Asianet Suvarna News Asianet Suvarna News

Udupi: ನಿರ್ಗತಿಕರ ಆಶಾಕಿರಣ, ತನ್ನ ಸ್ವಂತ ಜಾಗವನ್ನು ಅನಾಥರಿಗಾಗಿ ಮುಡಿಪಾಗಿಟ್ಟ ಆಯಿಶಾ ಬಾನು!

ಮಾನವೀಯತೆ ,ಕರುಣೆ ಮತ್ತು ತಾಯಿ ಮಮತೆಗೆ ಧರ್ಮದ ಹಂಗಿಲ್ಲ. ಕಾರ್ಕಳದ ಆಯಿಶಾ ಬಾನು ಅಕ್ಷರಶಃ ನಿರ್ಗತಿಕರ ಬಾಳಿನ ಆಶಾಕಿರಣ. ಕಾರ್ಕಳ ನಗರದಲ್ಲಿ ಇವರು ಸುಮಾರು 75ರಷ್ಟು ಜನ ಅನಾಥರನ್ನು ಸಾಕಿ ಸಲಹಿ ತಾಯಿಯ ಮಮತೆ ನೀಡಿ ಪೊರೆಯುತ್ತಿದ್ದಾರೆ.

Ayisha Banu Dedicated Her Own Space For Orphans At Udupi gvd
Author
First Published Aug 11, 2023, 4:52 PM IST

ಉಡುಪಿ (ಆ.11): ಮಾನವೀಯತೆ ,ಕರುಣೆ ಮತ್ತು ತಾಯಿ ಮಮತೆಗೆ ಧರ್ಮದ ಹಂಗಿಲ್ಲ. ಕಾರ್ಕಳದ ಆಯಿಶಾ ಬಾನು ಅಕ್ಷರಶಃ ನಿರ್ಗತಿಕರ ಬಾಳಿನ ಆಶಾಕಿರಣ. ಕಾರ್ಕಳ ನಗರದಲ್ಲಿ ಇವರು ಸುಮಾರು 75ರಷ್ಟು ಜನ ಅನಾಥರನ್ನು ಸಾಕಿ ಸಲಹಿ ತಾಯಿಯ ಮಮತೆ ನೀಡಿ ಪೊರೆಯುತ್ತಿದ್ದಾರೆ. ಹಲವು ಅನಾಥಾಶ್ರಮ, ವೃದ್ಧಾಶ್ರಮಗಳ ಬಗ್ಗೆ ನೀವು ಕೇಳಿರಬಹುದು. ಆದರೆ ಕಾರ್ಕಳದ ಈ ಅನಾಥಾಶ್ರಮ ನಡೆಸುತ್ತಿರುವಾಕೆ ಓರ್ವ ಮಹಿಳೆ. 

ಏಕಾಂಗಿಯಾಗಿ ಅನಾಥರನ್ನು ತನ್ನ ಆಶ್ರಮಕ್ಕೆ ಕರೆತಂದು ಅವರ ಆರೈಕೆ, ಹಸಿವು ತಣಿಸುವುದರ ಜೊತೆಗೆ ಅವರ ಚಿಕಿತ್ಸೆಯನ್ನೂ‌ ನೋಡಿಕೊಳ್ಳುತ್ತಿದ್ದಾರೆ. ಆಯಿಶಾರ ನಿರ್ಗತಿಕರ ಕೇಂದ್ರದಲ್ಲಿ ಮಹಾರಾಷ್ಟ್ರ, ಅಸ್ಸಾಂ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ನಿರ್ಗತಿಕರಿದ್ದಾರೆ.ಅವರಿಗೆಲ್ಲ ಇಲ್ಲಿ ಭರಪೂರ ಊಟ ತಿಂಡಿಯ ವ್ಯವಸ್ಥೆ ಇದೆ. ಚಿಕಿತ್ಸೆ ಇದೆ. ಉಚಿತ ಬಟ್ಟೆಬರೆ ಇದೆ. ಒಟ್ಟಾರೆ ನಿರ್ಗತಿಕರು ಮತ್ತು ದಿಕ್ಕಿಲ್ಲದವರು ತಮ್ಮ ಎಲ್ಲ ಜಂಜಾಟಗಳನ್ನು ಮರೆತು ಬದುಕಲು ಬೇಕಾದ ಸರ್ವಸ್ವವನ್ನೂ ಏಕಾಂಗಿಯಾಗಿ ಮಾಡುತ್ತಿದ್ದಾರೆ ಆಯಿಶಾ. 

ಕೊರೋನಾ ಸಾವು, ರೈತರ ಆತ್ಮಹತ್ಯೆಯಲ್ಲೂ ನಂ.1: ಇದೀಗ ಮದ್ರಾಸ್ ಐನಲ್ಲೂ ನಂ.1 ಜಿಲ್ಲೆ ಹಾವೇರಿ!

ತಮ್ಮ ಯೌವನಾವಸ್ಥೆಯಲ್ಲಿ ಆಯಿಶಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರ ಮನೆಯವರು ಆಂಬುಲೆನ್ಸ್ ಸೇವೆ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಓರ್ವ ನಿರ್ಗತಿಕ ಯುವತಿಯನ್ನು‌ ಆಯಿಶಾ ಕರೆತರಬೇಕಾದ ಪ್ರಸಂಗ ಬಂದಿತು. ಅವರನ್ನು ಉಳಿಸಿಕೊಳ್ಳಲು ಜಾಗ ಇರಲಿಲ್ಲ. ತಮ್ಮದೇ ಮನೆಯಲ್ಲಿ ಉಳಿಸಿಕೊಂಡರು. ಇದು ಊರವರಿಗೆ ಗೊತ್ತಾಯಿತು. ಒಬ್ಬೊಬ್ಬರೇ ಕರೆ ಮಾಡಲು ಶುರು‌ ಮಾಡಿದರು. ನೋಡ ನೋಡುತ್ತಾ ಮನೆ ನಿರ್ಗತಿಕರಿಂದ ತುಂಬಿ ಹೋಯಿತು! ಇದೀಗ ತಮ್ಮ ಮನೆಗಾಗಿ ಖರೀದಿಸಿದ ಜಾಗದಲ್ಲೇ ಸಣ್ಣದೊಂದು 'ಸುರಕ್ಷಾ' ಎಂಬ ಹೆಸರಿನ ಕೇಂದ್ರ ಮಾಡಿಕೊಂಡಿದ್ದಾರೆ. 

ಸಚಿವ ಚಲುವರಾಯಸ್ವಾಮಿ ವಿರುದ್ಧ ‘ಪೇ-ಸಿಎಸ್‌’ ಅಭಿಯಾನ: ಬಿಜೆಪಿಗರ ಬಂಧನ

ಇಡೀ ದಿನ ಅವರ ಸೇವೆಯಲ್ಲೇ ಏಕಾಂಗಿಯಾಗಿ ದುಡಿಯುತ್ತಾರೆ. ಆಯಿಶಾ ಅವರ ಈ ಸೇವೆಗೆ ಯಾರೋ ಅಲ್ಪ ಸ್ವಲ್ಪ ದೇಣಿಗೆ ನೀಡುತ್ತಾರೆ. ಉಳಿದದ್ದನ್ನು ಅವರೇ ಹೊಂದಿಸಿಕೊಳ್ಳುತ್ತಾರೆ. ಕಳೆದ 8 ವರ್ಷಗಳಿಂದ ಪ್ರೀತಿಯಿಂದಲೇ ಈ ಸೇವೆ ಮಾಡಿದ ಇವರನ್ನು ಹಲವು ಸಂಘಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಇಬ್ಬರು ಹೆಣ್ಣುಮಕ್ಕಳ ತಾಯಿ ಆಯಿಶಾ, ಜೀವನಪೂರ್ತಿ ಇವರ ಸೇವೆ ಮಾಡುತ್ತೇನೆ ಅಂತಾರೆ. ಸಾರ್ಥಕ ಜೀವನ ಎಂದರೆ ಇದೇ ಅಲ್ಲವೇ? ಆಯಿಶಾ ಅವರಿಗೆ ಸಹಾಯ ಮಾಡಬಯಸುವವರು ಸಹಕರಿಸಬಹುದು.

Follow Us:
Download App:
  • android
  • ios