ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಪೊಲೀಸ್ ವಶಕ್ಕೆ
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅವರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ : ರೈತರೊಂದಿಗೆ ಹೋರಾಟಕ್ಕಿಳಿದಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಸೇರಿ ಹದಿನೈದಕ್ಕೂ ಅಧಿಕ ರೈತರು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಒಳಚರಂಡಿ ನೀರು ಶುದ್ದೀಕರಣ ಘಟಕಕ್ಕೆ ರೈತರು ಜಮೀನು ಕೊಡಲು ನಿರಾಕರಣೆ ಮಾಡಿದ್ದು, ಪೊಲೀಸ್ ಪೋರ್ಸ್ ನೊಂದಿಗೆ ಕಾಮಗಾರಿ ಆರಂಭಿಸಲು ಜಿಲ್ಲಾಡಳಿತದ ಅಧಿಕಾರಿಗಳು ಆಗಮಿಸಿದ್ದರು.
ಜಮೀನು ಖರೀದಿ ಪ್ರಕ್ರಿಯೆ ಮುಗಿಸಿ, ರೈತರಿಗೆ ಯಾವುದೇ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕಾಮಗಾರಿಗೆ ಅಡ್ಡಿ ಪಡಿಸಲು ರೈತರು ಸೇರಿದ್ದು, ರೈತರ ಹೋರಾಟಕ್ಕೆ ಶಾಸಕಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಮುಂದಾಳತ್ವ ವಹಿಸಿದ್ದರು.
ಈ ವೇಳೆ ಮೃಣಾಲ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಮೃಣಾಲ್ ಸೇರಿ 15ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳಿಕ ಎಪಿಎಂಸಿ ಠಾಣೆಗೆ ಕರೆದೊಯ್ದಿದ್ದು, ಇತ್ತ ಬೆಳೆ ಬೆಳೆದ ಭೂಮಿಯಲ್ಲೇ ಕೆಲಸ ಆರಂಭ ಮಾಡಲಾಗಿದೆ. ಎಸಿ ಕವಿತಾ ನೇತೃತ್ವದಲ್ಲಿ ಕೆಲಸ ನಡೆದಿದ್ದು, ಸ್ಥಳದಲ್ಲಿ ಭದ್ರತೆಗೆ ನೂರಾರು ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.