Asianet Suvarna News Asianet Suvarna News

ಆಘಾತದಿಂದ ಎದೆನೋವು : ಮತ್ತೊಬ್ಬ ಪುನೀತ್‌ ಅಭಿಮಾನಿ ಸಾವು

  • ನಟ ಪುನೀತ್‌ ರಾಜ್‌ಕುಮಾರ್‌ ಅಕಾಲಿಕ ಸಾವಿನಿಂದ ಆಘಾತ
  • ಅಭಿಮಾನಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರು
another puneeth rajkumar fan Dies in bengaluru snr
Author
Bengaluru, First Published Nov 9, 2021, 8:39 AM IST

ಬೇಲೂರು (ನ.09): ನಟ ಪುನೀತ್‌ ರಾಜ್‌ಕುಮಾರ್‌ (Puneeth rajkumar) ಅಕಾಲಿಕ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಅಭಿಮಾನಿಯೊಬ್ಬರು (Fan) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ (Hospital) ಕೊನೆಯುಸಿರೆಳೆದಿದ್ದಾರೆ.

ಪಟ್ಟಣದ ಎಚ್‌.ಟಿ.ರವಿ (HT Ravi) ಮೃತ ದುರ್ದೈವಿ. ಅಪ್ಪು ಅಭಿಮಾನಿಯಾಗಿದ್ದ ರವಿ, ಪುನೀತ್‌ ಅಂತಿಮ ದರ್ಶನ ಪಡೆದು ಊರಿಗೆ ಮರಳಿದ ಬಳಿಕ ಎದೆನೋವು ಕಾಣಿಸಿಕೊಂಡು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮುಂಜಾನೆ ರವಿ ಕೊನೆಯುಸಿರೆಳೆದಿದ್ದು, ಅವರ ಕೊನೆಯ ಆಶಯದಂತೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.

ಅಭಿಮಾನಿಗಳಿಂದ ನೇತ್ರದಾನಕ್ಕೆ ಸಹಿ :   ಹಾಸನ :  ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಮಡಿದು ಸೋಮವಾರಕ್ಕೆ ಹನ್ನೊಂದು ದಿನಗಳಾದ ಹಿನ್ನಲೆಯಲ್ಲಿ ನಗರದ ನಾನಾ ಭಾಗಗಳಲ್ಲಿ ಅಭಿಮಾನಿಗಳು ಪುಣ್ಯ ಸ್ಮರಣೆ ಮಾಡಿ ಅನ್ನದಾನ ನೆರವೇರಿಸಿದರು.

ನಗರದ ನಗರದ ಆರ್‌.ಸಿ.ರಸ್ತೆಯಲ್ಲಿ ರಂಗೋಲಿಹಳ್ಳದ ನಿವಾಸಿಗಳು ಸೇರಿ ಚಲನಚಿತ್ರದ ನಾಯಕ ನಟ ಪುನೀತ್‌ ರಾಜಕುಮಾರ್‌ ಅವರು ಹೃದಯಘಾತದಿಂದ ಸಾವನ್ನಪ್ಪಿ ಸೋಮವಾರಕ್ಕೆ 11 ದಿನಗಳಾಗಿದ್ದು, ಅವರ ಪುಣ್ಯತಿಥಿಯನ್ನು ಆಚರಿಸಿದರು. ಮೊದಲು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಾನೆ ನೆರವೇರಿಸಿದರು. ಪುನೀತ್‌ ರಾಜ್‌ ಅವರ ಮರಣ ನಂತರ ಅವರ ಕಣ್ಣುಗಳನ್ನು ಮತ್ತೊಬ್ಬರಿಗೆ ದಾನ ಮಾಡಿರುವುದು ನಮಗೆಲ್ಲಾ ಪ್ರೇರಣೆಯಾಗಿದೆ ಎಂದು ಅಭಿಮಾನಿಗಳು ತಮ್ಮ ಜೀವ ಹೋದ ಮೇಲೆ ಇತರರಿಗೆ ಅನುಕೂಲವಾಗಲಿ ಎಂದು ನೋಂದಣಿ ಮಾಡಿಕೊಂಡರು. ನಂತರ ಸಾರ್ವಜನಿಕರಿಗೆ ಅನ್ನದಾನ ಮಾಡಿದರು. ಅದರಂತೆ ಶಿವರಾಜಕುಮಾರ್‌ ಅಭಿಮಾನ ಸಂಘದಿಂದ ದೊಡ್ಡಬಸ್ತಿ ರಸ್ತೆ, ಶಕುನ ರಂಗನಾಥ ಸ್ವಾಮಿ ದೇವಾಲಯದ ಬಳಿಯೂ ಪುನೀತ್‌ ಪುಣ್ಯಸ್ಮರಣೆ ನಡೆಸಿದರು.

ಇದೆ ವೇಳೆ ರಂಗೂಲಿಹಳ್ಳ ನಿವಾಸಿಗಳಾದ ಸುಂದರ್‌, ಮೋಹನ್‌, ಅರುಣ್‌, ವೆಂಕಟೇಶ್‌, ಕುಮಾರ್‌, ಲೋಕೇಶ್‌ ನಾಗರಾಜು, ಅಮಂತಿ, ಕವಿತಾ, ಕಾವ್ಯಅರುಣ್‌ ಇತರರು ಉಪಸ್ಥಿತರಿದ್ದರು.

ಪುನೀತ್‌ ಪುಣ್ಯಸ್ಮರಣೆಯಲ್ಲಿ 110 ಜನರಿಂದ ರಕ್ತದಾನ :  ಹಾವೇರಿಯ ಪುನೀತ ರಾಜಕುಮಾರ ಪುಣ್ಯಸ್ಮರಣೆ ಅಂಗವಾಗಿ ಯುವರತ್ನ ಸೇವಾ ಸಮಿತಿ ಹಾವೇರಿ ಇವರ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಒಟ್ಟು 110 ಜನ ರಕ್ತದಾನ ಮಾಡುವ ಮೂಲಕ ಜೀವದಾನಿಯಾದರು.

ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರು ಓಲೇಕಾರ, ಎಲ್ಲ ದಾನಗಳಲ್ಲೇ ರಕ್ತದಾನ ಶ್ರೇಷ್ಠ ದಾನ. ರಕ್ತವನ್ನು ದಾನ ಮಾಡುವುದು ಒಳ್ಳೆಯ ಕಾರ್ಯ. ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಈರಣ್ಣ ಸಂಗೂರ, ನಗರಸಭೆ ಸದಸ್ಯೆ ಚೆನ್ನಮ್ಮ ಬ್ಯಾಡಗಿ, ಜೂನಿಯರ್‌ ರಾಜಕುಮಾರ ಅಶೋಕ ಬಸ್ತಿ, ಡಾ. ಬಸವರಾಜ ವೀರಾಪುರ, ಡಾ. ರಾಘವೇಂದ್ರ ಜಿಗಳಿಕೊಪ್ಪ, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಬಸವರಾಜ ತಳವಾರ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತು ಇಲ್ಲ. ಆದ್ದರಿಂದ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ರಕ್ತವೇ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. 18ರಿಂದ 60 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಬಸವರಾಜ ಕಮತದ,

ಯುವರತ್ನ ಸೇವಾ ಸಮಿತಿ ಗೌರವಾಧ್ಯ ಮಹಾಂತೇಶ ಹೊಳೆಮ್ಮನವರ, ಅಧ್ಯಕ್ಷ ರಾಹುಲ್‌ ರೊಟ್ಟಿ, ಉಪಾಧ್ಯಕ್ಷ ಸಚಿನ್‌ ಬಸೆಗಣ್ಣಿ, ಪ್ರಧಾನ ಕಾರ್ಯದರ್ಶಿ ಶಿದ್ದಲಿಂಗೇಶ ಶಿಗ್ಗಾಂವಿ, ಖಜಾಂಚಿ ಯಲ್ಲಪ್ಪ ಗೌರಾಪುರ, ಶಿವರಾಜ್‌ ಗುಂಡೆ, ಲಕ್ಷ್ಮಣ ಕದಂ, ಅರುಣ್‌ ಕಾಳಪ್ಪ, ಮಾಲತೇಶ ರಿತ್ತಿ, ಜಗದೀಶ ಕೊಂಡೆಮ್ಮನವರ, ಪುನೀತ್‌ ರಾಜಕುಮಾರ ಅಭಿಮಾನಿಗಳು ಹಾಗೂ ರಕ್ತನಿಧಿ ಕೇಂದ್ರದ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios