ಅನ್ನಭಾಗ್ಯ ಮೋದಿ ಸ್ಕೀಂ: ಸಚಿವ ದೇಶಪಾಂಡೆಗೆ ಶಾಕ್
ಅನ್ನಭಾಗ್ಯ ಮೋದಿ ಸ್ಕೀಂ| ತಾಂಬಳ ಕೆರೆಯ ಹೂಳೆತ್ತುವ ಕಾಮಗಾರಿ ಪರಿಶೀಲನೆಗೆ ತೆರಳಿದ ವೇಳೆ ಸಚಿವ ದೇಶಪಾಂಡೆಗೆ ಶಾಕ್| ಪೇಚಿಗೆ ಸಿಲುಕಿದ ಕಂದಾಯ ಸಚಿವರು
ಬೆಳಗಾವಿ[ಮೇ.19]: ಅನ್ನಭಾಗ್ಯ ಯೋಜನೆ ಜಾರಿಗೆ ತಂದವರು ಯಾರು ಎಂದು ಕೇಳಿದ ಸಚಿವ ಆರ್.ವಿ. ದೇಶಪಾಂಡೆಗೆ ನರೇಗಾ ಕೂಲಿ ಕಾರ್ಮಿಕರು ಕೊಟ್ಟಉತ್ತರ ‘ಮೋದಿ’!
ನರೇಗಾ ಯೋಜನೆಯಡಿ ಹೊನಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಬಳ ಕೆರೆಯ ಹೂಳೆತ್ತುವ ಕಾಮಗಾರಿ ಪರಿಶೀಲನೆಗೆ ತೆರಳಿದ ವೇಳೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಕೂಲಿಕಾರರಿಂದ ಬಂದ ಉತ್ತರ ಕೇಳಿ ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು. ‘ಅನ್ಯಭಾಗ್ಯ ಯೋಜನೆ ನಿಮಗೆ ಗೊತ್ತಾ? ನೀವು ಎಷ್ಟುಕೆ.ಜಿ. ಉಚಿತವಾಗಿ ಅಕ್ಕಿಯನ್ನು ಪಡೆಯುತ್ತಿದ್ದೀರಿ’ ಎಂದು ಸಚಿವರು ಕೂಲಿಕಾರರನ್ನು ಪ್ರಶ್ನಿಸಿದರು. ಕೂಲಿಕಾರರು ‘ನಮಗೆ 6 ಕೆ.ಜಿ ಅಕ್ಕಿ ನೀಡಲಾಗುತ್ತಿದೆ’ ಉತ್ತರಿಸಿದರು.
‘ಇಲ್ಲಾ ನೋಡಿ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ’ ಎಂದು ಸಚಿವರು ಮರು ಉತ್ತರಿಸಿದರು. ಈ ವೇಳೆ ‘ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಯಾವ ಸಿಎಂ ಜಾರಿಗೆ ತಂದರು’ ಎಂಬ ಪ್ರಶ್ನೆಗೆ ತಕ್ಷಣವೇ ಕೆಲ ಕೂಲಿ ಕಾರ್ಮಿಕರು ‘ಮೋದಿ.. ಮೋದಿ’ ಹೇಳಿದರು. ಇದರಿಂದಾಗಿ ಸಚಿವ ದೇಶಪಾಂಡೆ ಪೇಚಿಗೆ ಸಿಲುಕಿ ಮುಜುಗರಕ್ಕೀಡಾದರು. ಬಳಿಕ ಮಹಿಳಾ ಕೂಲಿಕಾರ್ಮಿಕರೊಬ್ಬರು ಸಿದ್ದರಾಮಯ್ಯ ಎಂದಿದ್ದರಿಂದ ಸಚಿವರು ನಿಟ್ಟುಸಿರು ಬಿಟ್ಟರು.
ನರೇಗಾ ಯೋಜನೆಯಡಿ ಕಾಂಬಳ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದ ಕೂಲಿಕಾರ್ಮಿಕರು, ಸಚಿವರು ಆಗಮಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಅವರತ್ತ ಧಾವಿಸಿದರು. ಕೂಲಿಕಾರ್ಮಿಕರ ಜಾಬ್ ಕಾರ್ಡ್, ನಿರ್ವಹಣಾ ಪುಸ್ತಕವನ್ನು ಪರಿಶೀಲಿಸಿದ ಸಚಿವ ದೇಶಪಾಂಡೆ ಅವರು, ಕೂಲಿಕಾರ್ಮಿಕರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಕೂಲಿಕಾರ್ಮಿಕರನ್ನು ‘ಎಷ್ಟು ದಿನಗಳಿಂದ ಕೂಲಿ ಮಾಡುತ್ತಿದ್ದೀರಿ? ಕೂಲಿ ಸರಿಯಾಗಿ ಬರುತ್ತಿದೆಯೆ? ನಿಮ್ಮ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೇ?’ ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದರು. ಇದಕ್ಕೆ ಕೂಲಿಕಾರ್ಮಿಕರು ಸಕಾರಾತ್ಮಕವಾಗಿ ಉತ್ತರ ನೀಡಿದರು.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.