ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಫೋಟೋದಿಂದ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಆತಂಕಗೊಂಡಿದ್ದರು. ತೀವ್ರ ಕಾರ್ಯಾಚರಣೆಯ ನಂತರ, ತಿಳಿದುಬಂದಿದ್ದು ಏನೆಂದರೆ..

ಮಂಡ್ಯ (ಮಾ.26): ಕೃತಕ ಬುದ್ಧಿಮತ್ತೆ (ಎಐ) ಬಳಸಿ ಸೃಷ್ಟಿಸಿದ ಚಿರತೆಯನ್ನು ಕಂಡು ಮಂಡ್ಯ ಜಿಲ್ಲೆ ಮಳವಳ್ಳಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇಡೀ ದಿನ ಕಂಗಾಲಾಗಿರುವ ಪ್ರಸಂಗ ಬುಧವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ‘ಮಳವಳ್ಳಿಯಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ’ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಒಂದು ಫೋಟೋ ಹರಿಬಿಡಲಾಗಿತ್ತು. ಇದನ್ನು ನಂಬಿದ ಜನರು ಬೆಚ್ಚಿಬಿದ್ದು ಕೂಡಲೇ ಅದನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದರು. ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಮೈಸೂರಿನಿಂದ ಚಿರತೆ ಕಾರ್ಯಪಡೆ ಕರೆಸಿ ಪರಿಶೀಲಿಸಿ, ಚಿರತೆ ಸೆರೆಗೆ ಬೋನ್ ಇಡಲಾಗಿತ್ತು. 

ಆ ಬಳಿಕ ಡ್ರೋನ್ ಬಳಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ತಪಾಸಣೆ ನಡೆಸಲಾಗಿದ್ದು, ಎಲ್ಲಿಯೂ ಕಪ್ಪು ಚಿರತೆ ಕಂಡುಬರಲಿಲ್ಲ. ಈ ವೇಳೆ ಫೋಟೋವನ್ನು ಸರಿಯಾಗಿ ಪರಿಶೀಲಿಸಿದಾಗ ಅದು ಕೆಲ ಕಿಡಿಗೇಡಿಗಳು ಎಐ ಬಳಸಿ ಸೃಷ್ಟಿಸಿದ ಚಿತ್ರ ಎಂಬುದು ಖಚಿತವಾಗಿದೆ. ಆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕಪ್ಪು ಚಿರತೆ ಈ ಭಾಗದಲ್ಲಿ ಕಂಡುಬರುವುದಿಲ್ಲ ಎಂದು ಕೆಲ ಅರಣ್ಯ ಅಧಿಕಾರಿಗಳು ಹೇಳಿದರು ಸಹ ಜನರು ನಂಬಿರಲಿಲ್ಲ. ಜನರ ಆಕ್ರೋಶಕ್ಕೆ ಮಣಿದು ಇಲ್ಲದ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ ಎನ್ನುವುದೇ ವಿಪರ್ಯಾಸ.