ರಾಜ್ಯ ಸರ್ಕಾರದ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಿ 2000 ಹುದ್ದೆಗಳನ್ನು ರದ್ದುಗೊಳಿಸಲು ಸಂಪುಟ ಉಪಸಮಿತಿಯಲ್ಲಿ ತೀರ್ಮಾನಿಸಿರುವುದನ್ನು ಆಲ್‌ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌  ತೀವ್ರವಾಗಿ ಖಂಡಿಸಿದೆ.

ವಿಜಯಪುರ (ಅ.14): ರಾಜ್ಯ ಸರ್ಕಾರದ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಿ 2000 ಹುದ್ದೆಗಳನ್ನು ರದ್ದುಗೊಳಿಸಲು ಸಂಪುಟ ಉಪಸಮಿತಿಯಲ್ಲಿ ತೀರ್ಮಾನಿಸಿರುವುದನ್ನು ಆಲ್‌ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಒ) ತೀವ್ರವಾಗಿ ಖಂಡಿಸುತ್ತದೆ ಎಂದು ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು, ರಾಜ್ಯದಲ್ಲಿ 44 ಇಲಾಖೆಗಳಲ್ಲಿ ಸುಮಾರು 6.5 ಲಕ್ಷಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳಿದ್ದು ಅದರಲ್ಲಿ 2.52 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳನ್ನು ಸೇರಿ 16,347 ಮಂಜೂರಾದ ಹುದ್ದೆಗಳು ಇದ್ದರೆ ಅದರಲ್ಲಿ 8,887 ರಷ್ಟುಹುದ್ದೆಗಳು, ಅಂದರೆ ಶೇ.54 ರಷ್ಟುಖಾಲಿ ಇವೆ. ಮೊದಲು ಈ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು. ರಾಜ್ಯದಲ್ಲಿ ಲಕ್ಷಾಂತರ ಶಿಕ್ಷಿತ ನಿರುದ್ಯೋಗಿ ಯುವಜನರು ಸರ್ಕಾರ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದೆಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಅವರೆಲ್ಲರ ನಿರೀಕ್ಷೆಗೆ ತಣ್ಣೀರೆರಚ್ಚುವಂತೆ ಇಲಾಖೆಗಳ ವಿಲೀನದ ಹೆಸರಿನಲ್ಲಿ ಹುದ್ದೆಗಳನ್ನು ರದ್ದುಗೊಳಿಸುತ್ತಿರುವುದು ಉದ್ಯೋಗಾಕಾಂಕ್ಷಿ ಯುವಜನವಿರೋ​ಕ್ರಮವಾಗಿದೆ. ಹುದ್ದೆಗಳ ರದ್ಧತಿಯಿಂದ ಸರ್ಕಾರದ ಬೊಕ್ಕಸಕ್ಕಾಗುವ ಹೊರೆಯನ್ನು ತಗ್ಗಿಸುವ ಮಾತನಾಡಿದ್ದಾರೆ. ನಿಜವಾಗಿಯೂ ಸರ್ಕಾರಕ್ಕೆ ಬೊಕ್ಕಸದ ಹೊರೆಯನ್ನು ತಗ್ಗಿಸುವ ಮನಸಿದ್ದರೆ ಇಲಾಖೆಗಳಲ್ಲಿ ತಾಂಡವವಾಡುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ನಿಯಂತ್ರಿಸಲಿ. ಅದು ಬಿಟ್ಟು ಯುವಜನರ ಬದುಕಿಗೆ ಕೊಡಲಿಯೇಟು ನೀಡುತ್ತಿರುವುದು ಖಂಡನಾರ್ಹವಾಗಿದೆ ಎಂದರು.

ಇನ್ನೊಂದು ಮುಖ್ಯವಾದ ಅಂಶವೆಂದರೆ ರಾಜ್ಯದಲ್ಲಿ ಈಗಿರುವ ಹುದ್ದೆಗಳು ಸಹ ದಶಕಗಳ ಹಿಂದಿನ ಜನಸಂಖ್ಯೆ ಆಧಾರದ ಮೇಲೆ ಮಂಜೂರಾದ ಹುದ್ದೆಗಳಾಗಿವೆ. ದಶಕಗಳಿಂದ ಈಚೆಗೆ ಏರಿದ ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳನ್ನು ಹೆಚ್ಚಿಸಬೇಕಾಗಿರುವುದು ಸರ್ಕಾರದ ಆದ್ಯತೆಯಾಗಬೇಕಾಗಿತ್ತು. ಹಲವಾರು ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದರಿಂದ ಜನಸಾಮಾನ್ಯರ ಕೆಲಸಗಳು ಕೂಡ ವಿಳಂಬವಾಗುತ್ತಿದ್ದು, ಆದ್ದರಿಂದ ಈ ಕೂಡಲೇ ಕೃಷಿ ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ 2000 ಹುದ್ದೆಗಳ ರದ್ದು ಮಾಡುವ ನಿರ್ಧಾರವನ್ನು ಕೈ ಬಿಡಬೇಕು, ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕಾಯಂ ಆಧಾರದಲ್ಲಿ ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಹೆಚ್ಚಿದ ಜನಸಂಖ್ಯೆಗನುಗುಣವಾಗಿ ಇಲಾಖೆಗಳಲ್ಲಿ ಹೆಚ್ಚಿನ ಹುದ್ದೆಗಳನ್ನು ಮಂಜೂರು ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲಾಖೆಗಳ ಒಗ್ಗೂಡಿಸುವ ವಿಚಾರ ಕೈಬಿಡಿ
ಕುಣಿಗಲ್‌: ರೇಷ್ಮೆ ತೋಟಗಾರಿಕಾ ಹಾಗೂ ಕೃಷಿ ಇಲಾಖೆಗಳ ಒಗ್ಗೂಡಿಸುವ ವಿಚಾರ ಕೈಬಿಡದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕುಣಿಗಲ್‌ ತಾಲೂಕಿನ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ ಕೆ ಅಣ್ಣೇಗೌಡ ಎಚ್ಚರಿಸಿದ್ದಾರೆ.

ಪಟ್ಟಣದ ಜಿಕೆಬಿಎಂಎಸ್‌ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದರು. ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ಮಾಡಬೇಕಾದ ಕರ್ತವ್ಯವನ್ನು ರೇಷ್ಮೆ ಇಲಾಖೆ ಮಾಡುತ್ತಿದೆ. ಅದಕ್ಕೆ ಸಹಕಾರ ನೀಡಬೇಕೇ ಹೊರತು ತೊಂದರೆ ಮಾಡಬಾರದೆಂದರು.

ರೇಷ್ಮೆ ಇಲಾಖೆಯಲ್ಲಿರುವ ಹಲವಾರು ಹುದ್ದೆಗಳನ್ನು ಭರ್ತಿ ಮಾಡಿ ಮೈಸೂರು ಬಿತ್ತನೆ ಕೇಂದ್ರ ಅಭಿವೃದ್ಧಿಪಡಿಸಬೇಕು, ಇದರಿಂದ ಹೆಚ್ಚು ಆದಾಯ ರೈತರಿಗೆ ಬರುತ್ತದೆ ಮತ್ತು ಸರ್ಕಾರದ ಆದಾಯ ಹೆಚ್ಚಾಗಲಿದೆ. ಸರ್ಕಾರ ರೇಷ್ಮೆ ಇಲಾಖೆಯಲ್ಲಿ 2346 ಹುದ್ದೆಗಳನ್ನು ರದ್ದು ಮಾಡುವ ಕೆಲಸ ಮುಂದಾಗಿದೆ ಇದು ರೈತರ ವಿರೋಧ ನೀತಿ ಎಂದು ತೀವ್ರ ಕಿಡಿಕಾರಿದರು.

ಕಲ್ಲುಗಣಿಗಾರಿಕೆ ಧೂಳಿನಿಂದ ರೇಷ್ಮೆ ಬೆಳೆ ನಷ್ಟ

ರಾಜ್ಯದಲ್ಲಿ 1.35 ಲಕ್ಷ ರೈತ ಕುಟುಂಬಗಳು 10 ಸಾವಿರ ರೇಷ್ಮೆ ರೀಲರ್ಸ್‌ಗಳು ಸೇರಿದಂತೆ ಸಾವಿರಾರು ಕುಟುಂಬಗಳು ರೇಷ್ಮೆಯಿಂದ ಜೀವನ ಸಾಗಿಸುತ್ತಿವೆ. ಅಂತಹ ಕುಟುಂಬಗಳಿಗೆ ಸರ್ಕಾರ ತೊಂದರೆ ಮಾಡಬಾರದು ಎಂದು ಮನವಿ ಮಾಡಿದರು.

ರೇಷ್ಮೆ ಇಲಾಖೆಯ 2004 ಹುದ್ದೆಗಳನ್ನು ರದ್ದುಪಡಿಸುವ ಪ್ರಸ್ತಾವನೆ ಕೈಬಿಡಲು ಒತ್ತಾಯ

ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಿ.ಎಲ್‌.ಬೆಟ್ಟೇಗೌಡ, ಹೊಸ್ಕೆರೆ ಬೆಟ್ಟಸ್ವಾಮಿ, ಸಾಲು ಪಾಳ್ಯದ ಶಿವರಾಜ್‌, ಬಿ.ಎಂ.ನಾಗರಾಜ, ಚನ್ನೇಗೌಡ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದು ನಂತರ ತಹಸೀಲ್ದಾರ್‌ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.