50 ಕೋಟಿ ಮೌಲ್ಯದ ಬಿಡಿಎ ಆಸ್ತಿ ಮತ್ತೆ ಒತ್ತುವರಿ ಪ್ರಯತ್ನ
‘ಬಿಡಿಎ ಆಸ್ತಿ’ ಎಂದು ಬರೆದಿದ್ದ ಫಲಕಕ್ಕೆ ಮಸಿ| 4 ದಿನದ ಹಿಂದಷ್ಟೇ ಫಲಕ ಬರೆಸಿದ್ದ ಆಯುಕ್ತ| ಇದರ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡ ಇದೆ ಎಂಬ ಆರೋಪ|
ಬೆಂಗಳೂರು(ಜ.20): ಮಹಾಲಕ್ಷ್ಮಿ ಲೇಔಟ್ ಪಂಚಮುಖಿ ಗಣಪತಿ ದೇಗುಲದ ಸಮೀಪ ಪ್ರಭಾವಿ ವ್ಯಕ್ತಿಗಳು ಅತಿಕ್ರಮಿಸಿಕೊಂಡಿರುವ ಬಿಡಿಎಗೆ ಸೇರಿದ ಸುಮಾರು 50 ಕೋಟಿ ಮೌಲ್ಯದ 1.5 ಎಕರೆ ಜಾಗವನ್ನು ಮತ್ತೆ ಒತ್ತುವರಿ ಮಾಡುವ ಹುನ್ನಾರ ನಡೆದಿದೆ.
"
ಒತ್ತುವರಿ ಮಾಡಿಕೊಂಡಿದ್ದ ಜಾಗ ಗೋಡೆಯೊಂದರಲ್ಲಿ ಬಿಡಿಎ ಆಯುಕ್ತ ಡಾ. ಎಚ್.ಆರ್.ಮಹದೇವ್ ಬರೆಯಿಸಿದ್ದ ‘ಇದು ಬಿಡಿಎ ಸ್ವತ್ತು’ ಎಂಬ ನಾಮಫಲಕವನ್ನು ರಾತ್ರೋರಾತ್ರಿ ಬಣ್ಣ ಹಚ್ಚಿ ಕಾಣದಂತೆ ಮಾಡಿರುವ ದುಷ್ಕರ್ಮಿಗಳು, ಪುನಃ ಆ ಜಾಗವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದರ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡ ಇದೆ ಎಂಬ ಆರೋಪಗಳು ಕೇಳಿಬಂದಿವೆ.
ಬಿಡಿಎನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..!
ಖಾಲಿ ಇದ್ದ ಜಾಗವನ್ನು ಖಾಸಗಿ ವ್ಯಕ್ತಿಗಳು ಲಾಬಿ ನಡೆಸಿ ನಕಲಿ ದಾಖಲೆಗಳನ್ನು ಸೃಷ್ಟಿಮಾಡಿಕೊಂಡು ಅಲ್ಲಿ ನಿವೇಶನಗಳನ್ನು ಹಂಚಲು ಸಂಚು ರೂಪಿಸಿದ್ದರು. 4 ದಿನಗಳ ಹಿಂದೆ ಬಿಡಿಎ ಆಯುಕ್ತ ಡಾ. ಎಚ್.ಆರ್.ಮಹದೇವ್ ಅವರು ಜಾಗಕ್ಕೆ ಭೇಟಿ ನೀಡಿದ್ದರು. ಆ ಜಾಗದ ದಾಖಲೆಗಳನ್ನು ಪರಿಶೀಲಿಸಿದಾಗ ಅದು ಬಿಡಿಎ ಜಾಗವಾಗಿದ್ದು, ನಕಲಿ ದಾಖಲೆ ಸೃಷ್ಟಿಸಿರುವ ಸಂಗತಿ ಬೆಳಕಿಗೆ ಬಂದಿತ್ತು. ದಾಖಲೆಯಲ್ಲಿ ಜಾರಕ ಬಂಡೆ ಕಾವಲ್(ಸರ್ವೆ ನಂ 126 ಮತ್ತು 139) ಎಂದು ದಾಖಲಾಗಿದೆ. ಇದು ಬಿಡಿಎ ಆಸ್ತಿಯಾಗಿರುವುದಕ್ಕೆ ಹಲವು ದಾಖಲೆಗಳು ಲಭ್ಯವಿದೆ. ಕೆಲವು ಬಿಡಿಎ ಅಧಿಕಾರಿಗಳ ಕುಮ್ಮಕ್ಕಿನಿಂದ ತಿದ್ದಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದ್ದನ್ನು ಬಿಡಿಎ ಅಧಿಕಾರಿಗಳು ಪತ್ತೆ ಮಾಡಿದ್ದರು.
ಈ ಕುರಿತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರ ಗಮನಕ್ಕೆ ತಂದ ಆಯುಕ್ತ ಡಾ. ಮಹದೇವ್ ಅವರು, ಪೊಲೀಸ್ ಅಧಿಕಾರಿಗಳ ಸಹಕಾರದಿಂದ ಈ ಜಾಗವನ್ನು ವಶಕ್ಕೆ ಪಡೆದಿದ್ದರು. ಜತೆಗೆ ಇದು ಬಿಡಿಎ ಸ್ವತ್ತು ಎನ್ನುವ ನಾಮಫಲಕ ಹಾಕಿಸಿದ್ದರು.