ಅವರಿಬ್ಬರೂ ಕೃಷ್ಣ ಭಕ್ತರು. ಯುವಕ ಭಾರತೀಯ. ಯುವತಿ ಅಮೆರಿಕದವರು. ಪಶ್ಚಿಮ ಬಂಗಾಳದ ಮಾಯಾಪುರದಲ್ಲಿದ್ದ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು. ಈಗ ಮದುವೆಯೂ ಆಯಿತು. ಯಾರು ಆ ಯುವ ಜೋಡಿ? ಪ್ರೀತಿ ಹುಟ್ಟಿದ್ದು ಹೇಗೆ?
ಇಬ್ಬರನ್ನೂ ಒಂದಾಗಿಸಿದ ಶ್ರೀ ಕೃಷ್ಣನ ಮೇಲಿನ ಭಕ್ತಿ
ಸುಳ್ಯ (ಜು.17): ಅವರಿಬ್ಬರೂ ಕೃಷ್ಣ ಭಕ್ತರು. ಯುವಕ ಭಾರತೀಯ. ಯುವತಿ ಅಮೆರಿಕದವರು. ಪಶ್ಚಿಮ ಬಂಗಾಳದ ಮಾಯಾಪುರದಲ್ಲಿದ್ದ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು. ಈಗ ಮದುವೆಯೂ ಆಯಿತು.
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಸಾಯಿ ಸಂಕೇತ್ ವಿವಾಹ ಅಮೆರಿಕದ ಷಿಕಾಗೋ ನಗರದ ಡಾ। ಚಾರ್ಲ್ಸ್ ಅವರ ಪುತ್ರಿ ಶಾನೋನ್ ಜೊತೆಗೆ ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿತು.
ಸಾಯಿ ಸಂಕೇತ್ ಮಡಿಕೇರಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದು ಚೆನ್ನೈಯಲ್ಲಿ ಐಐಟಿ ಅಧ್ಯಯನ ನಡೆಸಿದ್ದರು. ಬಳಿಕ ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿ ಬಳಿಕ ಪಶ್ಚಿಮ ಬಂಗಾಲದ ಮಾಯಾಪುರದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ನಿರ್ವಹಿಸುತ್ತಿದ್ದರು. ಶಾನೋನ್ ಅಮೆರಿಕದಲ್ಲಿ ಶಿಕ್ಷಣ ಪೂರೈಸಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮವನ್ನು ಮೆಚ್ಚಿ ಇಲ್ಲಿಗೆ ಬಂದು ಆನ್ಲೈನ್ ವೃತ್ತಿ ನಿರ್ವಹಿಸುತ್ತಿದ್ದರು.
ಪ್ರೀತಿ ಹುಟ್ಟಿದ್ದೇಗೆ?
ಸಂಕೇತ್ ಉದ್ಯಮ ಮಳಿಗೆಗೆ ಶಾರೋನ್ ಭೇಟಿ ನೀಡುತ್ತಿದ್ದಾಗ ಪರಸ್ಪರ ಪರಿಚಯವಾಯಿತು. ಪರಿಚಯ ಪ್ರೀತಿಯಾಗಿ ಅಂಕುರಿಸಿತು. ಆಧ್ಯಾತ್ಮಿಕ ಆಸಕ್ತಿ ಮತ್ತು ಕೃಷ್ಣ ಭಕ್ತಿ ಇಬ್ಬರನ್ನೂ ಒಂದುಗೂಡಿಸಿತು.
ಎರಡು ವರ್ಷದ ಬಳಿಕ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಇಬ್ಬರ ಮನೆಯವರಿಂದಲೂ ಅಡ್ಡಿ ಬಾರಲಿಲ್ಲ. ಆಷಾಢ ಮಾಸ ಬರುತ್ತಿರುವುದರಿಂದ ಶೀಘ್ರ ಮದುವೆ ಆಗುವ ನಿರ್ಧಾರಕ್ಕೆ ಬಂದ ಹಿನ್ನೆಲೆಯಲ್ಲಿ ಶಾನೋನ್ ಮನೆಯವರಿಗೆ ವಿವಾಹದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಸಂಪಾಜೆ ದೇವಸ್ಥಾನದಲ್ಲಿ ಕುಟುಂಬ ಬಂಧುಗಳ ಉಪಸ್ಥಿತಿಯಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿತು. ಶಾನೋನ್ ಅವರಿಗೆ ಅಲ್ಪಸ್ವಲ್ಪ ಕನ್ನಡ ಬರುತ್ತದೆ. ಇಲ್ಲಿಯ ಆಹಾರ ಪದ್ಧತಿ ಅವರಿಗೆ ತುಂಬ ಇಷ್ಟವಂತೆ.


