ನಮ್ಮ ಪಕ್ಷ ಯಾವುದೇ ಸವಾಲು ಕೊಟ್ಟರೂ ಸಂತೋಷದಿಂದ ಯಶಸ್ವಿಯಾಗಿ ನಿರ್ವಹಿಸುವುದಾಗಿ ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ ತಿಳಿಸಿದರು.

 ಕುಣಿಗಲ್‌ (ನ.14): ನಮ್ಮ ಪಕ್ಷ ಯಾವುದೇ ಸವಾಲು ಕೊಟ್ಟರೂ ಸಂತೋಷದಿಂದ ಯಶಸ್ವಿಯಾಗಿ ನಿರ್ವಹಿಸುವುದಾಗಿ ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ ತಿಳಿಸಿದರು.

ಯಡಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಏನೇ ಸವಾಲು ಕೊಟ್ಟರೂ ಅದನ್ನು ಎದುರಿಸುತ್ತೇನೆ ಎನ್ನುವ ವಿಶ್ವಾಸ ನನಗಿದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ದ, ಪಕ್ಷದ ಆಸಕ್ತಿಯೇ ನನ್ನ ಆಸಕ್ತಿ. ಶಿಕಾರಿಪುರ (Shikaripura) ಅಷ್ಟೇ ಅಲ್ಲಾ ಇಡೀ ರಾಜ್ಯಾದ್ಯಂತ ಓಡಾಟ ಮಾಡಿ ಸಂಘಟನೆ ಮಾಡುತ್ತಾ ಇದ್ದೀನಿ. ಚುನಾವಣೆ (Election) ವಿಚಾರದಲ್ಲಿ ನಮ್ಮ ತಂದೆಯವರು ಈಗಾಗಲೇ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದಿದ್ದಾರೆ. ಅದರ ಜೊತೆ ಜೊತೆಗೆ ಪಕ್ಷದ ತೀರ್ಮಾನವೇ ಅಂತಿಮ ಅಂತಾನೂ ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್‌ ತೀರ್ಮಾನಕ್ಕೆ ನಾನು ಬದ್ಧ. ಚುನಾವಣೆ ರಾಜಕಾರಣದಿಂದ ಹಿಂದೆ ಸರಿದಿರುವುದಾಗಿ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ರಾಜಕಾರಣದಿಂದ ಹಿಂದೆ ಸರಿಯುತ್ತೇವೆ ಎಂದು ಹೇಳಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ತರಲು ರಾಜ್ಯಾದ್ಯಂತ ಓಡಾಟ ಮಾಡುತ್ತಿದ್ದಾರೆ. ಅದರಲ್ಲಿ ಯಶಸ್ವಿ ಕೂಡ ಆಗುತ್ತಾರೆ ಎಂದರು.

ಬಸವಣ್ಣ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕ್ಯಾಬಿನೆಟ್‌ನಲ್ಲಿ ನಿರ್ಧಾರ ಆಗಿದ್ದು ಜಾಗ ಕೂಡ ಗುರುತಿಸಲಾಗಿದೆ. ಅತೀ ಶೀಘ್ರದಲ್ಲೇ ಬಸವಣ್ಣನ ಪ್ರತಿಮೆ ನಿರ್ಮಾಣವಾಗಲಿದ್ದು ಇದರ ಬಗ್ಗೆ ಸಿ.ಎಂ ಉತ್ತರ ಕೊಡುತ್ತಾರೆ ಎಂದರು.

ಕೋಲಾರದಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸಿದ್ದರಾಮಯ್ಯ ಅವ್ರು ಎಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಎಂಬುದು ಅವರಿಗೆ ಮತ್ತು ಅವರ ಪಕ್ಷಕ್ಕೆ ಬಿಟ್ಟವಿಚಾರ ಎಂದರು. ಟಿಪ್ಪುಪ್ರತಿಮೆ ಸ್ಥಾಪನೆ ವಿಚಾರಕ್ಕೆ ಉತ್ತರಿಸಿದ ಅವರು ವಿನಾಶ ಕಾಲೇ ವಿಪರೀತ ಬುದ್ದಿ ಅಂತಾ ಹಿರಿಯರು ಹೇಳುತ್ತಾರೆ. ಇಡೀ ದೇಶದಲ್ಲಿ ವಿನಾಶದತ್ತಾ ಕಾಂಗ್ರೆಸ್‌ ಹೋಗುತ್ತಿದೆ. ರಾಜ್ಯದಲ್ಲೂ ಕೂಡ ಕಾಂಗ್ರೆಸ್‌ ವಿನಾಶದತ್ತ ಹೋಗುತ್ತಿರುವ ಮುನ್ಸೂಚನೆ ಸಿಕ್ಕಿದೆ. ಟಿಪ್ಪು ಸುಲ್ತಾನ್‌ ಪ್ರತಿಮೆ ಮಾಡುತ್ತೀವಿ ಅಂತಾ ಘೋಷಣೆ ಮಾಡಿರುವುದು ವಿನಾಶದ ಮುನ್ಸೂಚನೆ ತೊರಿಸುತ್ತದೆ. ಮಾಜಿ ಸಚಿವರು, ಶಾಸಕರೂ ಆಗಿರುವ ತನ್ವೀರ್‌ ಸೇಠ್‌ ಹೇಳುತ್ತಾರೆಂದರೆ ಅದು ಕಾಂಗ್ರೆಸ್‌ನ ಅಭಿಪ್ರಾಯ ಆಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯ ಎಂದರು.

ವೀರಶೈವ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು. ನಾನು ವೀರಶೈವ ಲಿಂಗಾಯತ ಅನ್ನುವುದು ನನಗೆ ಹೆಮ್ಮೆ ಇದೆ. ಆದರೆ ಹಿಂದೂ ಧರ್ಮವೇ ಬೇರೆ ಅಂತಾ ಮಾತಾಡುವುದು ಸರಿಯಲ್ಲ. ಮೊದಲು ಭಾರತೀಯರು ಆಮೇಲೆ ಮಿಕ್ಕಿದೆಲ್ಲ ಎಂದರು.

ಬೈಕ್ ರ್ಯಾಲಿ

ಮುಂಬರುವ ವಿಧಾನಸಭಾ ಚುನಾವಣೆಗೆ (Legislative Assembly) ಬಿಜೆಪಿ (BJP) ಈಗಿನಿಂದಲೇ ತಯಾರಿ ಆರಂಭಿಸಿದೆ. ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಪುತ್ರರಿಂದ ಬೈಕ್‌ ರ‍್ಯಾಲಿಯ (Bike Rally) ಕಮಾಲ್‌ ನಡೆದಿದೆ. ಬೈಕ್‌ ರ‍್ಯಾಲಿಯಲ್ಲಿ ಸಹೋದರರ ಕಮಾಲ್ ಮಾಡಿದ ಘಟನೆ ಶಿವಮೊಗ್ಗ (Shimoga) ಜಿಲ್ಲೆ ಶಿಕಾರಿಪುರ (Shikaripura) ತಾಲೂಕಿನಲ್ಲಿ ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ ಬಿ.ವೈ. ರಾಘವೇಂದ್ರ (B.Y. Raghavendra) ಹಾಗೂ ಬಿ.ವೈ. ವಿಜಯೇಂದ್ರ (B.Y. Vijayendra) ರವರು ಕಾರ್ಯಕರ್ತರು ಮತ್ತು ಅಭಿಮಾನಿಗಳ ಜೊತೆ ಬೆರೆತು ಈಗಿನಿಂದಲೇ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. 

ಶಿಕಾರಿಪುರ ಕೊಳಗಿ ಗ್ರಾಮದ ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ಬೈಕ್ ರ‍್ಯಾಲಿಯ ವೇಳೆ ಬುಲೆಟ್ ಬೈಕ್ ಏರಿ ರ‍್ಯಾಲಿಯಲ್ಲಿ ಬಿ.ವೈ. ರಾಘವೇಂದ್ರ ಹಾಗೂ ಬಿ.ವೈ. ವಿಜಯೇಂದ್ರ ಪಾಲ್ಗೊಂಡಿದ್ದರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೈಕ್‌ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ಭಾಗಿಯಾದರು.

ಇದನ್ನು ಓದಿ: ಚಾ.ನಗರದಿಂದ ಬಿಎಸ್‌ವೈ, ಉ.ಕರ್ನಾಟಕದಲ್ಲಿ ಸಿಎಂ ಪ್ರವಾಸ

ಕೊಳಗಿ ಗ್ರಾಮದ ಹೊರ ವಲಯದಿಂದ ಗ್ರಾಮದ ಸಮುದಾಯ ಭವನದವರೆಗೆ ಸುಮಾರು 2 ಕಿಲೋಮೀಟರ್‌ನಷ್ಟು ದೂರದವರೆಗೆ ಸಹೋದರರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು. ಸಹೋದರರ ಜೊತೆಗೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉತ್ಸಾಹದಿಂದ ಜೈಕಾರ ಹಾಕುತ್ತಾ ಭಾಗಿಯಾದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರಾದ ವೀರೇಂದ್ರ ಪಾಟೀಲ್, ಅರಣ್ಯ ನಿಗಮದ ರಾಜ್ಯ ಉಪಾಧ್ಯಕ್ಷ ರೇವಣಪ್ಪ ಕೊಳಗಿ ಹಾಗೂ ಹಲವು ಉತ್ಸಾಹಿ ಕಾರ್ಯಕರ್ತರು ಪಾಲ್ಗೊಂಡಿದ್ದರು.