ಮುಸ್ಲಿಂ ಧಾರ್ಮಿಕ ಕಾರ್ಯದಲ್ಲಿ ನಿಮ್ಮ ಕುಟುಂಬ ಭಾಗವಹಿಸಿಲ್ಲವೆಂದು 'ವೃದ್ಧನ ಶವ ಕೊಂಡೊಯ್ಯಲು ಡೋಲಿ ಹಾಗೂ ಶವ ಹೂಳಲು ಸ್ಮಶಾನದಲ್ಲಿ ಜಾಗ ಕೊಡದ' ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 

ಬಾಗಲಕೋಟೆ (ಫೆ.24): ಮುಸ್ಲಿಂ ಧರ್ಮದ ಯಾವುದೇ ಆಚರಣೆಗಳು, ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ಕೆ ನೀವಾಗಲೀ, ನಿಮ್ಮ ಕುಟುಂಬವಾಗಲೀ ಯಾರೊಬ್ಬರೂ ಬಂದಿಲ್ಲ. ಹೀಗಾಗಿ, ನಿಮ್ಮ ತಾತ ಹುಸೇನ್‌ಸಾಬ್‌ ಅವರ ಮೃತ ದೇಹವನ್ನು ಮುಸ್ಲಿಂ ಸಮುದಾಯದ ಸ್ಮಶಾನದಲ್ಲಿ ಹೂಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. 

Add Asianetnews Kannada as a Preferred SourcegooglePreferred

ಹೌದು, ಬಾಗಲಕೋಟೆ ಮುಧೋಳ ತಾಲ್ಲೂಕಿನ ರನ್ನಬೆಳಗಲಿಯಲ್ಲಿ ಧಾರ್ಮಿಕ ಕಟ್ಟುಪಾಡುಗಳಿಗೆ ಜೋತು ಬಿದ್ದಿರುವ ಗುಂಪಿನಿಂದ, ಇಂತಹ ಅಮಾನವೀಯ ಘಟನೆಯೊಂದು ನಡೆದಿದೆ. ಮುಸ್ಲಿಂ ವೃದ್ದನ ಶವ ಸಾಗಿಸಲು ಡೋಲಿಯನ್ನೂ ಕೊಡುತ್ತಿಲ್ಲ. ಹೋಗಲಿ ಡೋಲಿಯನ್ನು ಪಕ್ಕದ ಊರಿನಿಂದ ತಂದು ಶೃಂಗರಿಸಿ ಮೆರವಣಿಗೆ ಮೂಲಕ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋದರೆ, ಸ್ಮಶಾನದಲ್ಲಿ ಶವ ಹೂಳಲೂ ಅವಕಾಶ ಕೊಡದಿರುವ ಘಟನೆ ನಡೆದಿದೆ. ಇಷ್ಟೆಲ್ಲ ರಾದ್ದಾಂತ ಮಾಡಿದವರು ಬೇರಾರೂ ಅಲ್ಲ, ಅದೇ ಮುಸ್ಲಿಂ ಸಮುದಾಯದ ಹಿರಿಯ ಮುಖಂಡರಾಗಿದ್ದಾರೆ.

ಕೊಡಗು ಜುಮ್ಮಾ ಮಸೀದಿಯಲ್ಲಿ ನಮಾಜ್ ಮಾಡಿದ ಮಹಿಳೆಗೆ 25 ವರ್ಷ ಬಹಿಷ್ಕಾರ; ಗಂಡನ ಅಂತ್ಯಕ್ರಿಯೆಗೂ ಅವಕಾಶವಿಲ್ಲ

ಹುಸೇನಸಾಬ್ ಹುದ್ದಾರ(90) ಎಂಬ ವೃದ್ಧ ಬೆಳಗ್ಗೆ 10 ಗಂಟೆಗೆ ವಯೋಸಹಜ ಖಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಇನ್ನು ಶವವನ್ನು ಮೆರವಣಿಗೆ ಮೂಲಕ ಸಾಗಿಸಲು ಮಸೀದಿ ಮುಖ್ಯಸ್ಥರಲ್ಲಿ ಡೋಲಿ ಕೊಡಿ ಎಂದು ಕೇಳಿದ್ದಾರೆ. ಆಗ, ಮನೆಯ ಯಜಮಾನನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ನಿಮಗೆ ಡೋಲಿಯನ್ನೂ ಕೊಡುವುದಿಲ್ಲ, ಸ್ಮಶಾನಸಲ್ಲಿ ಶವವನ್ನೂ ಹೂಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಗ್ರಾಮದ ಮಸೀದಿಯಲ್ಲಿ ಪರಸ್ಪರ ವಾಗ್ವಾದ ಮತ್ತು ಮಾರಾಮಾರಿ ನಡೆದಿದೆ. 

ಇದನ್ನು ಪ್ರಶ್ನೆ ಮಾಡಿದ ಮೃತ ವೃದ್ದನ ಮಗ ವಜೀರ್‌ನನ್ನು, ಮಸೀದಿಯ ವಿರೋಧಿ ಬಣದ ಮುಸ್ಲಿಮರು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಜೊತೆಗೆ, ಮತ್ತೆ ಕೆಲವು ಹಿರಿಯ ಮುಖಂಡರನ್ನು ಕರೆದುಕೊಂಡು ಬಂದು ಡೋಲಿ ಕೊಡುವುದು ನಿರಾಕರಣೆ ಹಾಗೂ ಸ್ಮಶಾನದಲ್ಲಿ ಜಾಗ ಕೊಡುವುದಿಲ್ಲ ಎಂಬ ಮಾತನ್ನು ಪುನರುಚ್ಛರಿಸಿದ್ದಾರೆ. ಇದಕ್ಕೆ ಮುಸ್ಲಿಂ ಸಮುದಾಯದ ಹಿರಿಯ ಮುಖಂಡರೂ ಕೂಡ ಸಾಥ್‌ ನೀಡಿದ್ದಾರೆ. ನೀವು ಮುಸ್ಲಿಂ ಸಮಾಜದ ಯಾವುದೇ ಧಾರ್ಮಿಕ ಕಾರ್ಯಕ್ಕೆ ಬರೋದಿಲ್ಲ. ನಮ್ಮ ಸಮಾಜಕ್ಕೆ ಸಹಕಾರ ನೀಡೋದಿಲ್ಲ ಎಂದು ಅವರ ಕುಟುಂಬಕ್ಕೆ ಬೈದಿದ್ದಾರೆ.

ಅಯೋಧ್ಯೆ ರೈಲಿಗೆ ಬೆಂಕಿ ಹಚ್ತೀನೆಂದ ಮುಸ್ಲಿಂ ವ್ಯಕ್ತಿ ಬೇರಾರೂ ಅಲ್ಲ, ಸ್ವತಃ ರೈಲ್ವೆ ಇಲಾಖೆ ನೌಕರ

ಇದರಿಂದ ವೃದ್ಧನ ಶವವನ್ನು ಅಂತ್ಯಕ್ರಿಯೆ ಮಾಡಲು ಸಾಧ್ಯವಾಗದೇ, ಅಂತ್ಯಕ್ರಿಯೆಗೆ ಮುಂದಾದ ಮಗನೂ ಕೂಡ ಪೆಟ್ಟು ತಿಂದು ಮನೆಯಲ್ಲಿ ಕುಳಿತುಕೊಂಡಿದ್ದರು. ಇನ್ನು ಧೈರ್ಯ ಮಾಡಿ ಅಲ್ಲಿಂದ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನಂತರ, ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರನ್ನು ಸಮಾಧಾನ ಮಾಡಿದ್ದಾರೆ. ಜೊತೆಗೆ, ಒಂದೇ ಸಮುದಾಯದ ನೀವು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ತಿಳಿ ಹೇಳಿದ್ದಾರೆ. ಇಷ್ಟಕ್ಕೂ ಬಗ್ಗದಿದ್ದರೆ ಪೊಲೀಸರ ಶೈಲಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆಗ ಮುಸ್ಲಿಂ ಮುಖಂಡರು ಸ್ಮಶಾನದಲ್ಲಿ ವೃದ್ಧ ಹುಸೇನ್‌ಸಾಬ್ ಅವರ ಶವವನ್ನು ಅಂತ್ಯಕ್ರಿಯೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.