ಜುಲೈ ಮೊದಲ ವಾರದಿಂದ ನಮ್ಮ ಮೆಟ್ರೋದ ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗದ ಪ್ರಾಯೋಗಿಕ ಚಾಲನೆ ಆರಂಭಿಸಲು ಬೆಂಗಳೂರು ಮೆಟ್ರೋ ನಿಗಮ (ಬಿಎಂಆರ್ಸಿಎಲ್) ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು (ಜೂ.11): ಜುಲೈ ಮೊದಲ ವಾರದಿಂದ ನಮ್ಮ ಮೆಟ್ರೋದ ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗದ ಪ್ರಾಯೋಗಿಕ ಚಾಲನೆ ಆರಂಭಿಸಲು ಬೆಂಗಳೂರು ಮೆಟ್ರೋ ನಿಗಮ (ಬಿಎಂಆರ್ಸಿಎಲ್) ಸಿದ್ಧತೆ ಮಾಡಿಕೊಂಡಿದೆ. ನಮ್ಮ ಮೆಟ್ರೋದ ಎರಡನೇ ಹಂತದ ವಿಸ್ತರಿತ ಮೂರನೇ ಮಾರ್ಗ ಐಟಿ ಕಾರಿಡಾರ್ ಕೆ.ಆರ್.ಪುರ-ವೈಟ್ಫೀಲ್ಡ್ ಮಾರ್ಗವನ್ನು ಮಾ.25ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಆದರೆ ಈ ಮಾರ್ಗದ ನಡುವೆ ಬೈಯಪ್ಪನಹಳ್ಳಿ-ಕೆ.ಆರ್.ಪುರಂ 2.5 ಕಿ.ಮೀ. ಮಾರ್ಗ ‘ಮಿಸ್ಸಿಂಗ್ ಲಿಂಕ್’ ಆಗಿಯೇ ಉಳಿದುಕೊಂಡಿದೆ. ಜುಲೈ ಮಧ್ಯದಿಂದ ಈ ಮಾರ್ಗದಲ್ಲಿ ಬಿಎಂಆರ್ಸಿಎಲ್ ವಾಣಿಜ್ಯ ಸಂಚಾರ ಆರಂಭಿಸುವ ಗುರಿ ಹೊಂದಿದೆ.
ಮೂರುವರೆ ತಿಂಗಳ ಬಳಿಕ ಇಲ್ಲಿನ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಟ್ರ್ಯಾಕ್ ಅಳವಡಿಕೆ, ಬೆನ್ನಿಗಾನಹಳ್ಳಿ ಬಳಿ ತೆರೆದ ವೆಬ್ ಗರ್ಡರ್ ಅಳವಡಿಕೆ ಪೂರ್ಣಗೊಂಡಿದೆ. ಮಾರ್ಗದಲ್ಲಿನ ಸಿಗ್ನಲಿಂಗ್ ಕಾಮಗಾರಿ ಸೇರಿದಂತೆ ಮೂರು ನಿಲ್ದಾಣಗಳಲ್ಲಿ ಒಂದಿಷ್ಟುಕಾಮಗಾರಿ, ವಿದ್ಯುದ್ದೀಕರಣ ಕೆಲಸ ಬಾಕಿ ಉಳಿದಿದೆ. ಬೆನ್ನಿಗಾನಹಳ್ಳಿ ಬಳಿ ವೆಬ್ ಗರ್ಡರ್ ಅಳವಡಿಕೆ ವಿಳಂಬವಾಗಿದ್ದೇ ಈ ಮಾರ್ಗದ ಕಾಮಗಾರಿ ಕುಂಠಿತಗೊಳ್ಳಲು ಕಾರಣವಾಗಿತ್ತು. ಮುಂದಿನ ಇಪ್ಪತ್ತು ದಿನಗಳಲ್ಲಿ ಈ ಕೆಲಸಗಳನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ಬಿಎಂಆರ್ಸಿಎಲ್ ಕಾಮಗಾರಿಯನ್ನು ಚುರುಕುಗೊಳಿಸಿದೆ. ಇದಾದ ಬಳಿಕ 2.5 ಕಿ.ಮೀ. ಮಾರ್ಗದಲ್ಲಿ ಎರಡು ವಾರ ರೈಲುಗಳ ಪ್ರಾಯೋಗಿಕ ಚಾಲನೆ ನಡೆಯಲಿದೆ. ಬಳಿಕ ಮೆಟ್ರೋ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್ಎಸ್) ಸುರಕ್ಷತಾ ತಪಾಸಣೆಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದರು.
ಮೆಟ್ರೋಗಾಗಿ 203 ಮರಗಳನ್ನು ಕಡಿಯಲು ಹೈಕೋರ್ಟ್ ಒಪ್ಪಿಗೆ
ಈ ಪ್ರಕ್ರಿಯೆಗಳು ಮುಗಿದು ಸಿಗ್ನಲಿಂಗ್, ವಯಡಕ್ಟ್, ವಾಕ್ ವೇ, ಟ್ರ್ಯಾಕ್, ಕವ್ರ್ ವ್ಯವಸ್ಥೆ ಸೇರಿದಂತೆ ಬೇರಿಂಗ್ ತಪಾಸಣೆ ಮುಗಿದು ಜುಲೈ 15ರೊಳಗೆ ಸಿಎಂಆರ್ಎಸ್ನಿಂದ ಹಸಿರು ನಿಶಾನೆ ಸಿಗಬಹುದು ಎಂಬುದು ಬಿಎಂಆರ್ಸಿಎಲ್ ನಿರೀಕ್ಷೆ. ಸದ್ಯ ಕೆ.ಆರ್.ಪುರ-ವೈಟ್ಫೀಲ್ಡ್ ಮಾರ್ಗದಲ್ಲಿ ಪ್ರತಿನಿತ್ಯ 28 ಸಾವಿರ ಜನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಐಟಿ ಕಾರಿಡಾರ್ ಎನ್ನಿಸಿಕೊಂಡರೂ ನಿರೀಕ್ಷಿತ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುತ್ತಿಲ್ಲ. ‘ ಮಿಸ್ಸಿಂಗ್ ಲಿಂಕ್’ ಪೂರ್ಣಗೊಂಡರೆ ಪ್ರಯಾಣಿಕರ ಸಂಖ್ಯೆ 75 ಸಾವಿರ-1 ಲಕ್ಷವರೆಗೆ ಹೆಚ್ಚಬಹುದು, ಆದಾಯ ಕೂಡ ಹೆಚ್ಚಬಹುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.
ಎಲ್ಲೆಲ್ಲಿ ಮೆಟ್ರೋ ವಿಸ್ತರಣೆ ಸಾಧ್ಯ ಸರ್ವೆ ನಡೆಸಿ ವರದಿ ನೀಡಿ: ನಮ್ಮ ಮೆಟ್ರೋ ರೈಲು ಮಾರ್ಗದ ಹಂತ 3ಎ ಯೋಜನೆಯಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಮಾರ್ಗ ವಿಸ್ತರಿಸಲು ಸರ್ವೆ ನಡೆಯುತ್ತಿದೆ. ಎಲ್ಲೆಲ್ಲಿ ಮೆಟ್ರೋ ಮಾರ್ಗ ವಿಸ್ತರಿಸಲು ಸಾಧ್ಯವೋ ಅಲ್ಲಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಶಾಂತಿ ನಗರದಲ್ಲಿರುವ ಬಿಎಂಆರ್ಸಿಎಲ್ ಕೇಂದ್ರ ಕಚೇರಿಯಲ್ಲಿ ಮೆಟ್ರೋ ಅಧಿಕಾರಿಗಳ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೆಟ್ರೋ ಕಾರ್ಯಾಚರಣೆ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಡೆಯುತ್ತಿದೆ.
ಸದ್ಯಕ್ಕೆ ಮೆಟ್ರೋ ಪ್ರಯಾಣ ದರ ಹೆಚ್ಚಿಸುವುದಿಲ್ಲ: ಪರ್ವೇಜ್ ಸ್ಪಷ್ಟನೆ
ತಿಂಗಳಿಗೆ .48 ಕೋಟಿ ಸಂಗ್ರಹವಾಗುತ್ತಿದ್ದು, ಈ ಪೈಕಿ .42 ಕೋಟಿ ಮೆಟ್ರೋ ಕಾರ್ಯಾಚರಣೆಗೆ ವೆಚ್ಚವಾಗುತ್ತಿದೆ ಎಂದರು. 3ನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಲಾಗಿದೆ. ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ (32.15 ಕಿ.ಮೀ) ಮತ್ತು 2ನೇ ಕಾರಿಡಾರ್ನಲ್ಲಿ ಹೊಸಹಳ್ಳಿ- ಕಡಬಗೆರೆ(12.50 ಕಿ.ಮೀ) ವರೆಗೆ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಬಿಎಂಆರ್ಸಿಎಲ್ ಕೇವಲ ಪ್ರಯಾಣಿಕರಿಂದ ಮಾತ್ರ ಆದಾಯ ನಿರೀಕ್ಷೆ ಮಾಡದೆ, ಇತರೆ ಆದಾಯ ಮೂಲಗಳನ್ನು ಗುರುತಿಸಿ ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡಬೇಕು. ಮೆಟ್ರೋ ನಿಲ್ದಾಣ ಹೊರಗೆ ಮತ್ತು ಒಳಗೆ ಜಾಹೀರಾತು ಹಾಕಲು ಇರುವಂತೆ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದೇವೆ ಎಂದರು.
