ತಾಲೂಕಿನಲ್ಲಿ ನಿವೇಶನ ಹಂಚಿಕೆ ಹೆಸರಿನಲ್ಲಿ ಬಡವರು ಸಾಗುವಳಿ ಭೂಮಿಯನ್ನು ಕಸಿದುಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ಆರೋಪಿಸಿದರು. 

ಹೊಸಕೋಟೆ (ಜ.14): ತಾಲೂಕಿನಲ್ಲಿ ನಿವೇಶನ ಹಂಚಿಕೆ ಹೆಸರಿನಲ್ಲಿ ಬಡವರು ಸಾಗುವಳಿ ಭೂಮಿಯನ್ನು ಕಸಿದುಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ಆರೋಪಿಸಿದರು. ತಾಲೂಕಿನ ದೊಡ್ಡಹುಲ್ಲೂರು ಗ್ರಾಪಂ ವ್ಯಾಪ್ತಿಯ ಲಾಲ್‌ಬಾಗ್‌ ದಾಸರಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಬಡವರು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಜಮೀನನ್ನು ಕಂದಾಯ ಇಲಾಖೆ ಅ​ಧಿಕಾರಿಗಳು ಆಡಳಿತ ಪಕ್ಷದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಬಡವರಿಗೆ ನಿವೇಶನ ಹಂಚಿಕೆ ವಿಚಾರ ಮುಂದಿಟ್ಟುಕೊಂಡು ಸಾಗುವಳಿ ಜಮೀನನ್ನು ಕಸಿದುಕೊಳ್ಳುವ ಕೆಲಸ ತಾಲೂಕಾದ್ಯಂತ ಮಾಡಲಾಗುತ್ತಿದೆ. ಇದರಿಂದ ಬಡವರು ಜಮೀನು ಕಳೆದುಕೊಂಡು ಬೀದಿಗೆ ಬರುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಇದರ ವಿರುದ್ಧ ಹೋರಾಟ ಮಾಡುವ ಅನಿವಾರ‍್ಯವಿದೆ. 

ನಾನು ಸಾಗುವಳಿದಾರರ ನೆರವಿಗೆ ನಿಂತು ಹೋರಾಡುತ್ತೇನೆಂದು ತಿಳಿಸಿದರು. ಬಮೂಲ್‌ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್‌ ಮಾತನಾಡಿ, ದಾಸರಹಳ್ಳಿ, ಗೊಟ್ಟಿಪುರ, ಚಿಕ್ಕನಲ್ಲೂರಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಹೂವು ಬೆಳೆದುಕೊಂಡು ಸಾಗುವಳಿ ಮಾಡಿಕೊಂಡಿದ್ದ ಬಡವರ ಜಮೀನನ್ನು ಅರಣ್ಯ ಇಲಾಖೆ ಅ​ಧಿಕಾರಿಗಳು, ಇದು ಅರಣ್ಯಕ್ಕೆ ಸೇರಿದ ಜಾಗ ಎಂದು ಯಾವುದೇ ರೀತಿಯ ನೋಟಿಸ್‌ ಕೂಡ ನೀಡದೆ ತಂತಿಬೇಲಿ ಅಳವಡಿಕೆ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಯಾವೊಬ್ಬ ರೈತರು ಜಮೀನು ಬಿಟ್ಟುಕೊಡುವುದು ಬೇಡ. ಕಾನೂನು ರೀತಿ ಅವರು ಮೊದಲು ನೋಟಿಸ್‌ ಕೊಡಲಿ, ನಂತರ ನಾವು ಕೂಡ ಕಾನೂನು ಹೋರಾಟ ಮಾಡೋಣ ಎಂದರು.

Chamarajanagar: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಸಂಕ್ರಾಂತಿ ರಥೋತ್ಸವ

ಚುನಾವಣೆ ಬಂದಾಗ ನಿವೇಶನ ನೆನೆಪು: 10 ವರ್ಷಗಳಿಂದ ಅ​ಧಿಕಾರದಲ್ಲಿದ್ದಾಗ ಬಡವರಿಗೆ ನಿವೇಶನ ಕೊಡಲು ಮುಂದಾಗದೆ, ಈಗ ಚುನಾವಣೆ ಸಮೀಪ ಇರುವಾಗ ಪ್ರತಿ ಗ್ರಾಮಗಳಲ್ಲಿ ನಿವೇಶನ ಹಂಚಿಕೆ ಬಗ್ಗೆ ಭಾಷಣ ಮಾಡ್ತಾರೆ. ಅದರಲ್ಲೂ ಕೂಡ ಸಾಗುವಳಿ ಜಮೀನು ತೆರವು ಮಾಡುವಾಗಲೂ ತಾರತಮ್ಯವೆಸಗಿ ಅ​ಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಎಂದು ಸಚಿವ ಎಂಟಿಬಿ ನಾಗರಾಜ್‌ ಹೆಸರನ್ನು ಹೇಳದೆ ಶಾಸಕ ಶರತ್‌ ಬಚ್ಚೇಗೌಡ ಪರೋಕ್ಷವಾಗಿ ವಾಗ್ದಾಳಿ ಮಾಡಿದರು. ಟಿಎಪಿಸಿಎಂಎಸ್‌ ಅಧ್ಯಕ್ಷ ಎಲ್‌ಎನ್‌ಟಿ ಮಂಜುನಾಥ್‌, ಬ್ಲಾಕ್‌ ಕಾಂಗೆಸ್‌ ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ, ಹಿಂದುಗಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಸಿ.ಮುನಿಯಪ್ಪ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಆದ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಿ: ಗ್ರಾಮೀಣ ಭಾಗದಲ್ಲಿ ಸಂಸದರ ಹಾಗೂ ಸರಕಾರದ ವಿಶೇಷ ಅನುದಾನಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದು ತಾಲೂಕಿನ ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. ತಾಲೂಕಿನ ನಂದಗುಡಿಯ ನೆಲವಾಗಿಲು ಗ್ರಾಪಂ ವ್ಯಾಪ್ತಿಯ ಅರೇಹಳ್ಳಿಯಲ್ಲಿ 20 ಲಕ್ಷ ರು. ವೆಚ್ಚದ ಪ್ರಾದೇಶಿಕ ಯೋಜನಾಭಿವೃದ್ಧಿ ಅಡಿಯಲ್ಲಿ ಕಾಂಕ್ರೀಟ್‌ ರಸ್ತೆ ಹಾಗೂ ಕುಂಟೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ಸೌಲಭ್ಯ ವಂಚಿತ ಗ್ರಾಮವನ್ನಾಗಿಸುವುದೇ ನನ್ನ ಧ್ಯೇಯವಾಗಿದೆ. ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಟ್ಟು ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟಕ್ಕೆ ಆದ್ಯತೆ ನೀಡಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 

Chamarajanagar: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಸಂಕ್ರಾಂತಿ ರಥೋತ್ಸವ

ಗ್ರಾಮಾಂತರ ಪ್ರದೇಶಗಳು ಅಭಿವೃದ್ಧಿ ಹೊಂದಬೇಕಾದರೆ ಗುಣಮಟ್ಟದ ರಸ್ತೆಗಳಿಂದ ಮಾತ್ರ ಸಾಧ್ಯವಾಗುತ್ತದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟಕಂಡು ಬಂದಲ್ಲಿ, ಸಂಬಂಧಪಟ್ಟಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಿದರು. ತಾಲೂಕಿನ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಗ್ರಾಮಗಳಲ್ಲಿ ಬಹಳಷ್ಟುರಸ್ತೆಗಳ ಡಾಂಬರೀಕರಣ ಮತ್ತು ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ಮಾಡಲಾಗುತ್ತಿದೆ. ಅಗತ್ಯತೆಗೆ ಅನುಗುಣವಾಗಿ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.