*  ಯೋಜನೆಯಲ್ಲಿ ಪ್ರಸ್ತಾಪವಾದರೆ ನಡೆಯಲಿದೆ ಸರ್ವೇ*  30 ಕಿಮೀ ಹಾಫ್‌ ರಿಂಗ್‌ರೋಡ್‌ ಆದರೆ ಪೂರ್ಣವಾಗಲಿದೆ ವರ್ತುಲ*  ಈಗಾಗಲೇ ಕಾರವಾರ ಬೆಂಗಳೂರು ವಿಜಯಪುರ ಸಂಪರ್ಕಿಸುವ ಹಾಫ್‌ ರಿಂಗ್‌ರೋಡ್‌ ಸಂಚಾರಕ್ಕೆ ಮುಕ್ತ 

ಮಯೂರ ಹೆಗಡೆ

ಹುಬ್ಬಳ್ಳಿ(ಜು.02): ನಗರದ ಹೊರವಲಯದಲ್ಲಿ ಬಾಕಿ ಉಳಿದಿರುವ ಹಾಫ್‌ರಿಂಗ್‌ ರೋಡ್‌ ಭಾರತಮಾಲಾ-2ನೇ ಹಂತದ ಯೋಜನೆಯಡಿ ನಿರ್ಮಾಣವಾಗುವ ನಿರೀಕ್ಷೆ ಇದೆ. ಸುಮಾರು 30 ಕಿಮೀ ಈ ರಸ್ತೆ ನಿರ್ಮಾಣವಾದಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಇನ್ನಷ್ಟು ಕಡಿಮೆಯಾಗಲಿದೆ.

ಕುಸುಗಲ್‌ ಉಣಕಲ್‌ನಿಂದ ಆರಂಭವಾಗಿ ನರೇಂದ್ರ ವರೆಗಿನ ಈ ಹಾಫ್‌ ರಿಂಗ್‌ ರೋಡ್‌ ಕುಸುಗಲ್‌ ಬಳಿ ರಾಷ್ಟ್ರೀಯ ಹೆದ್ದಾರಿ 218, ನರೇಂದ್ರದ ಬಳಿ ರಾಷ್ಟ್ರೀಯ ಹೆದ್ದಾರಿ 4 ಸಂಪರ್ಕಿಸಲಿದೆ. 2014ರಲ್ಲಿ ಹುಡಾ ಇದರ ಬಗ್ಗೆ ಸಿಡಿಪಿಯಲ್ಲಿ . 470 ಕೋಟಿ ವೆಚ್ಚದ 33 ಕಿಮೀ ರಸ್ತೆಯ ವರದಿ ಸಲ್ಲಿಸಿತ್ತು. ಹೊರವಲಯದಿಂದಲೇ ಇವೆರಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಕಾರಣ ನಗರದ ಒಳಕ್ಕೆ ಇವು ಪ್ರವೇಶ ಪಡೆಯದೆ ತೆರಳುವುದರಿಂದ ಅನವಶ್ಯಕ ದಟ್ಟಣೆ ತಪ್ಪಲಿದೆ.

KARNATAKA BUSINESS AWARD: ಕ್ಲ್ಯಾಸಿಕ್ ಫೈರ್‌ ಸಿಸ್ಟಮ್ಸ್‌ನ ಬಸವರಾಜ್ ಕಲ್ಯಾಲ್‌ಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್

ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಎಷ್ಟಾಗಬೇಕು? ಎಷ್ಟುವೆಚ್ಚವಾಗಲಿದೆ? ಎಲ್ಲೆಲ್ಲಿ ಅಂಡರ್‌ಪಾಸ್‌ ನಿರ್ಮಾಣ ಆಗಬೇಕು? ಸವೀರ್‍ಸ್‌ ರಸ್ತೆ ಹೇಗಿರಬೇಕು? ಸುತ್ತಮುತ್ತಲ ಗ್ರಾಮಗಳಿಗೆ ಯಾವ ರೀತಿ ರಸ್ತೆ ಸಂಪರ್ಕ ಇರಬೇಕು? ಅಂತರ ತಗ್ಗಿಸುವುದು ಹೇಗೆ ಎಂಬುದು ಸೇರಿ ಇನ್ನಿತರ ವಿಚಾರಗಳ ಕುರಿತು ಸರ್ವೆ ಆಗಬೇಕಿದೆ. ಭಾರತಮಾಲಾ-2ನೇ ಹಂತದ ಯೋಜನೆಯಡಿ ಈ ರಸ್ತೆ ನಿರ್ಮಾಣದ ಪ್ರಸ್ತಾಪವಾದ ಬಳಿಕ ಪಿಡಬ್ಲ್ಯೂಡಿ ಎನ್‌ಎಚ್‌ ವಿಭಾಗದ ಅಧಿಕಾರಿಗಳು ಈ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ. ಮುಂದೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸಚಿವ ನಿತೀನ ಗಡ್ಕರಿ ಅವರು ಹು-ಧಾ ಬೈಪಾಸ್‌ ಅಷ್ಟಪಥ ಯೋಜನೆಗೆ ಬಂದಾಗಲೇ ಈ ಕುರಿತು ಪ್ರಸ್ತಾಪವಾಗಿದೆ. ಅವರು ಕೂಡ ಇನ್ನೊಂದು ಹಾಫ್‌ ರಿಂಗ್‌ ರೋಡ್‌ ನಿರ್ಮಾಣದ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ 2ನೇ ಹಂತದ ಯೋಜನೆಯಲ್ಲಿ ಹಾಫ್‌ರಿಂಗ್‌ ರೋಡ್‌ ಬಹುತೇಕ ಘೋಷಣೆ ಆಗಲಿದೆ ಎಂದು ಅಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಲ್ಲಿ ಈಗಾಗಲೆ ಚರ್ಚಿಸಿದ್ದು, ಭಾರತಮಾಲಾ-2 ಯೋಜನೆಯಡಿ ಉಳಿದ ಅರ್ಧ ವೃತ್ತದ ರಸ್ತೆ ನಿರ್ಮಿಸಲು ಮಂಜೂರಾತಿ ದೊರೆಯುವ ಸಾಧ್ಯತೆ ಇದೆ. ಸದ್ಯ ನಾವು ಯೋಜನೆಯ ಮೇಲ್ನೋಟದ ಮಾಹಿತಿ ನೀಡಿದ್ದೇವೆ. ಯೋಜನೆ ಅಡಿ ಘೋಷಣೆಯಾದ ಬಳಿಕ ನಾವು ಸರ್ವೇ ನಡೆಸಿ ಡಿಪಿಆರ್‌ ಮತ್ತಿತರ ಪ್ರಕ್ರಿಯೆ ನಡೆಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎನ್‌ಎಚ್‌ ವಿಭಾಗದ ಇಇ ರಾಜೇಂದ್ರ ಹುರಕಡ್ಲಿ ತಿಳಿಸಿದರು.

India@75: ಧಾರವಾಡದ ಜಕಣಿಬಾವಿಯಲ್ಲಿದೆ ಹುತಾತ್ಮರ ಸ್ಮಾರಕ

ಇನ್ನು, ಈಗಾಗಲೇ ಕುಸುಗಲ್‌, ಗಬ್ಬೂರ ಕ್ರಾಸ್‌ ಹಾಗೂ ಅಂಚಟಗೇರಿ ಬಳಿ ಕಾರವಾರ ಬೆಂಗಳೂರು ವಿಜಯಪುರ ಸಂಪರ್ಕಿಸುವ ಹಾಫ್‌ ರಿಂಗ್‌ರೋಡ್‌ನಲ್ಲಿ ಸಂಚಾರ ಮುಕ್ತವಾಗಿದೆ. ಎನ್‌ಎಚ್‌ಎಐ ಹಾಗೂ ಪಿಡಬ್ಲ್ಯೂಡಿ ರಾಷ್ಟ್ರೀಯ ಹೆದ್ದಾರಿ ಘಟಕ . 278 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ರಸ್ತೆಯಿಂದ ಅನವಶ್ಯಕವಾಗಿ ನಗರ ಪ್ರವೇಶಿಸುತ್ತಿದ್ದ ವಾಹನಗಳ ಸಂಖ್ಯೆ ತಗ್ಗಿದೆ. ಫುಲ್‌ರಿಂಗ್‌ರೋಡ್‌ ಆದಲ್ಲಿ ಸರಕು ಸಾಗಣೆಗೆ ವೇಗ ಹೆಚ್ಚಲಿದೆ, ಪ್ರಯಾಣದ ವೆಚ್ಚವೂ ತಗ್ಗಲಿದೆ.

ಭಾರತಮಾಲಾ-2 ಯೋಜನೆಯಡಿ ಇನ್ನೊಂದು ಹಾಫ್‌ರಿಂಗ್‌ ರೋಡ್‌ ಯೋಜನೆ ಮಂಜೂರಾಗುವ ನಿರೀಕ್ಷೆಯಿದೆ. ನಾವು ಸಚಿವರಿಗೆ ಸುಮಾರು 30 ಕಿಮೀ ಮಾರ್ಗದ ಬಗ್ಗೆ ಮಾಹಿತಿ ನೀಡಿದ್ದೇವೆ ಅಂತ ಲೋಕೋಪಯೋಗಿ ಇಲಾಖೆ ಎನ್‌ಎಚ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜೇಂದ್ರ ಹುರಕಡ್ಲಿ ತಿಳಿಸಿದ್ದಾರೆ.