ಬೀದರ್ನಲ್ಲಿ ಏರ್ಶೋ: ಲೋಹದ ಹಕ್ಕಿಗಳ ಚಿತ್ತಾರ ಕಣ್ತುಂಬಿಕೊಂಡ ಜನತೆ..!
ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ವಾಯು ಪಡೆ ತರಬೇತಿ ಕೇಂದ್ರ ನಡೆಸಿದ ವೈಮಾನಿಕ ಪ್ರದರ್ಶನ
ಬೀದರ್(ಆ.12): ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ನಗರದಲ್ಲಿ ಇಂದು(ಗುರುವಾರ) ವಾಯು ಪಡೆ ತರಬೇತಿ ಕೇಂದ್ರ ನಡೆಸಿದ ವೈಮಾನಿಕ ಪ್ರದರ್ಶನ ಕಣ್ಮನ ಸೆಳೆಯಿತು. ಬಾನಂಗಳದಲ್ಲಿ ಲೋಹದ ಹಕ್ಕಿಗಳು ಮೂಡಿಸಿದ ಚಿತ್ತಾರ ಮೈನವಿರೇಳಿಸುವಂತಿತ್ತು. ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ 1 ಕಿ.ಮೀ ಉದ್ದದ ರಾಷ್ಟ್ರ ಧ್ವಜದ ಮೆರವಣಿಗೆ ಬಳಿಕ ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ ಫೋರ್ಸ್ನ ಮೂರು ಸೂರ್ಯಕಿರಣ ಯುದ್ಧ ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದವು. ವೈಮಾನಿಕ ಪ್ರದರ್ಶನಕ್ಕೆ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರು, ಗಣ್ಯರು ಮತ್ತು ಅಧಿಕಾರಿಗಳು ಸಾಕ್ಷಿಯಾದರು.
ಮೋಡ ಕವಿದ ಹಿನ್ನೆಲೆಯಲ್ಲಿ ಪ್ರದರ್ಶನಕ್ಕೆ ಅಡ್ಡಿಯಾಯಿತು. ಬಾನಂಗಳದಲ್ಲಿ ವಿಮಾನಗಳ ಹಾರಾಟ ವೀಕ್ಷಿಸಿದ ವಿದ್ಯಾರ್ಥಿಗಳು ಜಯಘೋಷಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು. ವಿಮಾನಗಳ ಹಾರಾಟವನ್ನು ಕಣ್ಣು ಮಿಟುಕಿಸದೆ ನೋಡುತ್ತಾ ಜೈ ಹಿಂದ್, ವಂದೇ ಮಾತರಂ ಎನ್ನುವ ಘೋಷಣೆಗಳನ್ನು ಕೂಗಿದರು.
ಔರಾದ್ ನಲ್ಲಿ 1 ಸಾವಿರ ಮೀಟರ್ ಭವ್ಯ ತಿರಂಗಾ ಯಾತ್ರೆ
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಎಸ್.ಪಿ ಕಿಶೋರ ಬಾಬು, ಜಿ.ಪಂ ಸಿಇಒ ಶಿಲ್ಪಾ ಎಂ., ಬಿಡಿಎ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ನಗರಸಭೆ ಸದಸ್ಯ ಶಶಿ ಹೊಸಳ್ಳಿ, ಪ್ರಮುಖರಾದ ವಿರೂಪಾಕ್ಷ ಗಾದಗಿ, ವಿಜಯಕುಮಾರ ಸೋನಾರೆ ಮತ್ತಿತರರು ಇದ್ದರು.