ರಾಜ್ಯದ ಸಾರಿಗೆ ಬಸ್‌ಗಳು ಹಾಗೂ ವಾಹನಗಳ ಓಡಾಟಕ್ಕೆ ಕೊಲ್ಲಾಪುರದಲ್ಲಿ ಅಡ್ಡಿ ಮಾಡಲೆತ್ನಿಸಿದ್ದಾರೆ. ಶಿವಸೇನೆಯ ಈ ಪುಂಡಾಟದಿಂದಾಗಿ 2ನೇ ದಿನವಾದ ಭಾನುವಾರವೂ ಕರ್ನಾಟಕ - ಮಹಾರಾಷ್ಟ್ರಗಳ ಮಧ್ಯೆ ಬಸ್‌ಗಳ ಸಂಚಾರ ಬಂದ್‌ ಆಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಬೆಳಗಾವಿ (ಮಾ.15): ಕರ್ನಾಟಕ ಬಸ್‌ಗಳ ಮೇಲೆ ಮರಾಠಿ ಬರಹಗಳನ್ನು ಬರೆದು ಪುಂಡಾಟ ಮೆರೆದು ಎರಡೂ ರಾಜ್ಯಗಳ ನಡುವೆ ಅಶಾಂತಿ ಸೃಷ್ಟಿಸಲೆತ್ನಿಸಿದ್ದ ಶಿವಸೇನೆ ಪುಂಡರು ಮತ್ತೆ ಇದೇ ರೀತಿಯ ಕೃತ್ಯಕ್ಕೆ ಕೈಹಾಕಿದ್ದಾರೆ. ರಾಜ್ಯದ ಸಾರಿಗೆ ಬಸ್‌ಗಳು ಹಾಗೂ ವಾಹನಗಳ ಓಡಾಟಕ್ಕೆ ಕೊಲ್ಲಾಪುರದಲ್ಲಿ ಅಡ್ಡಿ ಮಾಡಲೆತ್ನಿಸಿದ್ದಾರೆ. ಶಿವಸೇನೆಯ ಈ ಪುಂಡಾಟದಿಂದಾಗಿ 2ನೇ ದಿನವಾದ ಭಾನುವಾರವೂ ಕರ್ನಾಟಕ - ಮಹಾರಾಷ್ಟ್ರಗಳ ಮಧ್ಯೆ ಬಸ್‌ಗಳ ಸಂಚಾರ ಬಂದ್‌ ಆಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

Add Asianetnews Kannada as a Preferred SourcegooglePreferred

ಬೆಳಗಾವಿ ಮಾರ್ಗವಾಗಿ ನಿತ್ಯ ಮಹಾರಾಷ್ಟ್ರಕ್ಕೆ 300ಕ್ಕೂ ಹೆಚ್ಚು ಬಸ್‌ಗಳು ತೆರಳುತ್ತಿದ್ದವು. ಇನ್ನು ಮಹಾರಾಷ್ಟ್ರದಿಂದ ಬೆಳಗಾವಿಗೆ 58 ಬಸ್‌ಗಳು ಸಂಚರಿಸುತ್ತಿದ್ದವು. ಈಗ ಎಲ್ಲ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಗಡಿ ಭಾಗದವರೆಗೆ ಮಾತ್ರ ಕರ್ನಾಟಕ ಸಾರಿಗೆ ಬಸ್‌ಗಳು ಹೋಗಿ ಬರುತ್ತಿವೆ.

ಶಿವಸೇನೆ ಪುಂಡಾಟ: ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಸ್‌ ಸಂಚಾರ ಸ್ಥಗಿತ ..

ಕಳೆದ ಕೆಲ ದಿನಗಳಿಂದ ಶಿವಸೇನೆಯು ಗಡಿಯಲ್ಲಿ ಕನ್ನಡಿಗರನ್ನು ಕೆಣಕುವ ಪ್ರಯತ್ನ ಮಾಡುತ್ತಲೇ ಬಂದಿದೆ. ಇದನ್ನು ಖಂಡಿಸಿ ನಾಲ್ಕು ದಿನಗಳ ಹಿಂದೆ ರಾಜ್ಯದಲ್ಲೂ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು. ಇದರ ಬೆನ್ನಲ್ಲೇ ಶಿವಸೇನೆಯ ಪುಂಡರು ಕೊಲ್ಲಾಪುರದ ಕಾಗಲ ಗ್ರಾಮದಲ್ಲಿ ಶನಿವಾರ ಕರ್ನಾಟಕದ ಬಸ್‌ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಬರೆಯಲಾದ ಪೋಸ್ಟರ್‌ ಅಂಟಿಸಿದ್ದರು. ಇದರಿಂದ ಎರಡೂ ರಾಜ್ಯಗಳ ಮಧ್ಯೆ ಶನಿವಾರ ಸಾರಿಗೆ ಬಸ್‌ಗಳ ಸಂಚಾರ ಬಂದ್‌ ಆಗಿತ್ತು. ಇದೀಗ ಕರ್ನಾಟಕದ ಸಾರಿಗೆ ಬಸ್‌ ಸಂಚಾರಕ್ಕೆ ತಡೆಯೊಡ್ಡಿದ್ದು, ವಾಹನಗಳ ಸಂಚಾರಕ್ಕೂ ಅಡ್ಡಿಪಡಿಸುತ್ತಿದೆ. ಈ ಮೂಲಕ ಎರಡೂ ರಾಜ್ಯಗಳ ಗಡಿಯಲ್ಲಿ ಉದ್ನಿಗ್ವ ಪರಿಸ್ಥಿತಿ ನಿರ್ಮಾಣವಾಗುವಂತೆ ನೋಡಿಕೊಳ್ಳುತ್ತಿದೆ.

ಕೊಲ್ಲಾಪುರದಲ್ಲಿ ಶಿವಸೇನೆಯ ಪುಂಡಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಸದ್ಯ ಚಿಕ್ಕೋಡಿ ಉಪವಿಭಾಗದ 10 ಬಸ್‌ಗಳನ್ನು ಮಹಾರಾಷ್ಟ್ರದ ಮೀರಜ್‌ ಮಾರ್ಗದ ಮೂಲಕ ಪ್ರಾಯೋಗಿಕವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಅಹಿತಕರ ಘಟನೆ ಸಂಭವಿಸಿದರೆ ಈ ಬಸ್‌ಗಳನ್ನೂ ಮಧ್ಯದಾರಿಯಲ್ಲೇ ಮರಳಿ ಕರೆಸಿಕೊಳ್ಳಲು ಸಾರಿಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಪ್ರತಿದಿನ ಚಿಕ್ಕೋಡಿ ವಿಭಾಗದಿಂದ ಮಹಾರಾಷ್ಟ್ರಕ್ಕೆ 150ಕ್ಕೂ ಹೆಚ್ಚು ಬಸ್‌ಗಳು ಮಹಾರಾಷ್ಟ್ರದ ಮೀರಜ್‌, ಸಾಂಗ್ಲಿ, ಸತಾರ, ಕರಾಡ, ಜತ್ತ, ಕೊಲ್ಲಾಪುರ, ಕಾಗಲ, ಇಂಚಲಕರಂಜಿ ಮತ್ತಿತರ ಕಡೆ ಸಂಚರಿಸುತ್ತಿದ್ದವು. ಎರಡು ದಿನಗಳಿಂದ ಗಡಿಯಲ್ಲಿ ಬಸ್‌ ಸಂಚಾರ ಇಲ್ಲದೆ, ಆ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ.