ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರ ಸಂಚಾರಕ್ಕೆ ಅನುಕೂಲವಾಗುವ ದೃಷ್ಠಿಯಿಂದ ಅಗತ್ಯ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಸಂಚಾರ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು. 

ಹೊಸಕೋಟೆ (ಸೆ.08): ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರ ಸಂಚಾರಕ್ಕೆ ಅನುಕೂಲವಾಗುವ ದೃಷ್ಠಿಯಿಂದ ಅಗತ್ಯ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಸಂಚಾರ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು. ಹೊಸಕೋಟೆ ನಗರದ ಹೊರವಲಯದ ಕೊಳತೂರು ಗೇಟ್ ಬಳಿ ಹಾದು ಹೋಗಿರುವ ಬೆಂಗಳೂರು-ಚೆನ್ನೈ ಎಕ್ಸ್‌ ಪ್ರೆಸ್‌ ಹೈವೇ ಸೇರಿದಂತೆ ತಿರುಪತಿ ಹೆದ್ದಾರಿ-75ನ್ನು ಪರಿಶೀಲಿಸಿ ಮಾತನಾಡಿದ ಅವರು, ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳ ಜೊತೆ ಅಪಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. 

Add Asianetnews Kannada as a Preferred SourcegooglePreferred

ಈ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ, ಬೆಂಗಳೂರು-ಪುಣೆ ಹೆದ್ದಾರಿಯನ್ನು ಕೆಲವು ದಿನಗಳ ಹಿಂದೆ ಪರಿಶೀಲನೆ ನಡೆಸಿದ್ದೇವೆ. ಅದೇ ಸರದಿಯಲ್ಲಿ ಬಹು ನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ ಪ್ರೆಸ್‌ ಹೈವೇ ಅನ್ನು ಸಹ ವೀಕ್ಷಣೆ ಮಾಡುತ್ತಿದ್ದೇನೆ ಎಂದು ಹೇಳಿದರು. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ನಿರ್ಮಾಣದ ವೇಳೆ ಅಪಘಾತ ಪ್ರದೇಶ, ಎಂಟ್ರಿ-ಎಕ್ಸಿಟ್ ಬಳಿ ಸಮರ್ಪಕ ಸೂಚನಾ ಫಲಕ, ಹೆದ್ದಾರಿ ಗಸ್ತು ವಾಹನ, ತುರ್ತು ವಾಹನಗಳ ವ್ಯವಸ್ಥೆಯನ್ನು ಮಾಡುವುದು. 

ಬಿಜೆಪಿಯವರು ನಾಥೂರಾಮ್ ಗೋಡ್ಸೆ ವಂಶಸ್ಥರು: ಸಿಎಂ ಸಿದ್ದರಾಮಯ್ಯ

ಹೆದ್ದಾರಿಗೆ ಸಮರ್ಪಕವಾಗಿ ಫೆನ್ಸ್ ಅಳವಡಿಕೆ, ಅಗತ್ಯವಿರುವ ಕಡೆ ಸಿಸಿಟಿವಿ ಅಳವಡಿಕೆ, ಸುರಕ್ಷತಾ ಜಾಗೃತಿಗೆ ಎಲ್‌ಇಡಿ ವಾಲ್ ಅಳವಡಿಕೆ ಎಲ್ಲಾ ರೀತಿಯ ಕಾರ್ಯಗಳು ಸಮರ್ಪಕವಾಗಿ ಆಗಬೇಕು. ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದೇ ಹೆದ್ದಾರಿ ಇಲಾಖೆ ಕೆಲಸವಾಗಿದೆ. ಇವೆಲ್ಲವಕ್ಕೂ ಒತ್ತು ನೀಡಿ ಯಾವುದೇ ಲೋಪ ಬಾರದಂತೆ ಕೆಲಸ ಮಾಡಿದರೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದು ಎಂದು ಹೇಳಿದರು.

ಚಿನ್ನದ ರಸ್ತೆ ಮಾಡ್ತಿರೇನ್ರಿ: ಬೆಂಗಳೂರು-ಚೆನ್ನೈ ಎಕ್ಸ್‌ ಪ್ರೆಸ್‌ ಹೈವೇ ನೀಲನಕ್ಷೆಯನ್ನು ವೀಕ್ಷಣೆ ಮಾಡಿದ ಎಡಿಜಿಪಿ ಅಲೋಕ್ ಕುಮಾರ್, ಹೆದ್ದಾರಿ ಯೋಜನೆ ನಿರ್ದೇಶಕಿ ಅರ್ಚನಾ ಅವರ ಬಳಿ ರಸ್ತೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ವೇಳೆ ಹೈವೇ ಒಟ್ಟು ವೆಚ್ಚದ ಮಾಹಿತಿ ಪಡೆದ ಅವರು 3800 ಕೋಟಿ ಎಂದಾಕ್ಷಣ ಏನ್ ಚಿನ್ನದ ರಸ್ತೆ ಮಾಡ್ತೀದ್ದೀರೆನ್ರಿ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ-ಜೆಡಿಎಸ್ ಒಟ್ಟಾದರೂ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಇದೇ ವೇಳೆ ಬೆಂಗಳೂರು-ತಿರುಪತಿ ರಾಷ್ಟ್ರೀಯ ಹೆದ್ದಾರಿ -75ರ ನಗರದ ಕೋರ್ಟ್ ವೃತ್ತದ ಬಳಿ ನಿತ್ಯ ಉಂಟಾಗುವ ವಾಹನ ದಟ್ಟಣೆ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದರು. ಇಲ್ಲಿನ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಟ್ರಾಫಿಕ್ ಸಿಬ್ಬಂದಿಗೆ ಸೂಚಿಸಿದರು. ನಿರ್ಮಾಣ ಹಂತದ ಸ್ಕೈವಾಕ್ ಸಹ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಎಸ್ಪಿ ಪುರುಷೋತ್ತಮ್, ಕೋಲಾರ ಎಸ್ಪಿ ಸತ್ಯನಾರಾಯಣ್, ಕೆಜಿಎಫ್ ಎಸ್ಪಿ ಶಾಂತಕುಮಾರ್, ಹೊಸಕೋಟೆ ಡಿವೈಎಸ್ಪಿ ಶಂಕರ್ ಪ್ರಕಾಶ್ ಪಾಟೀಲ್, ಸಂಚಾರ ಸಿಪಿಐ ರಘು ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.