Asianet Suvarna News Asianet Suvarna News

ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಸುರೇಶ್‌, ಬಳಿಗಾರ್‌ ಜುಗಲ್ಬಂದಿ

ನನ್ನ ಟಾರ್ಗೆಟ್‌ ಮಾಡಲಾಗಿದೆ: ಮನು ಬಳಿಗಾರ| ಶೃಂಗೇರಿ ಸಮ್ಮೇಳನ ಅಧ್ಯಕ್ಷ, ಚಿಕ್ಕಮಗಳೂರು ಕಸಾಪ ಅಧ್ಯಕ್ಷರ ಬದಲಾವಣೆಗೆ ಸೂಚಿಸಿಲ್ಲ|ಚಿಕ್ಕಮಗಳೂರು ಕಸಾಪ ಅಧ್ಯಕ್ಷರನ್ನು ಬದಲಿಸಲು ನಾನು ಹೇಳಿಲ್ಲ|

B Suresh Manu Baligar Talks Over Sahitya Sammelana
Author
Bengaluru, First Published Feb 8, 2020, 9:51 AM IST

ಕಲಬುರಗಿ[ಫೆ.08]: ಶೃಂಗೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಲೀ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಲೀ ಬದಲಾಯಿಸುವುದಕ್ಕೆ ನಾನು ಸೂಚನೆ ನೀಡಿರಲಿಲ್ಲ. ಈ ವಿಷಯದಲ್ಲಿ ನನ್ನನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್‌ ಸ್ಪಷ್ಟಪಡಿಸಿದ್ದಾರೆ.

ಈ ವಿದ್ಯಮಾನ ನಡೆದಿದ್ದು ಕಲಬುರಗಿ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಶುಕ್ರವಾರ ನಡೆದ ಚಲನಚಿತ್ರ-ಕನ್ನಡ ಸಾಹಿತ್ಯ ಎಂಬ ವಿಚಾರ ಗೋಷ್ಠಿಯಲ್ಲಿ. ಆ ಗೋಷ್ಠಿಯಲ್ಲಿ ಭಾಗವಹಿಸಿದ್ದ ನಿರ್ದೇಶಕ ಬಿ.ಸುರೇಶ್‌ ಚಿಕ್ಕಮಗಳೂರು ಕಸಾಪ ಅಧ್ಯಕ್ಷರನ್ನು ಬದಲಿಸುವ ನಿರ್ಧಾರ ಖಂಡಿಸುತ್ತೇನೆ ಎಂದರು. ಆಗ ವೇದಿಕೆಯ ಮೇಲಿದ್ದ ಬಳಿಗಾರ್‌ ಅದಕ್ಕೆ ಪ್ರತಿಕ್ರಿಯಿಸಿ, ಅನೇಕರು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ನಾನು ಜಿಲ್ಲಾ ಅಧ್ಯಕ್ಷರನ್ನು ಆರಿಸುವಾಗ ಹಸ್ತಕ್ಷೇಪ ಮಾಡುವುದಿಲ್ಲ. ಚಿಕ್ಕಮಗಳೂರು ಕಸಾಪ ಅಧ್ಯಕ್ಷರನ್ನು ಬದಲಿಸಲು ನಾನು ಹೇಳಿಲ್ಲ. ಈ ವೇದಿಕೆ ಮೇಲೆ ನಿಂತು ಹೇಳುತ್ತೇನೆ, ಈಗಲೂ ಹೇಳುವುದಿಲ್ಲ ಎಂದರು.

ಚಿತ್ರರಂಗದಲ್ಲಿ ಸೋಷಿಯಲ್ ಮೀಡಿಯಾ ಮಾಫಿಯಾ: ರಾಜೇಂದ್ರ ಸಿಂಗ್ ಬಾಬು

ಇದೇ ವೇಳೆ ಶೃಂಗೇರಿ ಸಮ್ಮೇಳನಕ್ಕೆ ಅನುದಾನ ಕೊಡಬೇಡಿ ಅಂತಲೂ ನಾನು ಹೇಳಿರಲಿಲ್ಲ. ಅಲ್ಲಿ ಪ್ರಕ್ಷುಬ್ಧ ವಾತಾವರಣವಿದೆ ಎಂದು ವರದಿ ಬಂದಿರುವುದರಿಂದ ಒಂದೆರಡು ತಿಂಗಳು ಸಮ್ಮೇಳನವನ್ನು ಮುಂದಕ್ಕೆ ಹಾಕಿ ಎಂದಷ್ಟೇ ಕಾರ್ಯಕಾರಿ ಸಮಿತಿಗೆ ಹೇಳಿದ್ದೆ. ಆಗ ನನಗೆ ಅಧ್ಯಕ್ಷರು ಯಾರು ಅಂತಲೂ ತಿಳಿದಿರಲಿಲ್ಲ ಎಂದೂ ತಿಳಿಸಿದ್ದಾರೆ.

‘ಮಾಧ್ಯಮಗಳು ಸಾಕುನಾಯಿ ಆಗದಂತೆ ಎಚ್ಚರಿಕೆ ವಹಿಸಬೇಕು’

ಇನ್ನು ಅನುದಾನ ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆಯೂ ಮಾತನಾಡಿದ ಅವರು, ಆರ್ಥಿಕ ವಿಚಾರಗಳಲ್ಲಿ ಕಸಾಪಗೆ ಸಾರ್ವಭೌಮತ್ವ ಇಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿದರೆ ಮಾತ್ರ ಕಸಾಪಕ್ಕೆ ಹಣ ಬರುತ್ತದೆ. ಅದು ಸಾರ್ವಜನಿಕರ ದುಡ್ಡು. ಕಸಾಪ ಘನತೆಗೆ ಧಕ್ಕೆ ತರದಂತೆ ನಾವು ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಸುರೇಶ್‌, ಬಳಿಗಾರ್‌ ಸಂಭಾವನೆ ಜುಗಲ್ಬಂದಿ

ಗೋಷ್ಠಿಯಲ್ಲಿ ಭಾಗವಹಿಸುವುದಕ್ಕೆ ಕಸಾಪ ಗೌರವ ಸಂಭಾವನೆ ನೀಡುತ್ತದೆ. ಆದರೆ ತಮಗೆ ಈ ಸಂಭಾವನೆ ಬೇಡ, ಕನ್ನಡದ ಕೆಲಸಗಳಿಗೆ ಬಳಸಿಕೊಳ್ಳಿ. ಕನ್ನಡಕ್ಕಾಗಿ ನಾವು ಹೀಗೆ ಸೇವೆ ಮಾಡಬಲ್ಲೆವು ಎಂದು ಬಿ.ಸುರೇಶ್‌ ಹೇಳಿದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮನು ಬಳಿಗಾರ್‌, ನನ್ನ ನಾಲ್ಕು ವರ್ಷದ ಸೇವಾವಧಿಯಲ್ಲಿ ಇದುವರೆಗೂ ಮಾಸಿಕ ಗೌರವ ಧನ ಪಡೆದಿಲ್ಲ. ಅದರ ಹಣ ಸುಮಾರು ಏಳೂವರೆ ಲಕ್ಷ ರು. ಕಸಾಪದಲ್ಲಿದೆ ಎಂದು ತಿರುಗೇಟು ನೀಡಿದರು.

Follow Us:
Download App:
  • android
  • ios