ವೇದಿಕೆಯಲ್ಲೇ ಕುಸಿದು ಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ
ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ವೇದಿಕೆಯಲ್ಲಿಯೇ ಕುಸಿದು ಬಿದ್ದ ಘಟನೆ ನಡೆದಿದೆ.
ತುಮಕೂರು (ನ.02): ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಸೆರಗೊಡ್ಡಿ ಮತಯಾಚಿಸಿದ ಪ್ರಸಂಗಕ್ಕೆ ಭಾನುವಾರ ಸಾಕ್ಷಿಯಾಯಿತು. ಇದೇ ವೇಳೆ, ಅಮ್ಮಾಜಮ್ಮ ಅವರು ಉರಿಬಿಸಿಲು ಹಾಗೂ ಕಡಿಮೆ ರಕ್ತದೊತ್ತಡದಿಂದಾಗಿ ವೇದಿಕೆಯಲ್ಲೇ ಕುಸಿದು ಬಿದ್ದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆಯೂ ನಡೆಯಿತು. ಕೂಡಲೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ನಂತರ ಚೇತರಿಸಿಕೊಂಡ ಅವರನ್ನು ಮತ್ತೆ ವೇದಿಕೆಗೆ ಕರೆ ತರಲಾಯಿತು.
ಶಿರಾದ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದಲ್ಲಿ ಜೆಡಿಎಸ್ನ ಘಟಾನುಘಟಿ ನಾಯಕರಿದ್ದ ಸಮಾವೇಶದಲ್ಲಿ ಕಾರ್ಯಕರ್ತರ ಮುಂದೆ ಮತಯಾಚನೆ ವೇಳೆ ತಮ್ಮ ಸೆರಗೊಡ್ಡಿ ಮತ ಹಾಕುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಅವರು ರಾಜಕೀಯ ನನಗೆ ಗೊತ್ತಿಲ್ಲ. ಆದರೆ ರೈತರ ಕಷ್ಟಗೊತ್ತಿದೆ. ನಾನು ಆಯ್ಕೆಯಾದರೆ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡುತ್ತೇನೆ. ಆಸ್ಪತ್ರೆ, ಸ್ಕೂಲು, ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇನೆ. ಸಾಗುವಳಿ ಚೀಟಿ ಕೊಡಿಸುವುದೂ ಸೇರಿ ಬಡವರ, ರೈತರ ಕಾರ್ಮಿಕರ ಪರ ಕೆಲಸ ಮಾಡುತ್ತೇನೆ ಎಂದರು.
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಗಂಡನಿಗಿಂತ ಶ್ರೀಮಂತೆ ..
ನಮ್ಮ ಯಜಮಾನರಿಗೆ ತುಂಬಾ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಆದರೆ ದೇವರು ಅವರನ್ನು ಕರೆದುಕೊಂಡು ಹೋದರು. ಹಿರಿಯರೆಲ್ಲ ಸಹಕಾರ ಕೊಟ್ಟಿದ್ದಾರೆ. ನನ್ನ ಸೆರಗಿಗೆ ಮತ ಹಾಕಿ ಎಂದು ಮನವಿ ಮಾಡಿದರು.
ಅಸ್ವಸ್ಥರಾದ ಅಮ್ಮಾಜಮ್ಮ: ದಣಿವರಿಯದ ಪ್ರಚಾರ, ಕಡಿಮೆ ರಕ್ತದೊತ್ತಡ ಮತ್ತು ಉರಿಬಿಸಿಲಿಂದಾಗಿ ಬಳಲಿದಂತೆ ಕಂಡ ಅಮ್ಮಾಜಮ್ಮ ವೇದಿಕೆಯಲ್ಲೇ ಕುಸಿದು ಬಿದ್ದು ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಜೆಡಿಎಸ್ ನಾಯಕರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.