ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರತ್ಯೇಕ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸ್ಥಾಪಿಸಿ ಕೃಷಿ ಸಚಿವರು ಆದೇಶ ಹೊರಡಿಸಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ.

ಬೆಂಗಳೂರು (ಮಾ.01): ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರತ್ಯೇಕ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸ್ಥಾಪಿಸಬೇಕೆಂಬ ರೈತರ ಬಹುದಿನಗಳ ಬೇಡಿಕೆಯನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಈಡೇರಿಸಿದ್ದಾರೆ. ಹೊಸ ಕಚೇರಿಯನ್ನು ಆರಂಭಿಸಿ, ಸಿಬ್ಬಂದಿ ನಿಯೋಜನೆ ಮಾಡಿ ಆದೇಶ ಹೊರಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೃಷಿ ಇಲಾಖೆಯಲ್ಲಿನ ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಸಂಸ್ಥೆ (ಕೆಮಿಕ್) ಸಮಾಪನಗೊಳಿಸಿದಾಗ ಲಭ್ಯವಾದ ಜಂಟಿ ಕೃಷಿ ನಿರ್ದೇಶಕರ ಹುದ್ದೆಯನ್ನು ಪೂರಕ ಸಿಬ್ಬಂದಿಯೊಡನೆ ಜಂಟಿ ಕೃಷಿ ನಿರ್ದೇಶಕರು, ಬೆಂಗಳೂರು ಗ್ರಾಮಾಂತರ ಎಂದು ಮರುವಿನ್ಯಾಸಗೊಳಿಸಿ ಆದೇಶ ಹೊರಡಿಸಲಾಗಿದೆ.

ಹುದ್ದೆಗಳ ವಿವರ: ಬೆಂಗಳೂರು ಗ್ರಾಮಾಂತರ ಕೃಷಿ ಕಚೇರಿಗೆ ಜಂಟಿ ಕೃಷಿ ನಿರ್ದೇಶಕರು-1, ಸಹಾಯಕ ಕೃಷಿ ನಿರ್ದೇಶಕರು-2, ಕೃಷಿ ಅಧಿಕಾರಿ-3, ಸಹಾಯ ಆಡಳಿತಾಧಿಕಾರಿ-1, ಅಧೀಕ್ಷಕರು-1, ಪ್ರಥಮ ದರ್ಜೆ ಸಹಾಯಕರು-1, ದ್ವಿತೀಯ ದರ್ಜೆ ಸಹಾಯಕರು-2, ಬೆರಳಚ್ಚುಗಾರರು-1, ವಾಹನ ಚಾಲಕರು-2, ಗ್ರೂಪ್ ಡಿ-3 ಸೇರಿದಂತೆ 17 ಅಧಿಕಾರಿ ಸಿಬ್ಬಂದಿಗಳ ಹುದ್ದೆಗಳನ್ನು ಸೃಜಿಸಲಾಗಿದೆ. ಇದಲ್ಲದೇ 13 ಹುದ್ದೆಗಳನ್ನೊಳಗೊಂಡ ಬೆಂಗಳೂರು ಗ್ರಾಮಾಂತರ ಉಪ ಕೃಷಿ ನಿರ್ದೇಶಕರ ಕಚೇರಿ ಕೂಡಾ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಒಟ್ಟು 30 ಅಧಿಕಾರಿ ಸಿಬ್ಬಂದಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ರೈತರ ಸೇವೆಗೆ ಲಭ್ಯವಾಗಲಿದ್ದಾರೆ.

ಇದನ್ನೂ ಓದಿ: ಮಾ.22ರ ಕರ್ನಾಟಕ ಬಂದ್‌ಗೆ ಒಂದಾಗದ ಕರವೇ ಬಣ; ಪ್ರವೀಣ್ ಶೆಟ್ಟಿ ಬೆಂಬಲ, ನೋ ಎಂದ ನಾರಾಯಣಗೌಡ!

ಜಂಟಿ ಕೃಷಿ ನಿರ್ದೇಶಕ ಕಚೇರಿಗಳ ಕೇಂದ್ರ ಸ್ಥಾನ: ಜಂಟಿ ಕೃಷಿ ನಿರ್ದೇಶಕರು ಬೆಂಗಳೂರು ನಗರ ಜಿಲ್ಲೆ ಕಚೇರಿಯನ್ನು ಹಾಲಿ ಇರುವ ಬನಶಂಕರಿಯಲ್ಲಿಯೇ ತಾತ್ಕಾಲಿಕ ಮುಂದುವರೆಸಲಾಗಿದೆ. ಬೆಂಗಳೂರು ಜಂಟಿ ಕೃಷಿ ನಿರ್ದೇಶಕರು ಎಂಬ ಹುದ್ದೆಯನ್ನು, ಜಂಟಿ ಕೃಷಿ ನಿರ್ದೇಶಕರು ಬೆಂಗಳೂರು ಗ್ರಾಮಾಂತರ ಎಂದು ಪುನರ್ ನಾಮಕರಣ ಮಾಡಲಾಗಿದೆ. ಇವರ ಕಚೇರಿಯನ್ನು ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರ ಮಾಡಲು ನಿರ್ದೇಶನ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಇಲಾಖೆಯ ಎಲ್ಲಾ ಕಚೇರಿಗಳ ಉಸ್ತುವಾರಿ ಈ ಜಂಟಿ ಕೃಷಿ ನಿರ್ದೇಶಕರ ವ್ಯಾಪ್ತಿಗೆ ಒಳಪಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ

ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ದೊಡ್ಡಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಯಲಹಂಕ ಮತ್ತು ಆನೇಕಲ್ ತಾಲ್ಲೂಕುಗಳು ಸೇರಿ ಒಂದೇ ಜಂಟಿ ಕೃಷಿ ನಿರ್ದೇಶಕರ ಹುದ್ದೆ ಇತ್ತು. ಈ ಕಚೇರಿ ಅಧೀನದಲ್ಲಿ 11 ರೈತ ಸಂಪರ್ಕ ಕೇಂದ್ರಗಳು (ಬೆಂಗಳೂರು ಉತ್ತರ 4 ಹಾಗೂ ಆನೇಕಲ್-7) ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ ರಾಮಕೃಷ್ಣ ಕೃಷಿ ಪಾಠಶಾಲೆ, ಪೀಡೆನಾಶಕ ಶೇಷಾಂಶ ಪ್ರಯೋಗಾಲಯ, ಮಣ್ಣು ಪರೀಕ್ಷಾ ಪ್ರಯೋಗಾಲಯಗಳು ಸಹ ಕಾರ್ಯ ನಿರ್ವಹಿಸುತ್ತಿವೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಲ್ಲೂ ಈಗ ಹಕ್ಕಿಜ್ವರ ಭೀತಿ: 4000ಕ್ಕೂ ಹೆಚ್ಚು ಕೋಳಿಗಳ ಸಾವು

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಪ್ರತ್ಯೇಕ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಇರುವುದರಿಂದ, ಎರಡು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಸಭೆಗಳಲ್ಲಿ ಒಬ್ಬರೇ ಜಂಟಿ ಕೃಷಿ ನಿರ್ದೇಶಕರೇ ಭಾಗವಹಿಸಬೇಕಾಗಿತ್ತು. ಇದರಿಂದಾಗಿ, ಎರಡು ಜಿಲ್ಲೆಗಳ ಕೃಷಿ ಚಟುವಟಿಕೆಗಳನ್ನು ಸಕಾಲದಲ್ಲಿ ಕೈಗೊಂಡು ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಹೆಚ್ಚಿನ ಕಾರ್ಯ ಒತ್ತಡ ಉಂಟಾಗುತ್ತಿತ್ತು, ಇಲಾಖೆಯ ಸವಲತ್ತುಗಳನ್ನು ರೈತರಿಗೆ ತಲುಪಿಸುವಲ್ಲಿ ಕಷ್ಟಸಾಧ್ಯವಾಗುತ್ತಿತ್ತು. ಹೊಸ ಜಂಟಿ ಕೃಷಿ ನಿರ್ದೇಶಕರ ಹುದ್ದೆ ಸೃಜನೆಯಾದ ನಂತರ ಈ ಎಲ್ಲಾ ಸಮಸ್ಯೆಗಳು ಕೊನೆಯಾಗಿ ರೈತರಿಗೆ ಸಕಾಲದಲ್ಲಿ ಸೇವೆ ದೊರೆಯಲು ಅನುಕೂಲವಾಗಲಿದೆ.