ದುರ್ವ್ಯಸನ ಮತ್ತು ದುಶ್ಚಟಗಳು ಮನುಷ್ಯನನ್ನು ಅನ್ಯ ಮಾರ್ಗಕ್ಕೆ ಕೊಂಡೊಯ್ಯಲಿದ್ದು, ಪ್ರತಿಯೊಬ್ಬರು ಅವುಗಳಿಂದ ದೂರ ಇರಬೇಕು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕೆ.ಆರ್. ನಗರ : ದುರ್ವ್ಯಸನ ಮತ್ತು ದುಶ್ಚಟಗಳು ಮನುಷ್ಯನನ್ನು ಅನ್ಯ ಮಾರ್ಗಕ್ಕೆ ಕೊಂಡೊಯ್ಯಲಿದ್ದು, ಪ್ರತಿಯೊಬ್ಬರು ಅವುಗಳಿಂದ ದೂರ ಇರಬೇಕು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

Add Asianetnews Kannada as a Preferred SourcegooglePreferred

ಪಟ್ಟಣದ ಬಸವೇಶ್ವರ ಬಡಾವಣೆಯ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಸುತ್ತೂರು ಮಠ ಮತ್ತು ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕುಡಿತ ಬಿಡಿಸುವ ಉಚಿತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಂಡು ಸನ್ಮಾರ್ಗದಲ್ಲಿ ನಡೆದರೆ ಸಕಲವನ್ನು ಸಂಪಾದಿಸಿ ಉತ್ತಮ ಜೀವನ ನಡೆಸಬಹುದು ಎಂದರು.

ದೌರ್ಬಲ್ಯತೆಯನ್ನು ಮೈಗೂಡಿಸಿಕೊಳ್ಳದೆ ಅವುಗಳನ್ನು ಗೆದ್ದು ಇತರರಿಗೆ ಮಾದರಿಯಾಗಿ ಎಂದು ಮಾರ್ಗದರ್ಶನ ನೀಡಿದ ಶ್ರೀಗಳು ಕುಡಿತದಿಂದ ಬದುಕು ಮತ್ತು ಭವಿಷ್ಯ ಎರಡು ಹಾಳಾಗಲಿದ್ದು ಅದರಿಂದ ಗಾವುದ ದೂರವಿದ್ದು ಆರೋಗ್ಯವಂತ ಜೀವನ ನಡೆಸಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಕಲರು ಕೈಜೋಡಿಸಬೇಕೆಂದು ತಿಳಿಸಿದರು.

ದುಶ್ಚಟವನ್ನು ತ್ಯಜಿಸಿದರೆ ಜಗತ್ತಿನಲ್ಲಿ ಸರ್ವವನ್ನು ಸಾಧಿಸಬಹುದು ಎಂಬುದಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ನಮಗೆ ಉದಾಹರಣೆಯಾಗಿದ್ದು ಅವರನ್ನು ಅನುಕರಣೆ ಮಾಡಬೇಕೆಂದು ನುಡಿದರು.

10 ದಿನಗಳ ಕಾಲ ನಡೆದ ಕುಡಿತ ಬಿಡಿಸುವ ಶಿಬಿರದಲ್ಲಿ ಬಾಗವಹಿಸಿದ್ದವರು ಶಾಶ್ವತವಾಗಿ ಕುಡಿಯುವುದನ್ನು ನಿಲ್ಲಿಸಿ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಇತರರಿಗೂ ಮನವರಿಕೆ ಮಾಡಿ ಎಂದು ಕಿವಿಮಾತು ಹೇಳಿದರು.

ಶಾಸಕ ಡಿ. ರವಿಶಂಕರ್ ಮಾತನಾಡಿ ಸುತ್ತೂರು ಮಠದ ಸಮಾಜ ಮುಖಿ ಕೆಲಸಗಳು ದೇಶಕ್ಕೆ ಮಾದರಿಯಾಗಿದ್ದು ಅಕ್ಷರ, ಅನ್ನ ಮತ್ತು ಜ್ಞಾನ ದಾಸೋಹ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ ಎಂದರು.

ಸುತ್ತೂರು ಮಠದ ವತಿಯಿಂದ ಕೆ.ಆರ್. ನಗರದಲ್ಲಿ ನಡೆಯುತ್ತಿರುವ 16ನೇ ಕುಡಿತ ಬಿಡಿಸುವ ಶಿಬಿರದಲ್ಲಿ 53 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದು, ಎಲ್ಲರೂ ಮುಂದಿನ ದಿನಗಳಲ್ಲಿ ಕುಡಿಯುವುದನ್ನು ಬಿಟ್ಟು ಸುಂದರ ಮತ್ತು ಸಂತಸದ ಜೀವನ ನಡೆಸಬೇಕೆಂದು ಆಶಿಸಿದರು.

ಬೆಟ್ಟದಪುರದ ಸಲಿಲಾಖ್ಯ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ವಿಧಾನಪರಿಷತ್ ಮಾಜಿ ಸದಸ್ಯ ಬಿ.ಎಸ್. ತೋಂಟದಾರ್ಯ, ನವ ನಗರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ನಂಜಪ್ಪ, ಜಿಪಂ ಮಾಜಿ ಅಧ್ಯಕ್ಷ ಎ.ಎಸ್. ಚನ್ನಬಸಪ್ಪ ಮಾತನಾಡಿದರು.

ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿ, ಪುರಸಭೆ ಮಾಜಿ ಸದಸ್ಯ ಕೆ.ಪಿ. ಪ್ರಭುಶಂಕರ್, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ವಕೀಲ ಕೆ.ಸಿ.ಶಿವಕುಮಾರ್, ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ. ರವಿಕುಮಾರ್ ಇದ್ದರು.