ಲೋಕಸಭೆ ಚುನಾವಣೆ 2024: ಮತದಾನ ಜಾಗೃತಿಗೆ ನಟ ರಮೇಶ್, ಅನೂಪ್ ಸೇರಿ 4 ರಾಯಭಾರಿಗಳು
ಮತದಾರರ ಹುಮ್ಮಸ್ಸು ತುಂಬುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ 4 ಪ್ರಮುಖ ವ್ಯಕ್ತಿಗಳು ರಾಯಭಾರಿಗಳಾಗಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಮತದಾನ ಜಾಗೃತಿ ಮೂಡಿಸುವ ಕಾರ್ಯ ರಾಯಭಾರಿಗಳು ಮಾಡಲಿದ್ದಾರೆ ಎಂದ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಗಿರಿನಾಥ್
![Actor Ramesh Aravind Anoop are 4 Ambassadors for Voting Awareness in Bengaluru grg Actor Ramesh Aravind Anoop are 4 Ambassadors for Voting Awareness in Bengaluru grg](https://static-ai.asianetnews.com/images/01htgyprby3f09etktqcxxk0v2/gkjkxdlxmaamfhl_363x203xt.jpg)
ಬೆಂಗಳೂರು(ಏ.03): ಬೆಂಗಳೂರಿನಲ್ಲಿ ಮತದಾನ ಹೆಚ್ಚಿಸಲು ಹಲವಾರು ಪ್ರಯತ್ನ ಮಾಡಲಾಗುತ್ತಿದ್ದು, ಲೋಕಸಭಾ ಚುನಾವಣೆಗೆ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಹಾಗೂ ಚಿತ್ರನಟ ರಮೇಶ್ ಅರವಿಂದ್ ಸೇರಿ ನಾಲ್ವರು ಗಣ್ಯರನ್ನು 'ನಮ್ಮ ಬೆಂಗಳೂರು ರಾಯಭಾರಿ' (ಐಕಾನ್ಸ್)ಗಳನ್ನಾಗಿ ನಿಯೋಜಿಸಲಾಗಿದೆ.
ನಗರದ ಪುರಭವನದಲ್ಲಿ ಚುನಾವಣೆ ಆಯೋಗ -ಬಿಬಿಎಂಪಿಯು 'ನಮ್ಮ ಬೆಂಗಳೂರು ಐಕಾನ್' ನಿಯೋಜಿಸುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಗಿರಿನಾಥ್ ಮಾಹಿತಿ ನೀಡಿದರು.
ಅನಂತರ ಮಾತನಾಡಿದ ಅವರು, ಮತದಾರರ ಹುಮ್ಮಸ್ಸು ತುಂಬುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ 4 ಪ್ರಮುಖ ವ್ಯಕ್ತಿಗಳು ರಾಯಭಾರಿಗಳಾಗಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಮತದಾನ ಜಾಗೃತಿ ಮೂಡಿಸುವ ಕಾರ್ಯ ರಾಯಭಾರಿಗಳು ಮಾಡಲಿದ್ದಾರೆ ಎಂದರು.
ಕರ್ನಾಟಕಕ್ಕೆ ಪ್ರಧಾನಿ ಮೋದಿ, ದೇವೇಗೌಡರಿಂದ ದೊಡ್ಡ ಕೊಡುಗೆ: ಡಾ. ಮಂಜುನಾಥ್
ಮೊದಲ ಬಾರಿ ಚುನಾವಣಾವಣೆಯಲ್ಲಿ ಮತ ಚಲಾಯಿ ಸುತ್ತಿರುವವರಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬಂದು ಎಲ್ಲರಿಗೂ ಮತದಾನ ಮಾಡಲು ಪ್ರೇರೇಪಿಸಿ ಮತದಾನ ಮಾಡಬೇಕೆಂದರಲ್ಲದೆ, ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ. ನಿಮಗೆ ಮತಚಲಾಯಿಸಲು ಇಷ್ಟವಿಲ್ಲದಿದ್ದರೆ ನೋಟ ಮಾಡಲು ಕೂಡಾ ಅವಕಾಶವಿದ್ದು, ಎಲ್ಲರೂ ಮತ ಚಲಾಯಿಸಲು ಅವರು ಮನವಿಮಾಡಿದರು. ಚುನಾವಣಾ ರಾಯಭಾರಿ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಮಾತನಾಡಿ, ತಪ್ಪದೆ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ, ನಾವು ಮತದಾನ ಮಾಡದೇ ಇದ್ದಲ್ಲಿ ನಾವು ಪ್ರಶ್ನೆ ಮಾಡಲು ಅರ್ಹರಿರುವುದಿಲ್ಲ. ಆದ್ದರಿಂದ ನಾವೆಲ್ಲರೂ ತಪ್ಪದೆ ಮತದಾನ ಮಾಡೋಣ ಎಂದರು. ರಾಯಭಾರಿಯಾಗಿ ನಿಯೋಜನೆಗೊಂಡ ಚಿತ್ರನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಮಾತ ನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜ್, ವಿಶೇಷ ಆಯುಕ್ತ ವಿಕಾಸ್ ಕಿಶೋರ್, ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ವಿದ್ಯಾರ್ಥಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.
ನಮ್ಮ ಬೆಂಗಳೂರು ರಾಯಭಾರಿಗಳು
• ರಮೇಶ್ ಅರವಿಂದ್ ನಟ ಮತ್ತು ನಿರ್ದೇಶಕ
• ನೀತು ವನಜಾಕ್ಷಿನಟಿ ಹಾಗೂ ರೂಪದರ್ಶಿ
• ಅನುಪ್ ಶ್ರೀಧರ್ ಬ್ಯಾಡ್ಮಿಂಟನ್ ಆಟಗಾರ
• ಅರ್ಚನಾ ಜಿ.ಕಾಮತ್ ಟೇಬಲ್ ಟೆನ್ನಿಸ್ ಆಟಗಾರ್ತಿ