Asianet Suvarna News Asianet Suvarna News

ಬಿಬಿಎಂಪಿಯ ವ್ಯಾಪ್ತಿ 1 ಕಿ.ಮೀ. ಹೆಚ್ಚಳ..!

ಬಿಬಿಎಂಪಿ 1 ಕಿಮೀ ಹೆಚ್ಚಳ, 243 ವಾರ್ಡ್‌| ಗ್ರಾಮ, ಗ್ರಾಪಂಗೆ ಸೇರಿದ ಪ್ರದೇಶ ಬಿಬಿಎಂಪಿಗೆ ಸೇರಿಸಲು ಶಿಫಾರಸು| ಉಭಯ ಸದನಗಳಲ್ಲಿ ಬಿಬಿಎಂಪಿ ಕಾಯ್ದೆ-2020 ವರದಿ ಮಂಡನೆ| ಪಾಲಿಕೆ ವ್ಯಾಪ್ತಿಯ ಶಾಸಕರಿಗೂ ಹೆಚ್ಚಿನ ಜವಾಬ್ದಾರಿ| ಸಮೀಕ್ಷೆ, ಜನಗಣತಿ ನೆಪವೊಡ್ಡಿ ಪಾಲಿಕೆ ಚುನಾವಣೆ ಮುಂದೂಡಲು ಸರ್ಕಾರ ಯತ್ನ?| 

BBMP 2020 Review Report Submitted in Session grg
Author
Bengaluru, First Published Dec 10, 2020, 7:36 AM IST

ಬೆಂಗಳೂರು(ಡಿ.10): ಬಿಬಿಎಂಪಿ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಲು ಬಿಬಿಎಂಪಿ ಸುತ್ತಲೂ ಇರುವ 1 ಕಿಲೋ ಮೀಟರ್‌ ವ್ಯಾಪ್ತಿಯ ಗ್ರಾಮ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗೆ ಸೇರಿದ ಪ್ರದೇಶವನ್ನು ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ’ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು. ಜೊತೆಗೆ ಮೇಯರ್‌ ಹಾಗೂ ಉಪಮೇಯರ್‌ ಅವಧಿಯನ್ನು 1 ವರ್ಷದಿಂದ ಎರಡೂವರೆ ವರ್ಷಗಳಿಗೆ ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ ಹಲವು ಪ್ರಮುಖ ಶಿಫಾರಸುಗಳನ್ನು ಒಳಗೊಂಡ ‘ಬಿಬಿಎಂಪಿ ವಿಧೇಯಕ-2020’ ಪರಿಶೀಲನಾ ವರದಿಯನ್ನು ಎಸ್‌.ರಘು ನೇತೃತ್ವದ ಜಂಟಿ ಪರಿಶೀಲನಾ ಸಮಿತಿಯು ಬುಧವಾರ ಉಭಯ ಸದನಗಳಲ್ಲಿ ಮಂಡಿಸಿತು.

159 ಪುಟಗಳ ವರದಿಯಲ್ಲಿ ಬಿಬಿಎಂಪಿ ಕಾರ್ಯವ್ಯಾಪ್ತಿ, ಮೇಯರ್‌-ಉಪಮೇಯರ್‌ ಅಧಿಕಾರವಧಿ, ಜವಾಬ್ದಾರಿ, ಆಯುಕ್ತರ ಬದಲಿಗೆ ಮುಖ್ಯ ಆಯುಕ್ತರ ನೇಮಕ, ಸ್ಥಾಯಿ ಸಮಿತಿಗಳು, ವಲಯ ಆಯುಕ್ತರ ಜವಾಬ್ದಾರಿಗಳು ಸೇರಿದಂತೆ ‘ಬಿಬಿಎಂಪಿ ಕಾಯಿದೆ-2020ಯಲ್ಲಿ’ ಇರಬೇಕಾದ ಎಲ್ಲಾ ಅಂಶಗಳ ಬಗ್ಗೆಯೂ ಉಲ್ಲೇಖಿಸಿದೆ.

ವಾರ್ಡ್‌ ಸಂಖ್ಯೆ ಹೆಚ್ಚಳ ಉಲ್ಲೇಖವಿಲ್ಲ:

ಆದರೆ, ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಈಗಾಗಲೇ ಹೆಚ್ಚಳ ಮಾಡಿ ಕಾಯಿದೆ ತಿದ್ದುಪಡಿ ಮಾಡಿದ್ದು, ಪರಿಶೀಲನಾ ಸಮಿತಿ ವರದಿಯಲ್ಲಿ ಅದರ ಉಲ್ಲೇಖ ಮಾಡಿಲ್ಲ. ಇನ್ನು ವರದಿ ಪುಸ್ತಕದಲ್ಲಿ ಇರದ ಬಿಬಿಎಂಪಿ ವ್ಯಾಪ್ತಿಯನ್ನು 1 ಕಿ.ಮೀ. ವಿಸ್ತರಿಸುವ ಅಂಶವನ್ನು ಪ್ರತ್ಯೇಕ ಚೀಟಿ ನೀಡಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಸಮಿತಿ ಅಧ್ಯಕ್ಷ ಎಸ್‌.ರಘು ಕೊನೆ ಕ್ಷಣದಲ್ಲಿ ಓದಿಸಿದರು.
ಈ ಮೂಲಕ ಬಿಬಿಎಂಪಿ ವ್ಯಾಪ್ತಿ ವಿಸ್ತರಣೆ, ಗಡಿ ಗುರುತಿಸುವಿಕೆ, ನೂತನವಾಗಿ ಸೇರ್ಪಡೆ ಆಗಬೇಕಿರುವ ಪ್ರದೇಶಗಳ ಸಮೀಕ್ಷೆ, ಜನಸಂಖ್ಯೆ ಗಣತಿ ಮತ್ತಿತರ ಕಾರ್ಯಗಳ ನೆಪವೊಡ್ಡಿ ಸುಪ್ರೀಂ ಕೋರ್ಟ್‌ನಲ್ಲಿ ಬಿಬಿಎಂಪಿ ಚುನಾವಣೆ ಮುಂದೂಡಲು ಸರ್ಕಾರ ಮನವಿ ಮಾಡಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಬಿಬಿಎಂಪಿ: ಬಡವರಿಗೆ ಶೇ.50 ಕಸ ಶುಲ್ಕ ರಿಯಾಯಿತಿ

ಮೇಯರ್‌ ಅವಧಿ ಹೆಚ್ಚಳ:

ವರದಿ ಅನ್ವಯ ಬಿಬಿ​ಎಂಪಿಯ ಆಡ​ಳಿತ ಹಾಗೂ ನಿರ್ವ​ಹಣೆ ಸುಗ​ಮ​ಗೊ​ಳಿ​ಸುವ ಉದ್ದೇ​ಶ​ದಿಂದ ಬಿಬಿ​ಎಂಪಿ ಮೇಯರ್‌ ಹಾಗೂ ಉಪ ಮೇಯರ್‌ ಅವರ ಅಧಿ​ಕಾರ ಅವ​ಧಿ​ಯನ್ನು ಒಂದು ವರ್ಷ​ದಿಂದ 30 ತಿಂಗ​ಳಿಗೆ (ಎ​ರಡೂವರೆ ವರ್ಷ​ಗ​ಳಿಗೆ) ಹೆಚ್ಚಳ ಮಾಡ​ಲಾ​ಗಿ​ದೆ. ಇನ್ನು ಮೇಯರ್‌ ಹಾಗೂ ಉಪ ಮೇಯರ್‌ ಕಾರ್ಯವ್ಯಾಪ್ತಿಯನ್ನು ನಿಗದಿ ಮಾಡಿದ್ದು, ಮೇಯರ್‌ ಯಾವುದಾದರೂ ವರದಿ ಅಥವಾ ಮಾಹಿತಿ ಕೇಳಿದರೆ 15 ದಿನಗಳೊಳಗಾಗಿ ಮುಖ್ಯ ಆಯುಕ್ತರು ನೀಡಬೇಕು ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಮೇಯರ್‌ ಅಧಿಕಾರವನ್ನು ತುಸು ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.

ಮುಖ್ಯ ಆಯುಕ್ತರ ನೇಮಕ:

ಬಿಬಿಎಂಪಿಗೆ ಪ್ರಸ್ತುತ ಇರುವ ಬಿಬಿಎಂಪಿ ಆಯುಕ್ತ ಹುದ್ದೆಯನ್ನು ಮುಖ್ಯ ಹುದ್ದೆಯಾಗಿ ಮಾಡಬೇಕು. ಇದಕ್ಕೆ ರಾಜ್ಯ ಸರ್ಕಾ​ರದ ಪ್ರಧಾನ ಕಾರ್ಯ​ದ​ರ್ಶಿಯ ಹುದ್ದೆ​ಗಿಂತ ಕಡಿಮೆ ಇಲ್ಲ​ದ​ವ​ರ​ನ್ನು ಸರ್ಕಾರ ನೇಮ​ಕ ಮಾಡ​ಲಿದೆ. ಜೊತೆಗೆ ಅಧಿ​ಕಾರ ಅವಧಿ ಎರ​ಡು ವರ್ಷ​ಗ​ಳಿ​ಗಿಂತ ಕಡಿಮೆ ಇಲ್ಲ​ದಂತೆ ನಿಯೋ​ಜನೆ ಮಾಡಬೇಕು. ಎರಡು ವರ್ಷದೊಳಗಾಗಿ ಮುಖ್ಯ ಆಯು​ಕ್ತರ ಆಡ​ಳಿತ ಹಾಗೂ ನಿರ್ವ​ಹಣೆ ಸರ್ಕಾ​ರಕ್ಕೆ ತೃಪ್ತಿ​ಕ​ರ​ವಾದ​ರೆ, ಆಯು​ಕ್ತರ ಅಧಿ​ಕಾರ ಅವ​ಧಿ​ಯ​ನ್ನು ಮುಂದು​ವ​ರಿ​ಸುವ ಅಧಿ​ಕಾರ ಸರ್ಕಾ​ರಕ್ಕೆ ಇರ​ಲಿದೆ. ಅವಧಿಗೆ ಮೊದಲು ವರ್ಗಾವಣೆ ಮಾಡಬೇಕಾದರೆ ಬಿಬಿಎಂಪಿ ಮೇಯರ್‌ ಅವರಿಗೆ ಕಾರಣಗಳನ್ನು ತಿಳಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇನ್ನು ವಲಯ ಆಯುಕ್ತರು ಸರ್ಕಾರದ ಕಾರ್ಯದರ್ಶಿ ಹಂತಕ್ಕಿಂತ ಕಡಿಮೆ ಇಲ್ಲದ ಅಧಿಕಾರಿಯಾಗಿರಬೇಕು ಎಂದು ಹೇಳಲಾಗಿದೆ.

ವಿಪತ್ತು ನಿರ್ವಹಣಾ ಸಮಿತಿ ರಚನೆ:

ನಗ​ರ​ದಲ್ಲಿ ಸಾರ್ವಜ​ನಿ​ಕರಿಗೆ ತುರ್ತಾಗಿ ಸ್ಪಂದಿ​ಸುವ ಉದ್ದೇ​ಶ​ದಿಂದ ವಿಪತ್ತು ನಿರ್ವ​ಹಣಾ ಸಮಿ​ತಿ​ಯ​ನ್ನು ರಚನೆ ಮಾಡುವ ಪ್ರಸ್ತಾ​ವ​ನೆ​ ಸಹ ಇದೆ. ನಗ​ರ​ದಲ್ಲಿ ಮಳೆಯಿಂದ ಸೃಷ್ಟಿ​ಯಾ​ಗುವ ಅನಾ​ಹು​ತ​ಗ​ಳ​ನ್ನು ತಪ್ಪಿ​ಸುವ ನಿಟ್ಟಿ​ನಲ್ಲಿ ಈ ಸಮಿತಿ ಮಹ​ತ್ವ​ ಪಡೆದುಕೊಳ್ಳಲಿದೆ.

BBMP ವಾರ್ಡ್‌ ಸಂಖ್ಯೆ ಹೆಚ್ಚಿಸಿದ್ರೆ ಚುನಾವಣೆ 1 ವರ್ಷ ತಡ..!

ಏರಿಯಾ ಸಭಾ ಅಸ್ತಿತ್ವಕ್ಕೆ ಶಿಫಾರಸು:

ಪಾಲಿ​ಕೆಯ ವ್ಯಾಪ್ತಿ​ಯಲ್ಲಿ ಅಧಿ​ಕಾರ ವಿಕೇಂದ್ರೀ​ಕ​ರಣ ಮಾಡುವ ಉದ್ದೇ​ಶ​ದಿಂದ ವಿಧಾ​ನ​ಸಭಾ ಕ್ಷೇತ್ರ​ವಾರು ಹಾಗೂ ವಾರ್ಡ್‌​ನಲ್ಲಿ ‘ಪ್ರಾಂತ್ಯ ಸಭೆ’ಗಳನ್ನು (ಏರಿಯಾ ಸಭಾ) ಅಸ್ತಿತ್ವಕ್ಕೆ ತರಬೇಕು ಎಂಬ ಶಿಫಾ​ರಸು ಮಾಡ​ಲಾ​ಗಿದ್ದು, ಏರಿಯಾ ಸಭಾಗಳಲ್ಲಿ ವಾರ್ಡಿನ ಪ್ರತಿಯೊಬ್ಬ ಮತದಾರರೂ ಸದಸ್ಯರಾಗಿರಬೇಕು ಎಂದು ಉಲ್ಲೇಖಿಸ​ಲಾ​ಗಿದೆ.

ಶಾಸ​ಕರ ಅಧ್ಯಕ್ಷತೆಯಲ್ಲಿ ಸಮಿತಿ:

ಪಾಲಿಕೆ ವ್ಯಾಪ್ತಿ​ಯಲ್ಲಿ ಇಲ್ಲಿ​ಯ​ವ​ರೆಗೆ ವಾರ್ಡ್‌ ಮಟ್ಟ​ದ ಸಮಿ​ತಿ​ಗಳು ಅಸ್ತಿ​ತ್ವ​ದಲ್ಲಿ ಇದ್ದವು. ಜೊತೆಗೆ ಬಿಬಿಎಂಪಿ ಆಡಳಿತದಲ್ಲಿ ಶಾಸಕರ ಪಾತ್ರ ತೀರಾ ಕಡಿಮೆ ಇತ್ತು. ಹೀಗಾಗಿ ಉದ್ದೇ​ಶಿತ ಮಸೂ​ದೆ​ಯಲ್ಲಿ ಪ್ರತಿ ವಿಧಾ​ನ​ಸಭಾ ಕ್ಷೇತ್ರ​ವಾರು ಸಮಿ​ತಿ​ಗ​ಳನ್ನು ರಚನೆ ಮಾಡುವ ಪ್ರಸ್ತಾ​ವನೆ ಇದ್ದು, ಇದು ಜಾರಿ​ಯಾ​ದಲ್ಲಿ ಶಾಸ​ಕರು ಸಹ ವಾರ್ಡ್‌ ಮಟ್ಟದ ಸಮ​ಸ್ಯೆ​ಗಳು ಹಾಗೂ ಯೋಜ​ನೆ​ಗಳ ಬಗ್ಗೆ ಚರ್ಚೆ ಮಾಡುವಂತಾಗಲಿದೆ.

ಪ್ರತ್ಯೇಕ ಬಾಕ್ಸ್‌.. ಹೊಸ ತೆರಿಗೆ ಪ್ರಸ್ತಾಪ

ಹಾಲಿ ಇರುವ ತೆರಿಗೆಗಳ ಜೊತೆಗೆ ಮನೋರಂಜನಾ ತೆರಿಗೆ ವಿಧಿಸಲು ಶಿಫಾರಸು ಮಾಡಿದ್ದು ಒಂದು ವೇಳೆ ಇದು ಅನುಷ್ಠಾನಗೊಂಡರೆ ಬೆಂಗಳೂರು ನಾಗರಿಕರು ಚಲನಚಿತ್ರ ಹಾಗೂ ಕ್ರಿಕೆಟ್‌ ಪಂದ್ಯಾವಳಿಗಳ ವೀಕ್ಷಣೆಯಂತಹ ಮನೋರಂಜನಾ ಚಟುವಟಿಕೆಗೆ ಹೆಚ್ಚುವರಿ ಹಣ ಭರಿಸಬೇಕಾಗಲಿದೆ. ಘನ​ತ್ಯಾಜ್ಯ ನಿರ್ವ​ಹಣಾ ಸೆಸ್‌, ಕಟ್ಟಡ ಸೆಸ್‌ಗಳೊಂದಿಗೆ ಮನೋ​ರಂಜನಾ ತೆರಿಗೆ ಹಾಗೂ ಭೂ ಸಾರಿ​ಗೆ ಉಪ​ಕರ ಇದಾ​ಗಿ​ದೆ. ಸಮ​ಯಾ​ನು​ಸಾರ ಪಾಲಿಕೆ ತೆರಿಗೆ ವಿಧಿ​ಸುವ ಮತ್ತು ತೆರಿಗೆ ವ್ಯವ​ಸ್ಥೆ​ಯಲ್ಲಿ ಪರಿ​ಷ್ಕ​ರಣೆ ಮಾಡುವ ಅಧಿ​ಕಾ​ರ​ವನ್ನು ಸಹ ಹೊಂದಿ​ದೆ ಎಂದು ಹೇಳ​ಲಾ​ಗಿದೆ.

ಕ್ಷೇತ್ರ ಸಮಾ​ಲೋ​ಚನಾ ಸಮಿ​ತಿ

ಸರ್ಕಾ​ರವು ಪಾಲಿ​ಕೆ ವ್ಯಾಪ್ತಿಯ ಪ್ರತಿ ವಿಧಾ​ನ​ಸಭಾ ಕ್ಷೇತ್ರ ವ್ಯಾಪ್ತಿ​ಯಲ್ಲಿ ಒಂದು ವಿಧಾ​ನ​ಸಭಾ ಸಮಾ​ಲೋ​ಚನಾ ಸಮಿ​ತಿ​ಯ​ನ್ನು ರಚ​ನೆ ಮಾಡ​ಲಿದೆ. ಆಯಾ ವಿಧಾ​ನ​ಸಭಾ ಕ್ಷೇತ್ರದ ಶಾಸ​ಕರೇ ಈ ಸಮಿ​ತಿಯ ಅಧ್ಯ​ಕ್ಷ​ರಾ​ಗಿ​ರ​ಲಿ​ದ್ದಾರೆ. ಆಯಾ ವಿಧಾ​ನ​ಸಭಾ ಕ್ಷೇತ್ರ ವ್ಯಾಪ್ತಿ​ಯ​ಲ್ಲಿನ ವಾರ್ಡ್‌​ಗಳ ವಾರ್ಡ್‌ ಸದ​ಸ್ಯರು ಈ ವಾರ್ಡ್‌​ನಲ್ಲಿ ಸದ​ಸ್ಯ​ರಾ​ಗಿ​ರ​ಲಿ​ದ್ದಾರೆ. ಈ ಸಮಿ​ತಿಯ ಅಧಿ​ಕಾರ ಅವಧಿ 30 ತಿಂಗಳು ಇರ​ಲಿದೆ. ಜೊತೆಗೆ ಪಾಲಿಕೆ ವ್ಯಾಪ್ತಿ​ಯಲ್ಲಿ ಪ್ರತಿ ವಲ​ಯಕ್ಕೂ ಒಂದು ಸಮಿ​ತಿ​ಯನ್ನು ರಚನೆ ಮಾಡಲು ನಿರ್ಧ​ರಿಸಲಾಗಿದೆ.

ಸ್ಥಾಯಿ ಸಮಿ​ತಿ​ ಸಂಖ್ಯೆ ಇಳಿಕೆ

ಬಿಬಿ​ಎಂಪಿಯ ಸ್ಥಾಯಿ ಸಮಿ​ತಿ​ಗಳ ಸಂಖ್ಯೆ​ಯನ್ನು 12ರಿಂದ 8ಕ್ಕೆ ಇಳಿ​ಸ​ಲಾ​ಗಿದೆ. ಅಪೀ​ಲು​ಗಳ ಸಮಿ​ತಿ​ಯನ್ನು ಕೈಬಿ​ಡ​ಲಾ​ಗಿದೆ. ನಗ​ರ​ದಲ್ಲಿ ಆಡ​ಳಿ​ತಾ​ತ್ಮಕ ನಿರ್ವ​ಹಣೆ ಮಾಡುವ ಉದ್ದೇ​ಶ​ದಿಂದ ಆರೋಗ್ಯ ಸ್ಥಾಯಿ ಸಮಿ​ತಿ​ಯಿಂದ ಘನ​ತ್ಯಾಜ್ಯ ನಿರ್ವ​ಹಣೆಯನ್ನು ಪ್ರತ್ಯೇಕ ಮಾಡಿ ಹೊಸ ಸಮಿತಿ ಸೃಜಿ​ಸ​ಲಾ​ಗಿದೆ. ಅಲ್ಲದೆ, ವಿಪತ್ತು ನಿರ್ವ​ಹಣೆ ಸಮಿತಿಯನ್ನು ಸಹ ಹೊಸ​ದಾಗಿ ಸೇರ್ಪಡೆ ಮಾಡ​ಲಾ​ಗಿದೆ. ಹಾಲಿ ಅಸ್ತಿ​ತ್ವ​ದ​ಲ್ಲಿದ್ದ ನಾಲ್ಕು ಸಮಿ​ತಿ​ಗ​ಳ​ನ್ನು ಇತರ ಸಮಿ​ತಿ​ಗ​ಳೊಂದಿ​ಗೆ ವಿಲೀನ ಮಾಡ​ಲಾ​ಗಿದೆ.

ಕನ್ನಡದಲ್ಲಿಲ್ಲ ವರದಿ!

ಕರುನಾಡ ರಾಜಧಾನಿ ಬೆಂಗಳೂರಿನ ಪಾಲಿಕೆಗೆ ಕಾಯಿದೆ ರೂಪಿಸಲು ಸಲ್ಲಿಸಿರುವ ಜಂಟಿ ಪರಿಶೀಲನಾ ಸಮಿತಿಯ ವರದಿಯು ಕನ್ನಡದಲ್ಲಿ ಇಲ್ಲ. ಹೌದು, ವರದಿ ಪುಸ್ತಕದ ಮುಖಪುಟ, ಮೊದಲ ಎರಡು ಹಾಗೂ ಕೊನೆಯ ಎರಡು ಪುಟಗಳು ಮಾತ್ರ ಕನ್ನಡದಲ್ಲಿವೆ. ಉಳಿದಂತೆ 150ಕ್ಕೂ ಹೆಚ್ಚು ಪುಟಗಳಲ್ಲಿನ ಎಲ್ಲಾ ಶಿಫಾರಸುಗಳೂ ಇಂಗ್ಲಿಷ್‌ನಲ್ಲಿಯೇ ನೀಡಲಾಗಿದೆ.
 

Follow Us:
Download App:
  • android
  • ios