ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕರ್ತವ್ಯ ನಿರತನಾಗಿದ್ದಾಗಲೇ ಹಿರಿಯ ಪೊಲೀಸ್‌ ಅಧಿಕಾರಿಯಿಂದ ಹಲ್ಲೆ 

ಕಲಬುರಗಿ(ಸೆ.08): ಕಲಬುರಗಿಯಲ್ಲಿ ಗಣೇಶನ ವಿಸರ್ಜನೆ ಕಾಲದಲ್ಲಿನ ಅವಾಂತರಗಳು ಹಾಗೇ ಮುಂದುವರಿದಿವೆ. ಪಾಲಿಕೆ ಸಮನ್ವಯ ಕೊರತೆಯಿಂದ ಗಣೇಶನ ಭಕ್ತರು ಕೋಪಗೊಂಡ ಘಟನೆ ಮರೆಯುವ ಮುನ್ನವೇ ಬಂದೋಬಸ್ತ್‌ನಲ್ಲಿದ್ದ ಪೇದೆಗೆ ಎಸಿಪಿಯೊಬ್ಬರು ಕಪಾಳಮೋಕ್ಷ ಮಾಡುವ ಮೂಲಕ ಈ ಪ್ರಸಂಗ ಭಾರಿ ಸುದ್ದಿ ಮಾಡಿದೆ. ಎಸಿಪಿ ಗಿರೀಶ ಎಂಬುವವರು ಸಂಚಾರ ಟಾಣೆ ಪೇದೆ ಸಿದ್ದಪ್ಪ ಪಾಟೀಲ್‌ ಎಂಬಾತನಿಗೆ ಕೋಪದಲ್ಲಿ ಕಪಾಳಮೋಕ್ಷ ಮಾಡಿದ್ದಾರೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕರ್ತವ್ಯ ನಿರತನಾಗಿದ್ದಾಗಲೇ ಹಿರಿಯ ಪೊಲೀಸ್‌ ಅಧಿಕಾರಿ ಹಲ್ಲೆ ಮಾಡಿರೋದು ಪೇದೆ ಸಿದ್ದಪ್ಪನ ಕಿವಿ ಮತ್ತು ಕತ್ತಿಗೆಗೆ ಗಾಯ ಉಂಟು ಮಾಡಿದೆ.

ಕರ್ತವ್ಯ ನಿರತನಾಗಿದ್ದಾಗ ಹಲ್ಲೆ, ನಿಂದನೆ:

ನಗರದಲ್ಲಿ 5 ನೇ ದಿನದ ಗಣೇಶ ಮೇರವಣಿಗೆ ಹಾಗೂ ವಿಸರ್ಜನೆ ನಡೆದಿತ್ತು. ಗಣೇಶ ಮೂರ್ತಿಗಳನ್ನ ವಿಸರ್ಜನೆ ಮಾಡಲು ನಗರದ ಶರಣಬಸವೇಶ್ವರ ಕೆರೆ ಬಳಿ ಮಾಡಲಾಗಿದ್ದ ವಿಸರ್ಜನಾ ಬಾವಿ ವ್ಯವಸ್ಥೆ ಬಳಿ ಕೆಲವರು ಗುಂಪಾಗಿ ದಾಂಧಲೆ ಮಾಡುತ್ತಿರವುದನ್ನು ಕಂಡು ಸಂಚಾರಿ ಠಾಣೆ ಪೇದೆ, ಸಿದ್ದಪ್ಪ ಬಿರಾದರ್‌ ತಕ್ಷಣ ಅಲ್ಲಿಗೆ ಹೋಗಿ ಹುಡುಗರನ್ನ ಚದರಿಸುಲು ಮುಂದಾಗಿದ್ದಾರೆ. ಅದೇ ಹೊತ್ತಲ್ಲಿ ಸ್ಥಳಕ್ಕೆ ಬಂದ ನಗರ ಪೊಲೀಸ್‌ ಎಸಿಪಿ ಗಿರೀಶ್‌ ಇವರು ಪೇದೆ ಸಿದ್ದಪ್ಪ ಬಿರಾದರ್‌ ಮೇಲೆ ಹಲ್ಲೆ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ: ರೇಣುಕೆ

ಇದರಿಂದ ಪೇದೆ ಸಿದ್ದಪ್ಪ ಕಿವಿಗೆ ಬಲವಾಗಿ ಪೆಟ್ಟಾಗಿದ್ದು, ರಕ್ತಸ್ರಾವವಾಗಿದೆ. ಅಲ್ಲದೇ ಕುತ್ತಿಗೆ ಭಾಗಕ್ಕೂ ಪೆಟ್ಟಾಗಿದ್ದರಿಂದ ಸಿದ್ದಪ್ಪ ಜಿಮ್ಸ್‌ ಆಸ್ಪತ್ರೆಯಲ್ಲಿ ಸಿದ್ದಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಪೇದೆ ಸಿದ್ದಪ್ಪ, ತನ್ನ ಪಾಡಿಗೆ ತಾನು ಡ್ಯೂಟಿ ಮಾಡ್ತಿರುವಾಗ ಎಸಿಪಿ ಗಿರೀಶ್‌ ಅವರು ನನ್ನ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿದ್ದಾರೆ.

ವಿಡಿಯೋ ವೈರಲ್‌:

ಇನ್ನು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಸಿಪಿ ದರ್ಪಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್‌ ಆಯುಕ್ತ ಡಾ.ವೈ.ಎಸ್‌.ರವಿಕುಮಾರ್‌, ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಗಲಾಟೆಯಾಗುತ್ತಿತ್ತು. ಈ ವೇಳೆ ಸಂಚಾರಿ ಠಾಣೆ ಪೇದೆ ಸಿದ್ದಪ್ಪ ಬಿರಾದಾರ ಲಘು ಲಾಠಿ ಚಾರ್ಜ್‌ ಮಾಡುತ್ತಿದ್ದರು.

ಆಗ ಸ್ಥಳಕ್ಕೆ ಎಸಿಪಿ ಗಿರೀಶ್‌ ಆಗಮಿಸಿ ಅನುಮತಿ ಇಲ್ಲದೆ ಲಾಠಿ ಚಾರ್ಜ್‌ ಮಾಡಬಾರದು ಅಂತಾ ಪೇದೆಗೆ ತಿಳಿ ಹೇಳುವ ಸಂದರ್ಭದಲ್ಲಿ ಎಸಿಪಿ ಗಿರೀಶ್‌ ಮೇಲೆ ಹಲ್ಲೆ ಮಾಡಿದಂತಹ ವಿಡಿಯೋ ರೆಕಾರ್ಡ್‌ ಆಗಿದೆ. ಈ ಬಗ್ಗೆ ಪೇದೆ ದೂರು ನೀಡಿದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಆಯುಕ್ತ ರವಿಕುಮಾರ್‌ ಹೇಳಿದ್ದಾರೆ. ಈ ಕುರಿತು ಪೇದೆ ಸಿದ್ದಪ್ಪ ನಗರದ ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿದ್ದಾರೆ.