ಪಾಲಿಕೆ ಪೋರ್ಟಲ್‌ಗೆ ವರದಿ ನೀಡದೆ ನಿರ್ಲಕ್ಷ್ಯ, ಇದರಿಂದ ನಿಖರ ಲೆಕ್ಕ ಸಮಸ್ಯೆ| ಕೊರೋನಾ ನಿಯಂತ್ರಣವಾಗಬೇಕಾದರೆ ಸಾರ್ವಜನಿಕರು ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು|  ಮನೆಯಲ್ಲಿಯೇ ಇರಬೇಕು. ಅನಗತ್ಯವಾಗಿ ಓಡಾಟ ನಡೆಸದೆ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು: ಅಶೋಕ್‌| 

ಬೆಂಗಳೂರು(ಏ.28): ನಗರದ ಖಾಸಗಿ ಪ್ರಯೋಗಾಲಯಗಳು ಕೋವಿಡ್‌ ಪರೀಕ್ಷಾ ವರದಿ ಬಂದ ತಕ್ಷಣವೇ ಮೊದಲು ಬಿಬಿಎಂಪಿ ಪೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಸೂಚನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಖಾಸಗಿ ಪ್ರಯೋಗಾಲಯಗಳು ಬಿಬಿಎಂಪಿ ಪೋರ್ಟ್‌ಗೆ ಮಾಹಿತಿ ನೀಡದಿರುವುದಕ್ಕೆ ಅಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಪ್ರಯೋಗಾಲಯಗಳು ಕೋವಿಡ್‌ ಪರೀಕ್ಷಾ ವರದಿಯನ್ನು ಸಂಬಂಧಿಸಿದವರಿಗೆ ನೀಡಲಾಗುತ್ತಿದೆ. ಆದರೆ, ಅದರ ಮಾಹಿತಿಯನ್ನು ಬಿಬಿಎಂಪಿಯ ವಾರ್‌ರೂಂಗೆ ನೀಡುತ್ತಿಲ್ಲ. ಹೀಗಾಗಿ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಹೀಗೆ ಮಾಡುತ್ತಿರುವ ಖಾಸಗಿ ಪ್ರಯೋಗಾಲಯಗಳಿಗೆ ಎಚ್ಚರಿಕೆ ನೀಡಲಾಗಿದೆ. ಮೊದಲು ಮಾಹಿತಿಯನ್ನು ಬಿಬಿಎಂಪಿಯ ಪೋರ್ಟ್‌ಗೆ ನೀಡಬೇಕು. ಹಾಗೆಯೇ ಪರೀಕ್ಷಾ ವರದಿ ವಿಳಂಬವಾಗುತ್ತಿರುವ ಕಾರಣ ಖಾಸಗಿ ಪ್ರಯೋಗಾಲಯಗಳಿಗೆ ತಕ್ಷಣ ಬಿಬಿಎಂಪಿ ಡೇಟಾ ಆಪರೇಟರ್‌ಗಳನ್ನು ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹರಿದುಬಂದು ನೆರವಿನ ಹಸ್ತ: ಭಾರತಕ್ಕೆ ವೈದ್ಯಕೀಯ ಉಪಕರಣ ರವಾನೆ!

ಸಾರ್ವಜನಿಕರಿಗೆ ಹಾಸಿಗೆ ವ್ಯವಸ್ಥೆಯ ಬಗ್ಗೆ ಸ್ಪಷ್ಟಮಾಹಿತಿ ದೊರೆಯಬೇಕು ಎಂಬ ನಿಟ್ಟಿನಲ್ಲಿ ವಿಶೇಷ ಕ್ರಮ ವಹಿಸಲಾಗಿದೆ. ಹಾಸಿಗೆಗಳ ವ್ಯವಸ್ಥೆಯನ್ನು ಪಬ್ಲಿಕ್‌ಡೊಮೈನ್‌ಗೆ ಹಾಕುವ ಮೂಲಕ ಯಾವ ಆಸ್ಪತ್ರೆಯಲ್ಲಿ ಎಷ್ಟುಹಾಸಿಗೆಗಳು ಲಭ್ಯ ಇವೆ ಎಂಬುದು ಜನರಿಗೆ ನಿಖರವಾಗಿ ತಿಳಿಯಲಿದೆ. ಈ ಬಗ್ಗೆ ತಕ್ಷಣ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು ರಾತ್ರಿಯಿಂದಲೇ ಜನತಾ ಕರ್ಫ್ಯೂ ಜಾರಿಯಾಗಿದ್ದು, ಕೊರೋನಾ ನಿಯಂತ್ರಣವಾಗಬೇಕಾದರೆ ಸಾರ್ವಜನಿಕರು ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮನೆಯಲ್ಲಿಯೇ ಇರಬೇಕು. ಅನಗತ್ಯವಾಗಿ ಓಡಾಟ ನಡೆಸದೆ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದರು.