ಪಾದರಾಯನಪುರ ರಸ್ತೆಗಳ ಮರುನಾಮಕರಣ ರದ್ದುಗೊಳಿಸಲು ಮುಂದಾದ ಬಿಬಿಎಂಪಿ
ಪಾದರಾಯನಪುರದ 11 ರಸ್ತೆಗಳಿಗೆ ಹೆಸರು ನಾಮಪಕಾರಣ ವಿವಾದ ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಈ ಬಗ್ಗೆ ಮಂಜುನಾಥ ಪ್ರಸಾದ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಬೆಂಗಳೂರು, (ಜ.02): ನಗರದ ಪಾದರಾಯನಪುರದ 11 ರಸ್ತೆಗಳಿಗೆ ಅಲ್ಪ ಸಮುದಾಯಕ್ಕೆ ಸೇರಿರುವ ಸಮಾಜ ಸೇವಕರ ಹೆಸರಿಡಲು ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಈ ಪ್ರಕ್ರಿಯೆ ರದ್ದುಗೊಳಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಸಭೆಯಲ್ಲಿ ಪಾದರಾಯನಪುರ ವಾರ್ಡ್ನ ರಸ್ತೆಗಳಿಗೆ ಈ ಸಮಾಜಸೇವಕರ ಹೆಸರು ಇಡಲು ಬಿಬಿಎಂಪಿ ನಿರ್ಧರಿಸಿತ್ತು.
ಆದರೆ, ಇದಕ್ಕೆ ಸಂಸದರಾದ ಅನಂತ್ ಕುಮಾರ್ ಹೆಗಡೆ, ಪಿ.ಸಿ ಮೋಹನ್ ಮತ್ತು ತೇಜಸ್ವಿ ಸೂರ್ಯ ಭಾರಿ ವಿರೋಧ ಹೊರ ಹಾಕಿದ್ದರು. ಹೀಗಾಗಿ, ಮಂಜುನಾಥ ಪ್ರಸಾದ್ ಸರ್ಕಾರಕ್ಕೆ ಈ ಮನವಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪಾಲಿಕೆಯ ಈ ನಿರ್ಧಾರಕ್ಕೆ ಆಕ್ರೋಶ ಹೊರ ಹಾಕಿದ್ದ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮೂಲಕ ಬಿಬಿಎಂಪಿಗೆ ಬಿಸಿ ಮುಟ್ಟಿಸಿದ್ದರು. ಅನಂತ್ ಕುಮಾರ್ ಹೆಗಡೆ ಕೂಡ ಪತ್ರ ಬರೆದು, ಈ ನಿರ್ಧಾರ ಕೈಬಿಡಲು ಆಗ್ರಹಿಸಿದ್ದರು.