Asianet Suvarna News Asianet Suvarna News

ಬಾಗಲಕೋಟೆ: ಸಿಇಓ ವಿರುದ್ಧ ದಲಿತ ವಿರೋಧಿ ನೀತಿ ಆರೋಪ, ಪಿಡಿಓ ವಿರುದ್ಧ ಕ್ರಮಕ್ಕೆ ಡಿಎಸ್ಎಸ್ ಆಗ್ರಹ

ಇನ್ನು 15 ದಿನಗಳಲ್ಲಿ ಸಂಗಮೇಶ ಸೊರಗಾಂವಿ ಮೇಲೆ ಸೂಕ್ತ ಕ್ರಮ ತಗೆದುಕೊಂಡು ಅಮಾನತುಗೊಳಿಸದೇ ಹೋದರೆ ಜಿಲ್ಲಾಡಳಿತ ಮುಂಭಾಗ ಸಿಇಓ ಅವರ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಪಿಡಿಓ ಅಮಾನತಿಗೆ ಒತ್ತಾಯಿಸಿ ಧರಣಿ ನಡೆಸಲಾಗುವುದು. 

Allegation of anti-Dalit policy against Bagalkot ZP CEO grg
Author
First Published Jan 20, 2023, 11:00 PM IST

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಜ.20): ಪಿಡಿಓ ವಿರುದ್ಧ ಕ್ರಮಕೈಗೊಳ್ಳದೇ ಬಾಗಲಕೋಟೆ ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ್ ದಲಿತ ವಿರೋಧಿ ಅನುಸರಿಸುತ್ತಿದ್ದಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಆರೋಪಿಸಿದರು. ಅವರು ಬಾಗಲಕೋಟೆಯಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿ, ಬಾಗಲಕೋಟೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಅವರು ದಲಿತ ವಿರೋಧಿ ಹಾಗೂ ದಲಿತರ ಮೇಲೆ ನಿಂದನೆ ಮಾಡಿದ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಸಂಗಮೇಶ ಸೊರಗಾಂವಿಗೆ ಬೆಂಬಲ ನೀಡುತ್ತಿದ್ದಾರೆ, ಜೊತೆಗೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕುಲಹಳ್ಳಿ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ರಕ್ಷಣೆಗೆ ಮುಂದಾಗಿದ್ದಾರೆಂದು ಆರೋಪಿಸಿದರು.

2021 ರಲ್ಲಿ ಪ್ರವಾಹ ಬಂದಾಗ, ಸರ್ಕಾರದ ತಕ್ಷಣದ  10 ಸಾವಿರ ರೂ. ಪರಿಹಾರ ಹಂಚಿಕೆ ಮಾಡಲು ಸರ್ವೆ ಮಾಡುವ ಸಂದರ್ಭದಲ್ಲಿ ಉಳಿದ ಸಂತ್ರಸ್ತರ ಬಗ್ಗೆ ವಿಚಾರಿಸಲು ಕಚೇರಿಗೆ ಹೋದ ಸಂದರ್ಭದಲ್ಲಿ ದಲಿತ ಮುಖಂಡರಾದ ಬಸವರಾಜ ದೊಡಮನಿ, ಹಣಮಂತ ಕಾಂಬಳೆ ಇವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆಂದು ಆಪಾದಿಸಿದರು.

'ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಪರಿಕಲ್ಪನೆ ಹರಿಕಾರ'

ಹೀಗಾಗಿ ಜಾತಿವಾದಿ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು, ಆದ್ರೆ ಪ್ರತಿಭಟನೆ ಆರಂಭಿಸಿದಾಗ ರಬಕವಿ-ಬನಹಟ್ಟಿ ತಹಶೀಲ್ದಾರ ಸ್ಥಳಕ್ಕೆ ಆಗಮಿಸಿ ನಮ್ಮ ಮನವಿ ಸ್ವೀಕರಿಸಿ ಕ್ರಮ ತಗೆದುಕೊಳ್ಳುವ ಭರವಸೆ ನೀಡಿದಾಗ ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡೆವು. ನಂತರ ವಿಳಂಬ ಮಾಡಿದಾಗ 2021 ಅಕ್ಟೋಬರ್ 21 ರಂದು ಬಾಗಲಕೋಟೆಯ ನವನಗರದ ಜಿಲ್ಲಾಡಳಿತ ಭವನ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಅವರು ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲು ತಿಳಿಸಿದರು. ಅದನ್ನು ನಿರ್ಲಕ್ಷ್ಯ ಮಾಡಿದಾಗ 2022 ಜನೇವರಿ 12 ರಂದು ಜಿ.ಪಂ.ಸಿಇಓ ಅಧಿಕಾರಿಗಳಿಗೆ ಖುದ್ದಾಗಿ ಭೇಟಿಯಾಗಿ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಮನವಿ ಕೊಟ್ಟು ಒಂದು ವರ್ಷವಾದರೂ ಕೂಡಾ ಮತ್ತು ನಾವು ಇದರ ಬಗ್ಗೆ ಹಲವು ಬಾರಿ ಭೇಟಿಯಾಗಿ ವಿಚಾರಿಸಿದರು ಕೂಡಾ ಅಧಿಕಾರಿ ಸಂಗಮೇಶ ಸೊರಗಾಂವಿಗೆ ಬೆಂಬಲಿಸುತ್ತಾ ಸಂಪೂರ್ಣವಾಗಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು ಅವನನ್ನು ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ದೂರಿದರು.

ಇನ್ನು 15 ದಿನಗಳಲ್ಲಿ ಸಂಗಮೇಶ ಸೊರಗಾಂವಿ ಮೇಲೆ ಸೂಕ್ತ ಕ್ರಮ ತಗೆದುಕೊಂಡು ಅಮಾನತುಗೊಳಿಸದೇ ಹೋದರೆ ಜಿಲ್ಲಾಡಳಿತ ಮುಂಭಾಗ ಸಿಇಓ ಅವರ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಪಿಡಿಓ ಅಮಾನತಿಗೆ ಒತ್ತಾಯಿಸಿ ಧರಣಿ ನಡೆಸಲಾಗುವುದು ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಗರ ಬಣದ) ರಬಕವಿ-ಬನಹಟ್ಟಿ ತಾಲೂಕಾ ಸಂಚಾಲಕ ಬಸವರಾಜ ದೊಡಮನಿ, ನಗರ ಸಂಚಾಲಕ ಶಿವಾನಂದ ಸಿಂಘೆ ಮತ್ತಿತರರು ಇದ್ದರು.

Follow Us:
Download App:
  • android
  • ios