Asianet Suvarna News Asianet Suvarna News

ಪ್ರವಾಹ ಅವಘಡ ತಡೆಗಟ್ಟಲು ಎಚ್ಚೆ​ತ್ತು​ಕೊ​ಳ್ಳಿ: ಆರಗ ಜ್ಞಾನೇಂದ್ರ

ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ಈ ಮೊದಲಿನ ಮಳೆಗಾಲದಲ್ಲಿ ಸಂಭವಿಸಿರುವ ಅನಾಹುತವನ್ನು ಗಮನದಲ್ಲಿಟ್ಟುಕೊಂಡು ಎದುರಾಗಬಹುದಾದ ಅವಘಡವನ್ನು ನಿಯಂತ್ರಿಸಲು ಇಲಾ​ಖೆ​ಗ​ಳ ಅಧಿ​ಕಾ​ರಿ​ಗ​ಳು ನಾಳೆಯಿಂದಲೇ ಸಿದ್ಧರಾಗಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಾಕೀತು ಮಾಡಿ​ದರು.

Be Alert to Prevent Flood Disaster Says Araga Jnanendra gvd
Author
First Published Jun 4, 2023, 12:30 AM IST

ತೀರ್ಥಹಳ್ಳಿ (ಜೂ.04): ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ಈ ಮೊದಲಿನ ಮಳೆಗಾಲದಲ್ಲಿ ಸಂಭವಿಸಿರುವ ಅನಾಹುತವನ್ನು ಗಮನದಲ್ಲಿಟ್ಟುಕೊಂಡು ಎದುರಾಗಬಹುದಾದ ಅವಘಡವನ್ನು ನಿಯಂತ್ರಿಸಲು ಇಲಾ​ಖೆ​ಗ​ಳ ಅಧಿ​ಕಾ​ರಿ​ಗ​ಳು ನಾಳೆಯಿಂದಲೇ ಸಿದ್ಧರಾಗಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಾಕೀತು ಮಾಡಿ​ದರು. ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿ, ಕಳೆದ ವಾರ ಅಕಾಲಿಕವಾಗಿ ಸುರಿದ ಗಾಳಿಮಳೆಗೆ ಹುಂಚದಕಟ್ಟೆ ಮತ್ತು ಹಾರೋಗುಳಿಗೆ ಭಾಗದಲ್ಲಿ ನೂರಾರು ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. 

ಮನೆಗಳಿಗೂ ಹಾನಿ ಸಂಭವಿಸಿದ್ದು ಮುಂದೆ ಸಂಭವಿಸಬಹುದಾದ ಅನಾಹುತದ ಎಚ್ಚರಿಕೆ ಗಂಟೆಯೂ ಆಗಿದೆ. ಕಳೆದ ವರ್ಷದ ಮಳೆಗಾಲದಲ್ಲಿ ತಾಲೂಕಿನಲ್ಲಿ ಸಂಭವಿಸಿದ ಭೂ ಕುಸಿತದಿಂದ ಅಪಾರ ಹಾನಿಯಾಗಿದೆ. ಜಮೀನು ಮನೆ ರಸ್ತೆ ಮೋರಿಗಳಿಗೆ ಹಾಲಿಯಾಗದಂತೆ ಸರ್ಕಾರಿ ಇಲಾಖೆಯ ಎಲ್ಲಾ ವಿಭಾಗದವರು ತಮ್ಮ ಭಾಗದ ಮುಂಜಾಗ್ರತಾ ಕ್ರಮಗಳನ್ನು ಸಮರೋಪಾದಿಯಲ್ಲಿ ನಿರ್ವಹಿಸಲು ನಾಳೆಯಿಂದಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು: ಶಾಸಕ ವೆಂಕಟಶಿವಾರೆಡ್ಡಿ

ಗಾಳಿ- ಮಳೆಗೆ ಮರಮಟ್ಟುಗಳು ಮನೆಗಳ ಮೇಲೆ ಮತ್ತು ವಿದ್ಯುತ್‌ ಲೈನಿನ ಮೇಲೆ ಬೀಳದಂತೆ ಅವುಗಳನ್ನು ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನೆರವು ಅಗತ್ಯ. ಮಳೆ ಆರಂಭವಾಗುವ ಮುನ್ನ ಹೆದ್ದಾರಿ ಬದಿಯ ಚರಂಡಿ ಸೇತುವೆ ಮತ್ತು ಮೋರಿಗಳಲ್ಲಿ ಸಿಲುಕಿರುವ ಬಿದಿರು ಮತ್ತು ಕಸಕಡ್ಡಿಗಳು ತುಂಬಿಕೊಂಡಿರುವುದನ್ನು ತೆರವುಗೊಳಿಸಲು ಆದ್ಯತೆ ನೀಡಬೇಕಿದೆ. ಸೂಕ್ಷ್ಮ ಪ್ರದೇಶವಾದ ಆಗುಂಬೆ ಘಾಟಿಯ ಬಗ್ಗೆಯೂ ವಿಶೇಷ ಗಮನ ಹರಿಸಬೇಕಿದೆ. ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗ ಈ ಕೂಡಲೇ ಮುಂದಾಗಬೇಕಿದೆ ಎಂದರು.

ಸಂತ್ರ​ಸ್ತ​ರಿಗೆ ಅನ್ಯಾ​ಯ: ಮಳೆ ಹಾನಿಯಿಂದ ಆಗುವ ನಷ್ಟವನ್ನು ಸಂತ್ರಸ್ಥರಿಗೆ ತಲುಪಿಸುವಲ್ಲಿ ಜನರ ಸೇವೆಗಾಗಿಯೇ ಇರುವ ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಬೇಕು. ಕಳೆದ ವರ್ಷದಲ್ಲಿ ನೆರೆಹಾನಿಯ ವರದಿ ಅವೈಜ್ಞಾನಿಕವಾದ ಕಾರಣ ಸಂತ್ರಸ್ಥರಿಗೆ ಅನ್ಯಾಯವಾಗಿದೆ. ಹೊರಬೈಲು ಗ್ರಾಮದಲ್ಲಿ ಮಳೆಗೆ ಕುಸಿದಿರುವ ಒಂದು ಮನೆಗೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಈ ವರೆಗೂ ಪರಿಹಾರ ದೊರೆತಿಲ್ಲಾ ಅಂಥ ಒಂದು ಇನ್ನು ಮುಂದೆ ಕೂಡ ನಡೆಯಕೂಡದು ಎಂದೂ ತಾಕೀತು ಮಾಡಿದರು.

ನನ್ನನ್ನು ವಂಚಿ​ಸಲು ಸಾಧ್ಯ​ವಿ​ಲ್ಲ: ಈ ಬಾರಿ ನನಗೆ ಮಂತ್ರಿಗಿರಿಯ ಹೊಣೆಗಾರಿಕೆಯೂ ಇಲ್ಲದ ಕಾರಣ ಶಾಸಕನಾಗಿ ಪೂರ್ಣ ಅವಧಿಗೆ ಕ್ಷೇತ್ರದಲ್ಲೇ ಇದ್ದೇನೆ. ನನಗೆ ಈ ತಾಲೂಕಿನ ಪ್ರತಿ ಹಳ್ಳಿಗಳ ಪರಿಚಯವಿದ್ದು, ಯಾರೂ ನನ್ನನ್ನು ವಂಚಿಸಲು ಸಾಧ್ಯವಿಲ್ಲ. ಎಲ್ಲ ಮಾಹಿತಿಯೂ ನನಗೆ ಸಿಗುತ್ತದೆ. ಮತ್ತು ಪ್ರತಿಯೊಂದನ್ನೂ ಕೂಲಂಕುಶವಾಗಿ ಪರಿಶೀಲನೆ ನಡೆಸುತ್ತೇನೆ. ಯಾವುದೇ ವೈಫಲ್ಯವನ್ನೂ ಸಹಿಸುವುದಿಲ್ಲಾ. ಅಂಥ ಘಟನೆಗೆ ಯಾರೂ ಅವಕಾಶ ನೀಡಬಾರದು ಎಂದೂ ಎಚ್ಚರಿಸಿದರು.

ಕಂದಾಯ ಇಲಾಖೆಯಲ್ಲಿ ಆರೇಳು ಮಂದಿ ಲೈಸೆನ್ಸ್‌ ಮೋಜಣಿದಾರರಿದ್ದರೂ ಜನರ ಕೆಲಸಗಳು ಸುಗಮವಾಗಿ ನಡೆಯುತ್ತಿಲ್ಲ. ಜನರಿಂದ ಹೆಚ್ಚುವರಿ ಹಣವನ್ನೂ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಇದನ್ನು ಸರಿಪಡಿಸಿಕೊಳ್ಳಬೇಕು. ಸುಲಿಗೆಗೆ ಇಳಿದರೆ ಬಿಡೋದಿ​ಲ್ಲ. ಸಾರ್ವಜನಿಕರಿಗೆ ಸಹನೀಯ ಆಡಳಿತ ನೀಡುವಲ್ಲಿ ವಿಫಲರಾಗಿ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದರೆ ಸುಮ್ಮನಿರಲಾರೆ ಎಂದು ಹೇಳಿದರು.

1444 ಮಂದಿ ರಕ್ತ ಸ್ಯಾಂಪಲ್‌ ಸಂಗ್ರ​ಹ: ಆರೋಗ್ಯ ಇಲಾಖೆ ಮೇಲಿನ ಚರ್ಚೆಯಲ್ಲಿ ತಾಲೂಕು ವೈಧ್ಯಾಧಿಕಾರಿ ಡಾ. ನಟರಾಜ್‌ ವಿವರಣೆ ನೀಡಿ, ಈ ವರ್ಷ ತಾಲೂಕಿನಲ್ಲಿ ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ಕೊನೆಯವರೆಗೆ ಮಂಗನ ಕಾಯಿಲೆಯ ಒಟ್ಟು 1444 ಮಂದಿಯ ರಕ್ತದ ಸ್ಯಾಂಪಲ್‌ ಸಂಗ್ರಹಿಸಿದ್ದು, ಅದರಲ್ಲಿ ಕೇವಲ 10 ಪ್ರಕರಣಗಳು ಮಾತ್ರ ವರದಿಯಾಗಿದೆ, ಸಾವು ಸಂಭವಿಸಿಲ್ಲಾ. 9 ಕೋವಿಡ್‌ ಕೇಸ್‌ ಕೂಡ ಪತ್ತೆಯಾಗಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ತಾಲೂಕಿನಲ್ಲಿ ಈವರೆಗೆ ಒಟ್ಟು 6195 ಜನರಿಗೆ ಪಾಸಿಟಿವ್‌ ಬಂದಿದೆ. ಇವರಲ್ಲಿ 5423 ಜನರು ಗ್ರಾಮೀಣ ಪ್ರದೇಶದವರಾಗಿದ್ದಾರೆ ಎಂದು ವಿವರಣೆ ನೀಡಿದರು.

ಜೆಸಿ ಆಸ್ಪತ್ರೆಗೆ ಹೊಂದಿಕೊಂಡು ಸರ್ಕಾರದಿಂದ ತಾಯಿ-ಮಗು ಆಸ್ಪತ್ರೆಗೆ .20 ಕೋಟಿ ಮಂಜೂರಾಗಿದೆ ಎಂದು ತಿಳಿಸಿದ ವೈದ್ಯಾಧಿಕಾರಿ ಡಾ.ಗಣೇಶ್‌ ಭಟ್‌, ಆಸ್ಪತ್ರೆಯ ಲ್ಯಾಬ್‌ ಉನ್ನತೀಕರಣಕ್ಕೆ .80 ಲಕ್ಷ ಬಂದಿದೆ. 12 ಬಿಡ್‌ನ ಐಸೋಲೇಶನ್‌ ವಾರ್ಡ್‌ ಕೂಡ ನಿರ್ಮಾಣವಾಗಲಿದೆ. ರೇಡೀಯೋಲಜಿ ತಜ್ಞರನ್ನು ಹೊರತುಪಡಿಸಿ, ಎಲ್ಲ ವಿಭಾಗದಲ್ಲೂ ವೈದ್ಯರಿದ್ದಾರೆ ಎಂದರು.

ತಾಲೂ​ಕಿ​ನಲ್ಲಿ ಶಿಕ್ಷ​ಕರ ಕೊರ​ತೆ: ತಾಲೂಕಿನಲ್ಲಿ 28 ಮಂದಿ ಪ್ರೌಢಶಾಲಾ ಶಿಕ್ಷಕರು ಮತ್ತು 136 ಮಂದಿ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರ ಕೊರತೆ ಇರುವುದಾಗಿ ಸಭೆಗೆ ತಿಳಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, 20 ಶಾಲೆಗಳಿಗೆ ಡೆಪ್ಟೇಶನ್‌ ಮೇಲೆ ಶಿಕ್ಷಕರನ್ನು ಕಳಿಸಿ ಶಾಲೆ ಪ್ರಾರಂಭಿಸಲಾಗಿದೆ. ದಾಸನಕೊಡಿಗೆ ಶಾಲೆಗೆ ವಿದ್ಯಾರ್ಥಿಗಳೇ ದಾಖಲಾಗಿಲ್ಲ. ಮುಳುಕೇವಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಒಂದು ಮಗು ದಾಖಲಾಗಿದೆ ಎಂದೂ ತಿಳಿಸಲಾಯಿತು. ಈ ಬಗ್ಗೆ ಮಾತನಾಡಿದ ಶಾಸಕರು, ಒಂದು ಎರಡು ಮಕ್ಕಳಿರುವ ಶಾಲೆಗಳನ್ನು ನಡೆಸುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದಲೂ ಸೂಕ್ತ ಅಲ್ಲ. ಅಂಥ ಕಡೆಗಳಲ್ಲಿ ಪೋಷಕರ ಮನವೊಲಿಸಿ ಬೇರೆ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಪ್ರತಿ ವಾರ ಜನಸಂಪರ್ಕ ಸಭೆ ನಡೆಸುವೆ: ಶಾಸಕ ಎ.ಆರ್‌.ಕೃಷ್ಣಮೂರ್ತಿ

ತಾಲೂಕಿನ ಗ್ರಾಮೀಣ ಭಾಗದಲ್ಲಿ ಇರುವ ಮೊಬೈಲ್‌ ಸಿಗ್ನಲ್‌ ಸಮಸ್ಯೆ ನಿವಾರಣೆ ಸಲುವಾಗಿ ಸಂಸದ ಬಿ.ವೈ.ರಾಘವೇಂದ್ರ ಪ್ರಯತ್ನದಲ್ಲಿ 27 ಹೊಸ ಟವರ್‌ ಮಂಜೂರಾಗಿದೆ. ಇದರಲ್ಲಿ 24 ಟವರ್‌ನ ಪೂರ್ವಭಾವಿ ಕೆಲಸಗಳು ಅಂತಿಮಗೊಂಡಿವೆ. ಇದರಿಂದ ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ಮತ್ತು ವರ್ಕ್ ಫ್ರಂ ಹೋಮ್‌ ನೌಕರರಿಗೆ ಅನುಕೂಲವಾಗಲಿದೆ ಎಂದೂ ಶಾಸಕರು ತಿಳಿಸಿದರು. ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಶೈಲಾ ಹಾಗೂ ತಹಸಿಲ್ದಾರ್‌ ಅಮೃತ್‌ ಆತ್ರೇಶ್‌ ಇದ್ದರು. ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ತ್ರೈಮಾಸಿಕ ಸಭೆಗೆ ಮುನ್ನ ಶಾಸಕರ ಶಿಫಾರಸಿನ ಅನ್ವಯ ಮಂಜೂರಾದ ಅನುದಾನದಲ್ಲಿ ಏಳು ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನವನ್ನು ಆರಗ ಜ್ಞಾನೇಂದ್ರ ವಿತರಿಸಿದರು. ಕೆ.ನಾಗರಾಜ ಶೆಟ್ಟಿ, ತಾಪಂ ಇಒ ಎಂ.ಶೈಲಾ ಹಾಗೂ ತಹಸೀಲ್ದಾರ್‌ ಅಮೃತ್‌ ಆತ್ರೇಶ್‌ ಇದ್ದರು.

Follow Us:
Download App:
  • android
  • ios