ಬೆಳಗಾವಿ DCC ಬ್ಯಾಂಕ್ ಚುನಾವಣೆ: RSS ಸೂಚನೆಗೆ ಬಿಜೆಪಿ ನಾಯಕರ ಒಪ್ಪಿಗೆ
RSS ಸೂಚನೆಯಂತೆ ಅವಿರೋಧ ಆಯ್ಕೆಗೆ ತೀರ್ಮಾನ| ಡಿಸಿಸಿ ಬ್ಯಾಂಕ್ನ 16 ನಿರ್ದೇಶಕರ ಸ್ಥಾನಗಳಿಗೆ ಗೆ ನ.6ರಂದು ನಡೆಯಲಿರುವ ಚುನಾವಣೆ|
ಬೆಳಗಾವಿ(ಅ.30): ಬೆಳಗಾವಿ ಡಿಸಿಸಿ(ಬೆಳಗಾವಿ ಜಿಲ್ಲಾ ಮಧ್ಯವರ್ತಿ) ಬ್ಯಾಂಕ್ ಚುನಾವಣೆಗೆ ಸಂಬಂಧಿಸಿ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಜೆಪಿ ಬಣ ರಾಜಕೀಯ ಇದೀಗ ಪಕ್ಷದ ಹೈಕಮಾಂಡ್ ಮತ್ತು ಆರೆಸ್ಸೆಸ್ ಸಲಹೆ ಸೂಚನೆಗಳ ಹಿನ್ನೆಲೆಯಲ್ಲಿ ತಣ್ಣಗಾಗುವ ಲಕ್ಷಣಗಳು ಗೋಚರಿಸಿವೆ. ಈ ಹಿನ್ನೆಲೆಯಲ್ಲಿ ಗುರುವಾರ ಸಂಧಾನ ಮಾತುಕತೆ ನಡೆಸಿರುವ ಜಿಲ್ಲೆಯ ಕಮಲ ನಾಯಕರು ಇದೀಗ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದು ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಸಲು ತೀರ್ಮಾನಿಸಿದ್ದಾರೆ.
ಡಿಸಿಸಿ ಬ್ಯಾಂಕ್ನ 16 ನಿರ್ದೇಶಕರ ಸ್ಥಾನಗಳಿಗೆ ಗೆ ನ.6ರಂದು ನಡೆಯಲಿರುವ ಚುನಾವಣೆ ಜಿಲ್ಲೆಯ ಬಿಜೆಪಿ ನಾಯಕರಲ್ಲಿಯೇ ಪ್ರತಿಷ್ಠೆಯಾಗಿ ಮಾರ್ಪಟ್ಟಿತ್ತು. ಡಿಸಿಎಂ ಲಕ್ಷ್ಮಣ ಸವದಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಅಧ್ಯಕ್ಷ ಗಾದಿಗೆ ತಮಗೆ ಇರಲಿ ಎಂದು ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ಶಾಸಕ ಉಮೇಶ ಕತ್ತಿ, ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಶಾಸಕ, ಮಾಜಿ ಸಂಸದ ರಮೇಶ ಕತ್ತಿ ಬಣ ಆಕ್ಷೇಪ ವ್ಯಕ್ತಪಡಿಸಿತ್ತು.
ವೇದಿಕೆಯಲ್ಲೇ ಬಿಜೆಪಿಗೆ ಸೇರಲು ಆಫರ್: ಕೈಮುಗಿದು ನಸುನಕ್ಕ ಕೈ ಮುಖಂಡ
ಇವೆರಡೂ ಬಣಗಳ ಮುಖಂಡರು ಒಂದಾಗಿ ಅವಿರೋಧ ಆಯ್ಕೆಗೆ ಶ್ರಮಿಸುವಂತೆ ಆರ್ಎಸ್ಎಸ್ ನಾಯಕರು ನಿರ್ದೇಶನ ನೀಡಿದ್ದರು. ಹೀಗಾಗಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ಆನಂದ ಮಾಮನಿ, ಉಮೇಶ ಕತ್ತಿ ಸೇರಿದಂತೆ ಸ್ಪರ್ಧಾ ಆಕಾಂಕ್ಷಿಗಳು ಸಭೆ ನಡೆಸಿ ಅವಿರೋಧ ಆಯ್ಕೆಗೆ ತೀರ್ಮಾನಿಸಿದರು.