪಟ್ಟಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಒಂದೇ ದಿನ ಪತಿ-ಪತ್ನಿ ಅಸುನೀಗಿರುವುದು ಕುಟುಂಬಸ್ಥರು ಮತ್ತು ಗ್ರಾಮಸ್ಥರನ್ನು ದಿಗ್ಭ್ರಾಂತಗೊಳಿಸಿದೆ. ತಂದೆ-ತಾಯಿಯನ್ನು ಕಳೆದುಕೊಂಡಿರುವ ಮೃತ ದಂಪತಿಯ ಮೂವರು ಮಕ್ಕಳು ಇದೀಗ ಅನಾಥರಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Add Asianetnews Kannada as a Preferred SourcegooglePreferred

ಕರೆಪ್ಪ ಮಾದರ (36) ಹಾಗೂ ಅವರ ಪತ್ನಿ ಮಧುರಾ ಮಾದರ (30) ಮೃತಪಟ್ಟವರು. ಮಧುರಾ ಹಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಈ ನೋವು ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದ ಕಾರಣ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ. 

ಕ್ರಿಮಿನಾಶಕ ಸೇವಿಸಿದ ಪತ್ನಿ

ಚಿಕಿತ್ಸೆ ಪಡೆಯುತ್ತಿದ್ದರೂ, ನೋವು ಕಡಿಮೆಯಾಗದ ಕಾರಣಕ್ಕೆ ಬೇಸರಗೊಂಡಿದ್ದ ಮಧುರಾ ಮಾದರ ಅವರು ಕ್ರಿಮಿನಾಶಕ ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದಳು. ಮಧುರಾ ತೀವ್ರ ಅಸ್ವಸ್ಥರಾದ ಬಳಿಕ, ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ, ದುರದೃಷ್ಟವಶಾತ್ ಮಾರ್ಗ ಮಧ್ಯದಲ್ಲಿಯೇ ಅಸುನೀಗಿದ್ದಳು. ಈ ಸುದ್ದಿ ಕುಟುಂಬಕ್ಕೆ ಬರ ಸಿಡಿಲಿನಂತೆ ಬಡಿದಿದ್ದು, ಎಲ್ಲರೂ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಬಸ್‌ಗೆ ಡಿಕ್ಕಿ ಹೊಡೆದ ಬೈಕ್, ಮೂವರು ಮಕ್ಕಳು ಅನಾಥ

ಇನ್ನು, ಈ ಸುದ್ದಿ ತಿಳಿದ ಪತಿ ಕರೆಪ್ಪ ಮಾದರ ತೀವ್ರ ಆಘಾತಕ್ಕೆ ಒಳಗಾಗಿದ್ದು, ಪತ್ನಿಯನ್ನು ಕೊನೆಯ ಬಾರಿ ನೋಡುವ ಉದ್ದೇಶದಿಂದ ಬೈಕ್‌ನಲ್ಲಿ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ಅವಸರದಲ್ಲಿ ವೇಗವಾಗಿ ಬರುತ್ತಿದ್ದ ವೇಳೆ ಅವರ ಬೈಕ್ ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸ್‌ ಚಕ್ರದಡಿ ಸಿಲುಕಿ ಅಪಘಾತದ ತೀವ್ರತೆಗೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೇ ದಿನದಲ್ಲಿ ಪತಿ-ಪತ್ನಿ ಇಬ್ಬರು ಅಸುನೀಗಿದ್ದಾರೆ. ಇವರ ಸಾವಿನಿಂದ ಕುಟುಂಬ ಸಂಪೂರ್ಣವಾಗಿ ಕುಸಿದಿದೆ. ಕರೆಪ್ಪ ಮತ್ತು ಮಧುರಾ ದಂಪತಿ ಕಳೇದ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಒಂದು ಹೆಣ್ಣು ಮಗು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಈಗ ಈ ಮೂವರು ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅರವಳ್ಳಿ ಗ್ರಾಮದಲ್ಲಿ ಈ ಘಟನೆ ಶೋಕದ ವಾತಾವರಣವನ್ನುಂಟು ಮಾಡಿದೆ. ಮನೆ ಮುಂದೆ ಜನರು ಜಮಾಯಿಸಿ ದುಃಖ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ. ಈ ಕುರಿತು ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Belagavi: ನಿನ್ನೇ ಪ್ರೀತಿಸುವೆ ಎಂದು ಹಣ, ಮಾನ, ಚಿನ್ನ ದೋಚಿದ! ನ್ಯಾಯಕ್ಕಾಗಿ ಯುವತಿ ಕಣ್ಣೀರು

ಸದ್ಯ, ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತರ ಕುಟುಂಬಕ್ಕೆ ಮತ್ತು ಅನಾಥರಾದ ಮಕ್ಕಳಿಗೆ ಇಡೀ ಊರೇ ಸಾಂತ್ವನ ಹೇಳುತ್ತಿದೆ.

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್ ಕೊರತೆ ನೀಗಿಸಿದ ಹೊಸ ಒಲೆ: ಬೆಳಗಾವಿ ಹೋಟೆಲ್‌ಗಳಲ್ಲಿ ಬಯೋಮಾಸ್

Scroll to load tweet…

----------