ಎಲ್ಲೆಂದರಲ್ಲಿ ಕಸ ಎಸೆದವರಿಂದ 75 ಲಕ್ಷ ದಂಡ ವಸೂಲಿ
ಬಿಬಿಎಂಪಿ ಕಳೆದ 5 ತಿಂಗಳಲ್ಲಿ 75 ಲಕ್ಷ ದಂಡ ವಸೂಲಿ| ವಿಂಗಡಿಸದ ಕಸ ಪಡೆದವರಿಗೂ ದಂಡ: ಸರ್ಫರಾಜ್| ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕವಾಗಿ 250 ಮಂದಿ ಮಾರ್ಷಲ್ಗಳನ್ನು ನೇಮಕ| ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕೈಮಕೈಗೊಳ್ಳಲು ಸೂಚನೆ|
ಬೆಂಗಳೂರು(ಅ.30): ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಘನತ್ಯಾಜ್ಯ ಎಸೆಯುವವರ ವಿರುದ್ಧ ಕಟ್ಟಿನಿಟ್ಟಿನ ಕ್ರಮ ಕೈಗೊಂಡಿರುವ ಬಿಬಿಎಂಪಿ ಕಳೆದ ಐದು ತಿಂಗಳಲ್ಲಿ 75 ಲಕ್ಷ ದಂಡ ವಸೂಲಿ ಮಾಡಿದೆ.
ಘನತ್ಯಾಜ್ಯ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾರ್ಯಾಚರಣೆಗೆ 250 ಮಂದಿ ಮಾರ್ಷಲ್ಗಳನ್ನು ನೇಮಿಸಲಾಗಿತ್ತಾದರೂ ಕೊರೋನಾ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ನಡುವೆ ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕವಾಗಿ 250 ಮಂದಿ ಮಾರ್ಷಲ್ಗಳನ್ನು ನೇಮಿಸಲಾಗಿದೆ. ಅಂತೆಯೆ ಬಿಬಿಎಂಪಿಯ ಎಂಟು ವಲಯಗಳಿಗೂ ಎಂಟು ಗಸ್ತು ವಾಹನಗಳನ್ನು ನಿಯೋಜಿಸಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕೈಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಎಂದು ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ತಿಳಿಸಿದರು.
ತ್ಯಾಜ್ಯ ವಿಂಗಡಣೆ ಮಾಡದವರಿಗೆ ದಂಡ ಹೆಚ್ಚಳಕ್ಕೆ ಚಿಂತನೆ
ಈ ಹಿಂದೆ ಎಲ್ಲೆಂದರಲ್ಲಿ ಕಸ ಎಸೆದವರಿಗೆ 200 ದಂಡ ವಿಧಿಸಲಾಗುತ್ತಿತ್ತು. ಕಳೆದ ಜೂನ್ನಿಂದ ದಂಡದ ಮೊತ್ತವನ್ನು 1 ಸಾವಿರ ಏರಿಕೆ ಮಾಡಲಾಗಿದೆ. ಎರಡನೇ ಬಾರಿ ಸಿಕ್ಕಿಕೊಂಡವರಿಗೆ 2 ಸಾವಿರ ದಂಡ ವಿಧಿಸಲಾಗುತ್ತಿದೆ. ಇನ್ನು ಕಸ ವಿಂಗಡಣೆ ಮಾಡದವರಿಗೆ ಮೊದಲ ಬಾರಿಗೆ 1 ಸಾವಿರ, 2ನೇ ಬಾರಿಗೆ 2 ಸಾವಿರ ದಂಡ ವಿಧಿಸಲಾಗುತ್ತಿದೆ. ಕಸ ಸಂಗ್ರಹಿಸುವವರು ವಿಂಗಡಿಸದ ಕಸವನ್ನು ಪಡೆದರೆ ಅವರಿಗೂ ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದರು.