Asianet Suvarna News Asianet Suvarna News

ಗದಗ: ಕಪ್ಪತಗುಡ್ಡದಿಂದ ಅಕ್ರಮ ಅದಿರು ಸಾಗಾಟ?

ಗದಗ ತಾಲೂಕಿನ ಕಳಸಾಪೂರ ಗ್ರಾಪಂ ವ್ಯಾಪ್ತಿಯ ಹುಯಿಲಗೋಳದವರ ಗುಡ್ಡ ಎಂಬ ಹೆಸರಿನ ಬೆಟ್ಟದಲ್ಲಿ  ಅಕ್ರಮ ನಡೆಯುತ್ತಿದೆ ಎಂದ ಆರೋಪ| ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪದ ಬಗ್ಗೆ ಇಲಾಖೆ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗಗೊಳಿಸಬೇಕಿದೆ| 

Allegation of Illegal Ore Shipping From Kappatagudda
Author
Bengaluru, First Published Aug 29, 2020, 3:20 PM IST

ಗದಗ(ಆ.29): ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾಗಿರುವ, ಅಮೂಲ್ಯ ಖನಿಜಾಂಶಗಳೊಂದಿಗೆ ಔಷಧಿಯ ಸಸ್ಯಗಳಂತಹ ಅಪಾರ ಸಂಪತ್ತು ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡದ ಸೆರಗಿನಲ್ಲಿರುವ ಗದಗ ತಾಲೂಕಿನ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಗರಸು ತೆಗೆಯುವ ನೆಪದಲ್ಲಿ ಕಬ್ಬಿಣದ ಅದಿರನ್ನು ಅಕ್ರಮವಾಗಿ ತೆಗೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಇಲ್ಲಿರುವ ಖನಿಜಯುಕ್ತ ಗರಸು ಮಣ್ಣನ್ನು ತೆಗೆದುಕೊಳ್ಳಲು ಗುತ್ತಿಗೆ ಪಡೆದ ಕಂಟ್ರಾಕ್ಟರ್‌ ಒಬ್ಬರು, ತಮಗೆ ಸಿಕ್ಕ ಅನುಮತಿ ಉಲ್ಲಂಘಿಸಿ ಅದೇ ಗುಡ್ಡದ ಮೇಲ್ಭಾಗದ ಕಬ್ಬಿಣದ ಅದಿರು ಸಾಂದ್ರೀಕೃತವಾಗಿರುವ ಮಣ್ಣನ್ನು ಬೇರೆಡೆ ಸಾಗಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಗದಗ ತಾಲೂಕಿನ ಕಳಸಾಪೂರ ಗ್ರಾಪಂ ವ್ಯಾಪ್ತಿಯ ಹುಯಿಲಗೋಳದವರ ಗುಡ್ಡ ಎಂಬ ಹೆಸರಿನ ಬೆಟ್ಟದಲ್ಲಿ ಈ ಅಕ್ರಮ ನಡೆಯುತ್ತಿದೆ. ಗದಗ ನಗರದ ಕಾಂಗ್ರೆಸ್‌ ನಾಯಕ, ನಗರಸಭೆ ಮಾಜಿ ಸದಸ್ಯರೋರ್ವರು ಇದನ್ನು ಗುತ್ತಿಗೆ ಪಡೆದಿದ್ದಾರೆ. ರಸ್ತೆ ನಿರ್ಮಾಣಕ್ಕೆಂದು ಈ ಗುಡ್ಡದ ಸರ್ವೆ ನಂಬರ್‌ 109-ಎ ಪ್ರದೇಶದ 2.01 ಎಕರೆ ಜಾಗದಲ್ಲಿ 2019ರ ಸೆಪ್ಟೆಂಬರ್‌ 4ರಿಂದ 2020ರ ಸೆಪ್ಟೆಂಬರ್‌ 3ರವರೆಗೆ ಒಂದು ವರ್ಷದ ಮಟ್ಟಿಗೆ ಗುತ್ತಿಗೆ ಪಡೆದಿದ್ದಾರೆ. ಆದರೆ, ಅವರು ಆ ನಿರ್ದಿಷ್ಟಪ್ರದೇಶವನ್ನು ಮೀರಿ ಅತಿಕ್ರಮಣ ಮಾಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಶಿರಹಟ್ಟಿ: ಕಪ್ಪತ್ತಗುಡ್ಡ ವನ್ಯ ಜೀವಿಧಾಮ ಹಿಂಪಡೆದರೆ ಉಗ್ರ ಹೋರಾಟ

ಜಿಂದಾಲ್‌ ಕಂಪನಿಗೆ ಸಾಗಣೆ?

ಕಪ್ಪತ್‌ಗಿರಿಯಲ್ಲಿರುವ ಮಣ್ಣಿನಲ್ಲಿ ಶೇ. 65 ರಷ್ಟು ಕಬ್ಬಿಣಾಂಶ ಇದ್ದು, ಮಣ್ಣಿನ ಹೆಸರಿನಲ್ಲಿ ಕಬ್ಬಿಣದ ಅದಿರನ್ನು ಸಾಗಿಸಲಾಗುತ್ತಿದೆ. ಮುಖ್ಯವಾಗಿ ಇಲ್ಲಿಂದ ಗಿಣಿಗೇರಿಯ ಜಿಂದಾಲ್‌ ಕಂಪನಿಗೆ ಸಾಗಿಸುತ್ತಿದ್ದಾರೆ ಎನ್ನಲಾಗುತ್ತಿದ್ದು ಸಂಬಂಧಪಟ್ಟಇಲಾಖೆಯ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ.

ಕಳಸಾಪೂರ, ನಾಗಾವಿ ಸುತ್ತಲಿನ ಗುಡ್ಡ ಪ್ರದೇಶದಲ್ಲಿ ಮಣ್ಣಿನ ಅಕ್ರಮ ಸಾಗಣೆ ಅವ್ಯಾಹತವಾಗಿ ನಡೆದಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಹಾಗಾಗಿ ಗರಸು ಮಣ್ಣು ಸಾಗಣೆ ಹೆಸರಲ್ಲಿ ಅದಿರು ಸಾಗಾಟ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಕ್ರಮಕ್ಕೆ ಮುಂದಾಗಿಲ್ಲ

ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪದ ಬಗ್ಗೆ ಇಲಾಖೆ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗಗೊಳಿಸಬೇಕಿದೆ.
 

Follow Us:
Download App:
  • android
  • ios