Asianet Suvarna News Asianet Suvarna News

ಬೆಂಗಳೂರು: ಸೆಪ್ಟೆಂಬರ್‌/ಅಕ್ಟೋಬರ್‌ಗೆ ಬಿಬಿಎಂಪಿ ಚುನಾವಣೆ

ಬೆಂಗಳೂರಿನ ಸಮಸ್ಯೆ ಗುರುತಿಸಿ, ಅದನ್ನು ನಿವಾರಿಸಲು, ವಾರ್ಡ್‌ ಮಟ್ಟದಲ್ಲಿ ಸಮರ್ಪಕ ಮೂಲಸೌಕರ್ಯ ಕಲ್ಪಿಸಲು ಬಿಬಿಎಂಪಿ ಸದಸ್ಯರು ಅತ್ಯವಶ್ಯಕ. ಆದರೆ, ಕಳೆದ 3 ವರ್ಷ 9 ತಿಂಗಳಿನಿಂದ ಬಿಬಿಎಂಪಿಗೆ ಜನಪ್ರತಿನಿಧಿಗಳಿಲ್ಲದೆ, ಅಧಿಕಾರಿಗಳದ್ದೇ ಆಡಳಿತವಾಗಿದೆ. 

BBMP Election Likely Held on September or October 2024 grg
Author
First Published May 21, 2024, 6:25 AM IST

ಗಿರೀಶ್‌ ಗರಗ

ಬೆಂಗಳೂರು(ಮೇ.21):  ಲೋಕಸಭಾ ಚುನಾವಣೆ ನಂತರ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸದ್ದು ಕೇಳಿಸುತ್ತಿದ್ದು, ಈ ವರ್ಷದ ಅಂತ್ಯದಲ್ಲಿ ಬಿಬಿಎಂಪಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಜನ ಪ್ರತಿನಿಧಿಗಳಿಲ್ಲದೇ ಸೊರಗಿರುವ ಬಿಬಿಎಂಪಿಗೆ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯುವ ಎಲ್ಲ ಸಾಧ್ಯತೆಗಳಿವೆ.

ಮಹಾನಗರ ಬೆಂಗಳೂರಿನ ಸಮಸ್ಯೆ ಗುರುತಿಸಿ, ಅದನ್ನು ನಿವಾರಿಸಲು, ವಾರ್ಡ್‌ ಮಟ್ಟದಲ್ಲಿ ಸಮರ್ಪಕ ಮೂಲಸೌಕರ್ಯ ಕಲ್ಪಿಸಲು ಬಿಬಿಎಂಪಿ ಸದಸ್ಯರು ಅತ್ಯವಶ್ಯಕ. ಆದರೆ, ಕಳೆದ 3 ವರ್ಷ 9 ತಿಂಗಳಿನಿಂದ ಬಿಬಿಎಂಪಿಗೆ ಜನಪ್ರತಿನಿಧಿಗಳಿಲ್ಲದೆ, ಅಧಿಕಾರಿಗಳದ್ದೇ ಆಡಳಿತವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರೂಪಿಸಿ ಮಂಡಿಸಿದ್ದಲ್ಲದೆ, 198 ವಾರ್ಡ್‌ಗಳ ಮರುವಿಂಗಡಣೆ ಮಾಡುವ ಕಾರ್ಯಕ್ಕೆ ಮುಂದಾಯಿತು. ಅದರಂತೆ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ಮರುವಿಂಗಡಣೆ ಮಾಡುವ ಮೂಲಕ ಚುನಾವಣೆ ವಿಳಂಬ ಮಾಡಲಾಯಿತು.

ಬಿಬಿಎಂಪಿ ಚುನಾವಣೆ ನಡೆಸೊಲ್ಲ: ನಿಮ್ಮನೆ ಬಾಗಿಲಿಗೆ ನಾವೇ ಬರ್ತೀವಿ ಸಮಸ್ಯೆ ಹೇಳಿಕೊಳ್ಳಿ ಅಂತಿದೆ ರಾಜ್ಯ ಸರ್ಕಾರ

ಅದೇ ರೀತಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೂ ಬಿಬಿಎಂಪಿ ಚುನಾವಣೆ ಮಾಡುತ್ತೇವೆ ಎಂದು ಹೇಳಲಾಯಿತಾದರೂ, ಲೋಕಸಭಾ ಚುನಾವಣೆಯ ಕಾರಣ ನೀಡಿ ಚುನಾವಣೆ ಮುಂದೂಡಲಾಯಿತು. ಇದೀಗ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಅಧಿಕೃತವಾಗಿ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಚುನಾವಣಾ ಆಯೋಗಕ್ಕೆ ನೆರವಾಗಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ.

ಪುರಪಿತೃಗಳಿಲ್ಲದೇ 4 ವರ್ಷ ಪೂರ್ಣ:

ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಿದ ಸಂದರ್ಭದಲ್ಲಿ ಅಂದರೆ 2006ರಿಂದ 2010ರವರೆಗೆ ಚುನಾವಣೆ ನಡೆದಿರಲಿಲ್ಲ. ಆಗಲೂ ಬಿಜೆಪಿ ಆಡಳಿತದಲ್ಲಿತ್ತು ಹಾಗೂ ಕಾಂಗ್ರೆಸ್‌ ಬಿಬಿಎಂಪಿ ಚುನಾವಣೆಗಾಗಿ ಆಗ್ರಹಿಸಿತ್ತು. ಇದೀಗ 2020ರ ಸೆ.10ರಂದು ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿದ್ದು, ಈವರೆಗೆ ಚುನಾವಣಾ ಪ್ರಕ್ರಿಯೆ ನಡೆಸಿಲ್ಲ.
ಸದ್ಯದ ಮಾಹಿತಿಯಂತೆ ಈ ವರ್ಷದ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಹಾಗೇನಾದರೂ ಆದರೆ, ಬಿಬಿಎಂಪಿಗೆ ನಾಲ್ಕು ವರ್ಷಗಳ ನಂತರ ಚುನಾವಣೆ ನಡೆದು ಜನನಿಧಿಗಳು ಆಯ್ಕೆಯಾಗಲಿದ್ದಾರೆ.

ಸರ್ಕಾರದ ಅಣತಿಯಂತೆ ಅಧಿಕಾರಿಗಳಿಂದ ಕೆಲಸ

ಚುನಾಯಿತ ಜನಪ್ರತಿನಿಧಿಗಳಿಲ್ಲದ ಕಾರಣ ಸದ್ಯ ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಿಸಿದಂತೆ ಯೋಜನೆ ರೂಪಿಸುವುದು, ಅನುಷ್ಠಾನಗೊಳಿಸುವುದು ಎಲ್ಲವನ್ನೂ ಅಧಿಕಾರಿಗಳೇ ನೋಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಆಡಳಿತದಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲದ ಕಾರಣ, ಅಧಿಕಾರಿಗಳು ಆಡಳಿತ ಪಕ್ಷದ ನಿರ್ದೇಶನದಂತೆ ಕೆಲಸ ಮಾಡುವಂತಾಗಿದೆ. ಹೀಗಾಗಿಯೇ ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ, ಆ ಪಕ್ಷದ ನಾಯಕರ ಅಣತಿಯಂತೆ ಕೆಲಸ ಮಾಡಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೂ ಎದುರಾಗಿದೆ.

ಚುನಾವಣೆಗೆ ಸಿದ್ಧರಾಗಿ: ‘ಕೈ’ ಮಾಜಿ ಸದಸ್ಯರಿಗೆ ಸೂಚನೆ

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಈ ಹಿಂದೆಯೇ ಕೆಪಿಸಿಸಿಯಿಂದ ಬಿಬಿಎಂಪಿ ಮಾಜಿ ಸದಸ್ಯರು, ಟಿಕೆಟ್‌ ಆಕಾಂಕ್ಷಿಗಳೊಂದಿಗೆ ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ನಾಯಕರು ಹಲವು ಬಾರಿ ಸಭೆ ನಡೆಸಿದ್ದರು. ಆದರೆ, ಆ ಚುನಾವಣೆ ನಡೆಸಿರಲಿಲ್ಲ. ಇದೀಗ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಚುನಾವಣೆ ನಡೆಸುತ್ತೇವೆ ಎಂದು ಕೆಪಿಸಿಸಿಯಿಂದ ಬಿಬಿಎಂಪಿ ಕಾಂಗ್ರೆಸ್‌ನ ಮಾಜಿ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಚುನಾವಣೆಗೆ ಸಿದ್ಧರಾಗುವಂತೆಯೂ ತಿಳಿಸಿದ್ದು, ವಾರ್ಡ್‌ಮಟ್ಟದಲ್ಲಿ ಅದಕ್ಕೆ ಬೇಕಾಗುವ ಸಿದ್ಧತೆ ಈಗಿನಿಂದಲೇ ಮಾಡುವಂತೆ ಸೂಚಿಸಿದ್ದಾರೆ ಎಂದು ಮಾಜಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಜನಗಣತಿ ಆರಂಭಿಸಿದರೂಚುನಾವಣೆಗೆ ಸಮಸ್ಯೆಯಿಲ್ಲ

ಸದ್ಯ ದೇಶದಲ್ಲಿ 2011ರಲ್ಲಿ ನಡೆದ ಜನಗಣತಿ ಆಧಾರದಲ್ಲಿಯೇ ಚುನಾವಣೆಗಳು ನಡೆಯುತ್ತಿವೆ. ಹೀಗಾಗಿ ಇದೀಗ ಜನಗಣತಿ ನಡೆಸಬೇಕಿದ್ದು, ಲೋಕಸಭಾ ಚುನಾವಣೆ ಮುಕ್ತಾಯದ ನಂತರ ಕೇಂದ್ರ ಸರ್ಕಾರ ಆ ಕುರಿತಂತೆ ಆದೇಶಿಸಬೇಕಿದೆ. ಒಂದು ವೇಳೆ ಸೆಪ್ಟೆಂಬರ್‌ಗೂ ಮುನ್ನವೇ ಜನಗಣತಿಗೆ ಆದೇಶಿಸಿದರೆ ಬಿಬಿಎಂಪಿ ಚುನಾವಣೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಏಕೆಂದರೆ ಜನಗಣತಿ ಪ್ರಕ್ರಿಯೆ ಪೂರ್ಣಗೊಂಡು, ಅಂತಿಮ ವರದಿ ಬರಬೇಕಾದರೆ ಕನಿಷ್ಠ ಎರಡು ವರ್ಷಗಳು ಬೇಕಾಗಲಿದೆ. ಅಲ್ಲಿಯವರೆಗೆ ಬಿಬಿಎಂಪಿ ಚುನಾವಣೆ ನಡೆಸದಿರಲು ಸಾಧ್ಯವಿಲ್ಲ. ಹೀಗಾಗಿ ಜನಗಣತಿ ಆದೇಶ ಬಂದರೂ ಚುನಾವಣೆ ನಡೆಸಬಹುದಾಗಿದೆ.

ಬೆಂಗಳೂರು: ಬಿಬಿಎಂಪಿಗೆ ಜನಪ್ರತಿನಿಧಿಗಳಿಲ್ಲದೇ 3 ವರ್ಷ ಪೂರ್ಣ

ಚುನಾವಣೆ ನಡೆಸುತ್ತೇವೆ ಎಂದು ಸರ್ಕಾರ ಕಾಲಹರಣ

ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲಿಲ್ಲ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್‌ ನಾಯಕರು, ತಾವು ಅಧಿಕಾರಕ್ಕೆ ಬಂದರೆ ವರ್ಷದೊಳಗೆ ಚುನಾವಣೆ ಮಾಡುತ್ತೇವೆಂದು ಘೋಷಿಸಿದ್ದರು. ಆದರೆ, ಬಿಜೆಪಿ ಸರ್ಕಾರ ರಚಿಸಿದ್ದ 243 ವಾರ್ಡ್‌ಗಳನ್ನು 225ಕ್ಕೆ ಇಳಿಸಿ ಚುನಾವಣೆ ನಡೆಸುವಲ್ಲಿ ವಿಳಂಬ ಮಾಡಲಾಯಿತು. ಇದೀಗ ಬಿಬಿಎಂಪಿ ಚುನಾವಣೆಗೆ ಆಸಕ್ತಿ ತೋರಲಾಗಿದ್ದು, ಲೋಕಸಭಾ ಚುನಾವಣೆ ನಂತರ ಚುನಾವಣೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಬಿಬಿಎಂಪಿ ಚುನಾವಣೆ ನಡೆಸಬೇಕು ಎಂಬ ಅಭಿಲಾಷೆ ನಮಗೆ ಇದೆ. ಆದರೆ, ಈ ವಿಚಾರ ನ್ಯಾಯಾಲಯದಲ್ಲಿ ಇರುವ ಕಾರಣ ತಡವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios