* ಜನರ ಅವಶ್ಯಕತೆಗೆ ಸ್ಪಂದಿಸಿದಾಗ ಮಾತ್ರ ಸೇವೆ ಸಫಲ - IPS ತಿಮ್ಮಪ್ಪಯ್ಯ ಮಡಿಯಾಲ್* ವಿಜಯೀ ಭವ" -3 ಉದ್ಘಾಟಿಸಿದ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ* 78ನೇ ವರ್ಷದ ವಾರ್ಷಿಕ ಮಹಾಸಭೆ - ಡಾ. ಗಿರಿಧರ ಕಜೆ ಪುನರಾಯ್ಕೆ
ಬೆಂಗಳೂರು(ಮಾ. 21) ಜನರ ಅವಶ್ಯಕತೆಗೆ ಸ್ಪಂದಿಸಿದಾಗ ಮಾತ್ರ ನಮ್ಮ ಸೇವೆ ಸಾಫಲ್ಯ ಹೊಂದಲು ಸಾಧ್ಯ ಎಂದು ಮಾಜಿ ರಾಜ್ಯ ಪೋಲಿಸ್ ಮಹಾನಿರ್ದೇಶಕ IPS ತಿಮ್ಮಪ್ಪಯ್ಯ ಮಡಿಯಾಲ್ ಹೇಳಿದರು.
ಹವ್ಯಕ ಮಹಾಸಭೆಯಲ್ಲಿ(Shri Akhila Havyaka Mahasabha Bengaluru) ನಡೆದ "ವಿಜಯೀ ಭವ" -3 ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಸಾಧನೆ ಮಾಡಿದೆ ಎಂಬುದು ಸರಿಯಲ್ಲ, ಜೀವನದಲ್ಲಿ ಅವಕಾಶಗಳು ಬಂದಾಗ ಅವುಗಳ ಸದುಪಯೋಗ ಮಾಡಿಕೊಳ್ಳುವುದು ಮುಖ್ಯ. ಅವಕಾಶಗಳು ಬಂದಾಗ ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದರಿಂದ ವಿವಿಧ ರೀತಿಯಲ್ಲಿ ಸಮಾಜಕ್ಕೆ ಸೇವೆಸಲ್ಲಿಸಲು ಸಾಧ್ಯವಾಯಿತು ಎಂದು ಸೈನ್ಯದಲ್ಲಿ (Indian Army)7 ವರ್ಷ, ಆನಂತರ 33 ವರ್ಷ ಪೋಲಿಸ್ (Karnataka Police) ಇಲಾಖೆಯಲ್ಲಿ ಸಲ್ಲಿಸಿದ ಸೇವೆಯ ಬಗ್ಗೆ ವಿವರಿಸಿದರು.
1965ರ ಭಾರತ - ಪಾಕ್ ಯುದ್ಧದ ಸಂದರ್ಭವನ್ನು ಸ್ಮರಿಸಿದ ಅವರು, ಯುದ್ದದಲ್ಲಿ ಯಾವ ಸಂದರ್ಭದಲ್ಲಿ ಏನೂ ಬೇಕಾದರೂ ಆಗಬಹುದು, ನನ್ನ ಜೀವನ ಅಲ್ಲಿಗೇ ಮುಗಿಯಬಹುದಿತ್ತು, ಯಾವ ತಿರುವನ್ನೂ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಯುದ್ದದಲ್ಲಿ ನಾವು ಪಾಕಿಸ್ತಾನವನ್ನು(Pakistan) ಪ್ರವೇಶಿಸಿ ಆಕ್ರಮಣವನ್ನು ಮಾಡಿದೆವು. ಇದೇ ನನ್ನ ಜೀವನದ ಮೊದಲು ವಿದೇಶಿ ಯಾತ್ರೆ ಎಂದರು.
ಮೊದಲಿಂದಲೂ ಸನಾತನ ಸಂಪ್ರದಾಯದಲ್ಲಿ ಜೀವನ ಕ್ರಮವಿದ್ದ ಕಾರಣ, ಮೊದಲು ಸೈನ್ಯದಲ್ಲಿ,ಆನಂತರ ಧಾರ್ಮಿಕ ಕ್ಷೇತ್ರ, ಶ್ರೀರಾಮಚಂದ್ರಾಪುರ ಮಠದಲ್ಲಿ ಸೇವೆ ಸಲ್ಲಿಸಿದರೂ ಹೆಚ್ಚಿನ ವ್ಯತ್ಯಾಸ ನನಗೆ ಅನಿಸಲಿಲ್ಲ. ನನ್ನ ಜೀವನ ಸಿದ್ಧಾಂತದಲ್ಲಿ ಬದಲಾವಣೆ ಮಾಡಿಕೊಂಡಿಲ್ಲ ಎಂದು ತಿಳಿಸಿದರು.
ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಮಾತನಾಡಿ, ಹವ್ಯಕರಲ್ಲಿ ಏಕತೆ ಇದೆ, ಸಮಗ್ರ ಬ್ರಾಹ್ಮಣರಲ್ಲಿ ಇದು ಬರಬೇಕು. ಹವ್ಯಕ ಮಹಾಸಭೆಯು ಉಳಿದೆಲ್ಲ ಸಂಘಟನೆಗಳಿಗೆ ಆದರ್ಶಪ್ರಾಯವಾಗಿದೆ. ಹವ್ಯಕ ಸಂಘಟನೆ - ವಿಶೇಷ ಕಾರ್ಯಕ್ರಮಗಳು ಹಾಗೂ ಪತ್ರಿಕೆಯನ್ನು ಮಾದರಿಯಾಗಿಟ್ಟುಕೊಂಡು ಬ್ರಾಹ್ಮಣ ಮಹಾಸಭೆಯಲ್ಲಿ ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
Technology and Media ತಂತ್ರಜ್ಞಾನದ ಸರಿಯಾದ ಬಳಕೆ ಮಾಧ್ಯಮದ ಯಶಸ್ಸಿನ ಸೂತ್ರ; ರವಿ ಹೆಗಡೆ
ಸೈನ್ಯ - ಪೋಲಿಸ್ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ; ನಿವೃತ್ತ ಜೀವನದಲ್ಲಿ ಶ್ರೀರಾಮಚಂದ್ರಾಪುರಮಠದ (Sri Ramachandrapuramatha)ಸಮ್ಮುಖ ಸರ್ವಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ತಿಮ್ಮಪ್ಪಯ್ಯ ಮಡಿಯಾಲ್ ಅವರ ಸಾಧನೆ ಅಮೋಘವಾದದ್ದು. ಹಾಗೆಯೇ ಪತ್ರಿಕಾರಂಗದಲ್ಲಿ ವಿಶ್ವೇಶ್ವರ ಭಟ್ಟರ ಸಾಧನೆ ಅಪ್ರತಿಮವಾದದ್ದು ಎಂದು ಸಾಧಕರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಹಾಗೂ ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಸಾಧನೆ ಮಾಡಲು ಅವಕಾಶ ಸಿಗುತ್ತದೆ. ಆದರೆ ಬಹುತೇಕ ಸಮಯಗಳಲ್ಲಿ ನಾವು ಆ ಅವಕಾಶವನ್ನು ಎದುರಿಸಲು ಸಿದ್ಧರಿರುವುದಿಲ್ಲ. ಹರಿಯುವ ನದಿ ಹರಿಯಲು ಆರಂಭಿಸುವಾಗ ಸಣ್ಣ ಸೆಲೆಯಾಗಿ ಮಾತ್ರ ಇರುತ್ತದೆ. ಆನಂತರ ಉಪನದಿಗಳು ಸೇರಿಕೊಂಡು, ಅದು ದೊಡ್ಡ ನದಿಯಾಗಿ ಹರಿಯುತ್ತದೆ. ಹಾಗೆಯೇ ನಮ್ಮ ಜೀವನವೂ ಬೇರೆಬೇರೆ ರೀತಿಯ ಮಜಲನ್ನು ಪಡೆದುಕೊಳ್ಳುತ್ತದೆ. ಆ ಸಂದರ್ಭಗಳಲ್ಲಿ ನಾವು ಹೇಗೆ ಎದುರಿಸುತ್ತೇವೆ, ಹೇಗೆ ಸ್ಪಂದಿಸುತ್ತೇವೆ ಎಂಬುದು ನಮ್ಮ ಸಾಧನೆಯನ್ನು ನಿರ್ಧರಿಸುತ್ತದೆ ಎಂದರು.
ಕುಗ್ರಾಮದಲ್ಲಿ ಹುಟ್ಟಿದ ನಾನು, ಸಂಪಾದಕನಾಗುತ್ತೇನೆ ಎಂಬ ಯಾವ ಕನಸೂ ಇರಲಿಲ್ಲ. ಬೆಂಗಳೂರಿಗೆ ಬಂದಿದ್ದೇ ಸಾಧನೆ ಎಂದುಕೊಂಡಿದ್ದೆ. ಬಾಲ್ಯದಲ್ಲಿ ನನ್ನ ಅಜ್ಜನಿಗೆ ಪತ್ರಿಕೆಯನ್ನು ಪ್ರತಿದಿನ ಓದಿ ಹೇಳಬೇಕಿತ್ತು, ಆ ಕಾರಣದಿಂದಲೋ ಏನೋ ನಾನು ಪತ್ರಿಕಾ ರಂಗದೆಡೆಗೆ ಆಕರ್ಷಿತನಾದೆ ಎಂದು ತಮ್ಮ ಬಾಲ್ಯವನ್ನು ಮೆಲುಕು ಹಾಕಿದರು. 15-20 ವರ್ಷಕ್ಕೊಮ್ಮೆ ಎಲ್ಲಾ ಕ್ಷೇತ್ರಗಳು ಬದಲಾವಣೆಯನ್ನು ಬಯಸುತ್ತವೆ. ಆ ಸಂದರ್ಭದಲ್ಲಿ ನಾವು ಸರಿಯಾಗಿ ಬಳಸಿಕೊಂಡರೇ ನಾವು ಬೆಳೆದು, ಆ ಕ್ಷೇತ್ರವನ್ನು ಬೆಳೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಉಪಾಧ್ಯಕ್ಷ ಆರ್ ಎಂ ಹೆಗಡೆ, ಶ್ರೀಧರ ಜೆ ಭಟ್ಟ ಕೆಕ್ಕಾರು, ಕಾರ್ಯದರ್ಶಿಗಳಾದ ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಎಸ್ ಭಟ್ ಯಲಹಂಕ, ರವಿನಾರಾಯಣ ಪಟ್ಟಾಜೆ ಉಪಸ್ಥಿತರಿದ್ದರು.
ಹುಳೇಗಾರು ನಾರಾಯಣ ಭಟ್, ಸುಕನ್ಯಾ ಸಂಪತ್ ಸಾಧಕರ ಜೊತೆ ಸಂವಾದ ನಡೆಸಿಕೊಟ್ಟರು. ಮೋಹನ ಭಾಸ್ಕರ ಹೆಗಡೆ, ಶ್ರೀಕಾಂತ್ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಪಾಣಿನಿ ದೆರಾಜೆ ತಂಡದಿಂದ ನಾಕಾರು ತಂತಿ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು.
78ನೇ ವರ್ಷದ ವಾರ್ಷಿಕ ಮಹಾಸಭೆ, ಡಾ.ಕಜೆ ಪುನರಾಯ್ಕೆ
ಮಲ್ಲೇಶ್ವರದ ಹವ್ಯಕ ಭವನದಲ್ಲಿ 78ನೇ ವರ್ಷದ ವಾರ್ಷಿಕ ಮಹಾಸಭೆ ನಡೆಯಿತು. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಬೆಂಗಳೂರು, ಹಾಸನ, ಕರ್ನಾಟಕ ಇತರೆ ಹಾಗೂ ಸಂಘ ಸಂಸ್ಥೆಗಳಿಗೆ ಸಂಬಂಧಿಸಿ ಚುನಾವಣಾ ಪ್ರಕ್ರಿಯೆ ನಡೆಯಿತು. ಎಲ್ಲಾ ಕ್ಷೇತ್ರಗಳಿಗೂ ಅವಿರೋಧವಾಗಿ ನಿರ್ದೇಶಕರು ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ರಾಮ ಭಟ್ ಘೋಷಿಸಿದರು. ಆನಂತರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಡಾ. ಗಿರಿಧರ ಕಜೆ 7ನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು.
ಆಡಳಿತ ಮಂಡಳಿ:
ಡಾ. ಗಿರಿಧರ ಕಜೆ - ಅಧ್ಯಕ್ಷರು
ಆರ್ ಎಂ ಹೆಗಡೆ - ಉಪಾಧ್ಯಕ್ಷರು
ಶ್ರೀಧರ ಜೆ ಭಟ್ಟ ಕೆಕ್ಕಾರು - ಉಪಾಧ್ಯಕ್ಷರು
ಸಿಎ. ವೇಣುವಿಘ್ನೇಶ ಸಂಪ - ಪ್ರಧಾನ ಕಾರ್ಯದರ್ಶಿ
ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ - ಕಾರ್ಯದರ್ಶಿ
ಆದಿತ್ಯ ಹೆಗಡೆ ಕಲಗಾರು - ಕಾರ್ಯದರ್ಶಿ
ಕೃಷ್ಣಮೂರ್ತಿ ಎಸ್ ಭಟ್ ಯಲಹಂಕ - ಕೋಶಾಧಿಕಾರಿ
ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರು.
ಬೆಂಗಳೂರು: ಪ್ರಶಾಂತ ಕುಮಾರ್ ಭಟ್, ಕೃಷ್ಣಮೂರ್ತಿ ಭಟ್, ಮಹಾಬಲೇಶ್ವರ ಭಟ್, ಮಹಾಬಲೇಶ್ವರ ಹೆಗಡೆ
ಉತ್ತರಕನ್ನಡ: ಅರುಣ್ ಹೆಗಡೆ, ಪ್ರಶಾಂತ್ ಹೆಗಡೆ
ಶಿವಮೋಗ್ಗ: ಎಮ್ ಮಂಜುನಾಥ್ ರಾವ್, ಗಣಪತಿ ಭಟ್ ಜೆ.ವಿ
ದಕ್ಷಿಣ ಕನ್ನಡ: ಬಿ ಶಿವಶಂಕರ ಭಟ್, ಪಿ ಈಶ್ವರ ಭಟ್, ಶ್ರೀಪ್ರಕಾಶ್, ರಮೇಶ್ ಭಟ್, ಶಿವಪ್ರಸಾದ್
ಹಾಸನ - ಚಿಕ್ಕಮಗಳೂರು: ಜಿ. ರಾಜಗೋಪಾಲ ಜೋಷಿ
ಕರ್ನಾಟಕ - ಇತರೆ: ಸುರೇಶ್ ನಂದಿಕೇಶ್ವರ ಹೆಗಡೆ
ಸಂಘ - ಸಂಸ್ಥೆ: ಗುರುಪಾದ್
