ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ಕಚೇರಿಗಳಿಗೆ ಬರುವ ಅರ್ಜಿ ಸ್ವೀಕೃತಿ, ಕಡತಗಳನ್ನು ಸ್ವೀಕರಿಸಿದ ದಿನದಿಂದ 15 ದಿನಗಳ ಒಳಗೆ ವಿಲೇವಾರಿ ಮಾಡದಿದ್ದರೆ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿದೆ.

ಬೆಂಗಳೂರು (ಜ.1): ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ಕಚೇರಿಗಳಿಗೆ ಬರುವ ಅರ್ಜಿ ಸ್ವೀಕೃತಿ, ಕಡತಗಳನ್ನು ಸ್ವೀಕರಿಸಿದ ದಿನದಿಂದ 15 ದಿನಗಳ ಒಳಗೆ ವಿಲೇವಾರಿ ಮಾಡದಿದ್ದರೆ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿದೆ. ಈ ಸಂಬಂಧ ವಿವಿಯ ಕುಲಸಚಿವರು ಸುತ್ತೋಲೆ ಹೊರಡಿಸಿದ್ದು, ವಿವಿಯ ಪ್ರತಿ ವಿಭಾಗದ ಕಚೇರಿಗಳಿಗೆ ಬರುವ ಅರ್ಜಿ, ಕಡತಗಳನ್ನು 15 ದಿನಗಳಲ್ಲಿ ಆದ್ಯತೆ ಮೇರೆಗೆ ವಿಲೇವಾರಿ ಮಾಡುವಂತೆ ಈಗಾಗಲೇ ಸೂಚನೆ ನೀಡಿದ್ದರೂ ಕಾರ್ಯವೈಖರಿ ಸುಧಾರಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇನ್ಮುಂದೆ ಯಾವುದೇ ಅರ್ಜಿ, ಸ್ವೀಕೃತಿ, ಕಡತಗಳನ್ನು 15 ದಿನಗಳ ಒಳಗೆ ವಿಲೇವಾರಿ ಮಾಡದೆ ಹೋದರೆ ಕಾನೂನಾತ್ಮಕ ಶಿಸ್ತು ಕ್ರಮ ಕೈಗೊಳ್ಳುವುದಾಗಿ ವಿವಿಯ ಎಲ್ಲಾ ಉಪಕುಸಚಿವರು, ಸಹಾಯಕ ಕುಲ ಸಚಿವರು, ಅಧೀಕ್ಷಕರು ಹಾಗೂ ಕೆಳಹಂತದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಇದುವರೆಗೆ ಸ್ವೀಕೃತವಾಗಿರುವ ಎಲ್ಲ ಅರ್ಜಿ, ಕಡತಗಳನ್ನು ಜ.9ರೊಳಗೆ ಆದ್ಯತೆ ಮೇರೆಗೆ ವಿಲೇವಾರಿಗೊಳಿಸಿ ಅವುಗಳ ಮಾಹಿತಿಯನ್ನು ತಮ್ಮ ಕಚೇರಿಗೆ ಸಲ್ಲಿಸಬೇಕು. ತಪ್ಪಿದರೆ ಆಯಾ ವಿಭಾಗದ ಮೇಲಾಧಿಕಾರಿಗಳನ್ನು ಹೊಣೆಗಾರರನ್ನಾಗಿಸುವುದಾಗಿ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಯುವಿಸಿಇಯಲ್ಲಿ ಹಳೆ ವಿದ್ಯಾರ್ಥಿಗಳ ಸಂಗಮ
ಬೆಂಗಳೂರು: ಐತಿಹಾಸಿಕ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜನ್ನು (ಯುವಿಸಿಇ) ರಾಜ್ಯ ಸರ್ಕಾರ ಐಐಟಿ ಮಾದರಿಯಲ್ಲಿ ಸ್ವಾಯತ್ತ ವಿಶ್ವವಿದ್ಯಾಲವಾಗಿ ಮೇಲ್ದರ್ಜೆಗೇರಿಸುತ್ತಿರುವುದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಫ್ಲೋರಿಡಾ ಇಂಟರ್‌ ನ್ಯಾಷನಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆದ ಯುವಿಸಿಇ ಹಳೆಯ ವಿದ್ಯಾರ್ಥಿ ಡಾ. ಎಸ್‌.ಎಸ್‌. ಅಯ್ಯಂಗಾರ್‌ ಹೇಳಿದರು.

ನಗರದ ಕೆ.ಆರ್‌.ವೃತ್ತ ಬಳಿಯ ಯುವಿಸಿಇ ಆವರಣದಲ್ಲಿ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಿಸಿಇ ಅನ್ನು ಐಐಟಿ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿರುವುದು ಹಳೆಯ ವಿದ್ಯಾರ್ಥಿಗಳಾದ ನಮ್ಮೆಲ್ಲರಿಗೂ ಖುಷಿಯ ವಿಚಾರ. ಇಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮತ್ತು ಶಿಸ್ತುಬದ್ಧವಾಗಿ ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಗತ್ತಿಗೆ ತಮ್ಮ ಶ್ರೇಷ್ಠತೆಯನ್ನು ತೋರಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಯುವಿಸಿಇ ನಿರ್ದೇಶಕ ಡಾ. ಎಚ್‌.ಎನ್‌. ರಮೇಶ್‌ ಮಾತನಾಡಿ, ಮುಂದಿನ 3 ವರ್ಷಗಳಲ್ಲಿ ಯುವಿಸಿಯನ್ನು ಐಐಟಿ ಗಿಂತ ಉತ್ತಮ ಸಂಸ್ಥೆಯಾಗಿ ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ. ಇದಕ್ಕೆ ಸಮಾಜದ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬೆಳ್ತಂಗಡಿಯಲ್ಲಿ ಮರೈನ್‌ ಡಿಪ್ಲೋಮಾ ಕೋರ್ಸ್‌ ಜೂನ್‌ನಲ್ಲಿ ಆರಂಭ, ವಿಟಿಯು ಒಪ್ಪಿಗೆ

ಸದ್ಯಕ್ಕೆ ಯುವಿಸಿಇ ಆರ್ಥಿಕತೆಯ ವಿಚಾರದಲ್ಲಿ ಇನ್ನೂ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿಯೇ ಇದ್ದು, ಏ.1ರಿಂದ ಸಂಪೂರ್ಣವಾಗಿ ಸ್ವಾಯತ್ತತೆ ಸಾಧಿಸಲಿದೆ. ಅತಿ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯಗಳ ರಾಷ್ಟ್ರೀಯ ವಾಲಿಬಾಲ್ ಕೂಟಕ್ಕೆ ಉಡುಪಿ ಪೂರ್ಣಪ್ರಜ್ಞಾ ಕಾಲೇಜು ಆತಿಥ್ಯ

ಕಾರ್ಯಕ್ರದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಲ್‌. ವಾಸುದೇವಮೂರ್ತಿ, ಐಐಎಸ್ಸಿ ಏರೋಸ್ಪೇಸ್‌ ಇಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಾ. ಗೋಪಾಲನ್‌ ಜಗದೀಶ್‌, ಡಾ. ಸುಬ್ಬಾರಾವ್‌, ವೆಂಕಟೇಶ್‌ ಪ್ರಹ್ಲಾದ್‌, ರಾಮರಾವ್‌ ಸೇರಿದಂತೆ ಅನೇಕ ಮಂದಿ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.