Bengaluru: ಟ್ರಾಫಿಕ್ ತಡೆಗೆ ತಡರಾತ್ರಿ ಅಧಿಕಾರಿಗಳ ನೈಟ್ರೌಂಡ್ಸ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ನಗರದ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ತತ್ಕ್ಷಣ ಮತ್ತು ದೀರ್ಘಕಾಲಿಕ ಪರಿಹಾರ ಕೈಗೊಳ್ಳುವ ಉದ್ದೇಶದಿಂದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಇದೇ ಮೊದಲ ಬಾರಿಗೆ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ತಡರಾತ್ರಿವರೆಗೆ ನಗರ ಪ್ರದಕ್ಷಿಣೆ ಮಾಡಿ ಟ್ರಾಫಿಕ್ ಸಮಸ್ಯೆ ಕುರಿತು ಪರಿಶೀಲನೆ ನಡೆಸಿದರು.
ಬೆಂಗಳೂರು (ಜೂ.29): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ನಗರದ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ತತ್ಕ್ಷಣ ಮತ್ತು ದೀರ್ಘಕಾಲಿಕ ಪರಿಹಾರ ಕೈಗೊಳ್ಳುವ ಉದ್ದೇಶದಿಂದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಇದೇ ಮೊದಲ ಬಾರಿಗೆ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ತಡರಾತ್ರಿವರೆಗೆ ನಗರ ಪ್ರದಕ್ಷಿಣೆ ಮಾಡಿ ಟ್ರಾಫಿಕ್ ಸಮಸ್ಯೆ ಕುರಿತು ಪರಿಶೀಲನೆ ನಡೆಸಿದರು.
ಮಂಗಳವಾರ ರಾತ್ರಿ 10.30ರ ಸುಮಾರಿಗೆ ಬಿಬಿಎಂಪಿ ಕೇಂದ್ರ ಕಚೇರಿಯಿಂದ ನಗರ ಪ್ರದಕ್ಷಿಣೆ ಆರಂಭಗೊಂಡಿತು. ಬಿಬಿಎಂಪಿ ವಾಹನ ಮತ್ತು ಬಿಎಂಟಿಸಿ ವಜ್ರ ಬಸ್ನಲ್ಲಿ ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ಸಿಂಗ್, ಬಿಡಿಎ ಆಯುಕ್ತ ರಾಜೇಶ್ಗೌಡ, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ನಗರ ಪ್ರದಕ್ಷಿಣೆಗೆ ತೆರಳಿದರು.
ವಿವಿಧ ಇಲಾಖೆಗಳ ಮುಖ್ಯಸ್ಥರನ್ನೊಳಗೊಂಡ ತಂಡವು ಮೊದಲಿಗೆ ಗೊರಗುಂಟೆಪಾಳ್ಯ ಜಂಕ್ಷನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ತುಷಾರ್ ಗಿರಿನಾಥ್ ಅವರು, ಅಲ್ಪಾವಧಿ ಯೋಜನೆಯಲ್ಲಿ ರಸ್ತೆ ಪುನಶ್ಚೇತನ ಕಾರ್ಯಕೈಗೊಳ್ಳಲು ರಸ್ತೆಯನ್ನು ಮಿಲ್ಲಿಂಗ್ ಮಾಡಿ ರಾತ್ರಿ 11ರ ನಂತರ ಗುಣಮಟ್ಟಕಾಪಾಡಿಕೊಂಡು ಕೆಲಸ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಮೇಲುಸೇತುವೆ ಮೂಲಕ ಬಸ್ಗಳು ಹೋಗಲು ಆಗುತ್ತದೆಯೆ ಎಂಬುದನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಧೂಳು ತಿನ್ನುತ್ತಿದೆ ‘ಸಾಕು ನಾಯಿ ಲೈಸೆನ್ಸ್’ ಕಾಯ್ದೆ..!
ಪೀಣ್ಯದಲ್ಲಿರುವ ಬಸ್ ಟರ್ಮಿನಲ್ಗೆ ಸರ್ಕಾರಿ ಹಾಗೂ ಖಾಸಗಿ ಬಸ್ಗಳನ್ನು ಕಳುಹಿಸಲು ವ್ಯವಸ್ಥೆ ಮಾಡಬೇಕು. ಪಾದಚಾರಿ ಮಾರ್ಗ ದುರಸ್ತಿ, ಪಾದಚಾರಿ ಮಾರ್ಗ ಇಲ್ಲದ ಕಡೆ ಹೊಸದಾಗಿ ಮಾರ್ಗ ನಿರ್ಮಿಸಬೇಕು. ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಕೂಡಲೆ ಟೆಂಡರ್ ಮಾಡಬೇಕು. 4ಜಿ ವಿನಾಯಿತಿ ಅಡಿ ತ್ವರಿತವಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ಬೀದಿ ದೀಪಗಳನ್ನು ಅಳವಡಿಸಬೇಕೆಂದ ಅವರು, ದೀರ್ಘಾವಧಿ ಯೋಜನೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಪ್ಲಾನ್ ಮಾಡುತ್ತಿದ್ದು, ಶೀಘ್ರ ಯೋಜನೆ ರೂಪಿಸಲು ಬಿಡಿಎ ಆಯುಕ್ತರಿಗೆ ಸೂಚನೆ ನೀಡಿದರು.
ಫುಟ್ಪಾತ್ಗಳ ಅಭಿವೃದ್ಧಿ: ನಂತರ ಅಧಿಕಾರಿಗಳನ್ನೊಳಗೊಂಡ ತಂಡ ಹೆಬ್ಬಾಳ, ಕೆ.ಆರ್.ಪುರಂ, ಸಾರಕ್ಕಿ, ಇಬ್ಲೂರು ಜಂಕ್ಷನ್ ಮತ್ತು ಅಂತಿಮವಾಗಿ ಸಿಲ್್ಕಬೋರ್ಡ್ ಜಂಕ್ಷನ್ನಲ್ಲಿರುವ ಸಂಚಾರ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿತು. ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಶೇ.20ರಿಂದ 25ರಷ್ಟುಬಿಬಿಎಂಪಿ ಮತ್ತು ಜಲಮಂಡಳಿ ವತಿಯಿಂದ ನಿಯಂತ್ರಣ ಮಾಡಲು ತತ್ಕ್ಷಣ ಕ್ರಮಕೈಗೊಳ್ಳಬಹುದಾದ ವ್ಯವಸ್ಥೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು. ಪಾದಚಾರಿ ಮಾರ್ಗಗಳ ಅಭಿವೃದ್ಧಿ ಮಾಡಿ ಜನರು ರಸ್ತೆಗೆ ಇಳಿಯದಂತೆ ತಡೆಯುವ ಮೂಲಕ ವಾಹನಗಳು ಸರಾಗವಾಗಿ ಸಂಚರಿಸಲು ಅನುವು ಮಾಡಿಕೊಡಲು ಕಾರ್ಯಯೋಜನೆ ರೂಪಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಗೋರಗುಂಟೆಪಾಳ್ಯ ರಸ್ತೆ ಅಭಿವೃದ್ಧಿ: ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಗೊರಗುಂಟೆಪಾಳ್ಯದಲ್ಲಿ ಸಂಚಾರ ದಟ್ಟಣೆ ಜಾಸ್ತಿ ಇದ್ದು ರಸ್ತೆಯೂ ಉತ್ತಮ ಸ್ಥಿತಿಯಲ್ಲಿಲ್ಲ. ನಾಲ್ಕೈದು ವರ್ಷಗಳಿಂದ ರಸ್ತೆಯನ್ನು ಸರಿಪಡಿಸಿಲ್ಲ. ಬಿಎಂಆರ್ಡಿಯಿಂದ ವಾಪಸ್ ಪಡೆದಿದ್ದು ಈಗಾಗಲೇ ರಸ್ತೆ ಕಾಮಗಾರಿ ಆರಂಭಿಸಿದ್ದೇವೆ. ಬುಧವಾರದಿಂದ ಕಾಮಗಾರಿಗೆ ಇನ್ನಷ್ಟುಚುರುಕು ನೀಡಿ ಸುಸ್ಥಿತಿಗೆ ತರುತ್ತೇವೆ ಎಂದರು.
ಮುಖ್ಯಮಂತ್ರಿಯವರು ಗೊರಗುಂಟೆಪಾಳ್ಯ ರಸ್ತೆಯಲ್ಲಿ ಮೂರ್ನಾಲ್ಕು ಬಾರಿ ಸಂಚರಿಸಿದ್ದು ರಸ್ತೆ ಪರಿಸ್ಥಿತಿಯನ್ನು ತಿಳಿದುಕೊಂಡಿದ್ದಾರೆ ಎಂದ ಅವರು, ತರಾತುರಿಯಲ್ಲಿ ರಸ್ತೆಗೆ ಡಾಂಬರೀಕರಣ ಮಾಡಿದರೆ ರಸ್ತೆ ಉಳಿಯುವುದಿಲ್ಲ. ಮಿಲ್ಲಿಂಗ್ ಮೆಷಿನ್ ತಂದು ಕೆಲಸ ಆರಂಭಿಸಬೇಕಿದೆ. ಗುತ್ತಿಗೆದಾರರಲ್ಲಿ ಮಿಲ್ಲಿಂಗ್ ಮೆಷನ್ಗಳ ಸಂಖ್ಯೆ ಕಡಿಮೆ ಇದ್ದು, ನಾಳೆ ಆ ಯಂತ್ರಗಳನ್ನು ತಂದು ಕೆಲಸ ಆರಂಭಿಸುತ್ತೇವೆ. ಗೊರಗುಂಟೆಪಾಳ್ಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಅದನ್ನು ಸರಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದೆ. ಅದನ್ನು ತಾಂತ್ರಿಕವಾಗಿ ಪರಿಶೀಲಿಸಿ ಮುಂದಿನ ಪ್ರಕರಣ ಕೈಗೊಲ್ಳುತ್ತೇವೆ. ಬಿಡಿಎ ಸಂಚಾರಕ್ಕೆ ಯೋಗ್ಯವಾಗುವಂತೆ ಮೂರ್ನಾಲ್ಕು ಅಂಡರ್ಪಾಸ್ ಮಾಡಬೇಕೆನ್ನುವ ಪ್ರಸ್ತಾವನೆ ಮುಂದಿಟ್ಟಿದ್ದು, ಆ ಬಗ್ಗೆ ಬುಧವಾರ ಪರಿಶೀಲಿಸಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಸ್ಕೈವಾಕ್, ಶೌಚಾಲಯ ಅಭಿವೃದ್ಧಿ: ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ಸಿಂಗ್ ಮಾತನಾಡಿ, ಗೊರಗುಂಟೆಪಾಳ್ಯದ ರಸ್ತೆ ಪರಿಸ್ಥಿತಿ ಉತ್ತಮವಾಗಿಲ್ಲ. ಬುಧವಾರ ಮಿಲ್ಲಿಂಗ್ ಮಾಡಿ ರಸ್ತೆ ಕಾಮಗಾರಿ ಆರಂಭಿಸುತ್ತೇವೆ. ಹಾಗೆಯೇ ಬಸ್ ನಿಲ್ದಾಣದ ಸುತ್ತಮುತ್ತ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಅದಕ್ಕಾಗಿ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಜಾಗ ಸಿಕ್ಕದ ಕೂಡಲೇ ವಾರದಲ್ಲಿ ರಸ್ತೆಯ ಎರಡು ಕಡೆಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಜನರು ರಸ್ತೆ ದಾಟಲು ಅನುಕೂಲವಾಗುವಂತೆ ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್ ವ್ಯವಸ್ಥೆ ಮಾಡಲು ನಿರ್ಧರಿಸಿದ್ದು, ಶೀಘ್ರವೇ ಕಾರ್ಯಾರಂಭ ಮಾಡುತ್ತೇವೆ. ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಬಿಡಿಎಯಿಂದ ಯೋಜನೆಯೊಂದರ ಪ್ರಸ್ತಾವನೆ ಇದೆ. ನಾಳೆ ಆ ಕುರಿತು ಮಾತುಕತೆ ನಡೆಸಿ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದ ಅವರು, ಪೀಣ್ಯ ಮೇಲ್ಸೇತುವೆ ಸಾಮರ್ಥ್ಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(ಎನ್ಎಚ್ಎ) ಮುಖ್ಯಸ್ಥರು ಊರಲಿಲ್ಲ. ಅವರು ಬಂದ ಕೂಡಲೇ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರದ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ: ಬೆಂಗ್ಳೂರಿನ ಐತಿಹಾಸಿಕ ವಾರ್ಡ್ಗಳ ಹೆಸರೇ ಮಾಯ..!
ಸರಕು ಸಾಗಣಿಕೆಯ ಲಾರಿಗಳು, ಟ್ರಕ್ಗಳ ಸಂಚಾರಕ್ಕೆ ಅನುಮತಿ ನೀಡಿದಿದ್ದರೂ ದೂರ ಪ್ರಯಾಣಿಸುವ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳು ಫ್ಲೈಓವರ್ ಮೇಲೆ ಸಂಚರಿಸಲು ಅನುಮತಿ ಕೊಡುವಂತೆ ಕೆಎಸ್ಆರ್ಟಿಸಿ ಸಂಸ್ಥೆ ಸಲಹೆ ನೀಡಿದೆ. ಬಸವೇಶ್ವರ ನಿಲ್ದಾಣದಿಂದ ಬೇರೆ ಮಾರ್ಗದಲ್ಲಿ ಬಸ್ ಸಂಚರಿಸುವ ಕುರಿತು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.