Asianet Suvarna News Asianet Suvarna News

5 ಲಕ್ಷ ಲಂಚ ಪಡೆದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಸಸ್ಪೆಂಡ್‌..!

ಫಾರಂ-3 ನೀಡಲು ಲಂಚಕ್ಕೆ ಬೇಡಿಕೆಯಿಟ್ಟು ಸಿಕ್ಕಿಬಿದ್ದ ಕಮಿಷನರ್‌| ಈ ಬಗ್ಗೆ ಎರಡು ಆಡಿಯೋ ಕ್ಲಿಪ್‌, ವಾಟ್ಸಾಪ್‌ ಸಂದೇಶ ಹಾಗೂ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟ| ಬಳ್ಳಾರಿ ಮಹಾನಗರ ಪಾಲಿಕೆಯ ದೈನಂದಿನ ಕೆಲಸ ಕಾರ್ಯಗಳಲ್ಲಿ ಮುಜುಗರ| 

Ballari Corporation Commissioner M V Tusharamani Suspend for Bribe Case grg
Author
Bengaluru, First Published Oct 17, 2020, 2:22 PM IST

ಬಳ್ಳಾರಿ(ಅ.17): ವ್ಯಕ್ತಿಯೊಬ್ಬರಿಂದ 5 ಲಕ್ಷ ರು. ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾದ ಎಂ.ವಿ. ತುಷಾರಮಣಿ ಅವರನ್ನು ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಅ.15ರಂದು ವ್ಯಕ್ತಿಯೊಬ್ಬರಿಂದ ಫಾರಂ-3 ನೀಡಲು ಎಂ.ವಿ. ತುಷಾರಮಣಿ ಲಂಚದ ಬೇಡಿಕೆ ಇಟ್ಟು ಲಂಚ ಸ್ವೀಕರಿಸಿ ಆಯುಕ್ತರ ಪದವಿಯ ಘನತೆಗೆ ಧಕ್ಕೆ ತಂದಿದ್ದಾರೆ. ಈ ಬಗ್ಗೆ ಎರಡು ಆಡಿಯೋ ಕ್ಲಿಪ್‌, ವಾಟ್ಸಾಪ್‌ ಸಂದೇಶ ಹಾಗೂ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ಬಳ್ಳಾರಿ ಮಹಾನಗರ ಪಾಲಿಕೆಯ ದೈನಂದಿನ ಕೆಲಸ ಕಾರ್ಯಗಳಲ್ಲಿ ಮುಜುಗರ ಉಂಟಾಗುತ್ತಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಇಲಾಖೆಗೆ ವರದಿ ನೀಡಿದ್ದರು.

ಇದಕ್ಕೂ ಮೊದಲು ಅ.9ರಂದು ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ದಾಳಿಯಲ್ಲಿ ಪಾಲಿಕೆಯ ಆಯುಕ್ತರ ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಎಸ್‌. ಪಾಟೀಲ ಹಾಗೂ ಹೊರಗುತ್ತಿಗೆ ಅಟೆಂಡರ್‌ ಎಸ್‌. ಭಾಷ 50 ಸಾವಿರ ರು. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶದ ಗಡಿಪ್ರದೇಶದಲ್ಲಿ ಗಡಿಗುರುತು ಕಾರ್ಯ ಶುರು

ಎರಡೂ ಪ್ರಕರಣದ ಬಗ್ಗೆ ಬಳ್ಳಾರಿಯ ನವಕರ್ನಾಟಕ ಯುವ ಶಕ್ತಿ ಸಂಘಟನೆ ದೂರು ನೀಡಿ ಆಯುಕ್ತರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದೆ. ಲಂಚದ ಹಣ ಪಡೆಯಲು ಕೆಎ-34, ಎಂ-6771 ವಾಹನ ಬಳಸಿರುವ ದೃಶ್ಯಾವಳಿಯೂ ಲಭ್ಯವಾಗಿದೆ. ಹೀಗಾಗಿ ವರದಿ ಆಧರಿಸಿ ಅಮಾನತುಪಡಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಈರಪ್ಪ ಬಿರಾದಾರ ಪ್ರಭಾರ ಹುದ್ದೆಗೆ ನೇಮಕ:

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಹಾಲಿ ಆಯುಕ್ತರಾದ ಈರಪ್ಪ ಬಿರಾದಾರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಪ್ರಭಾರ ಹುದ್ದೆಯಲ್ಲಿ ಮುಂದುವರೆಯುವಂತೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
 

Follow Us:
Download App:
  • android
  • ios