ನೂರಾರು ಗ್ರಾಹಕರ ಕೈಸೇರಬೇಕಿದ್ದ ಅಂಚೆ ಪತ್ರಗಳು ಕಳೆದ 45 ದಿನಗಳಿಂದ ಮಲ್ಲೇಕಾವು ಅಂಚೆ ಕಚೇರಿಯಲ್ಲಿ ಧೂಳು ಹಿಡಿಯುತ್ತಿವೆ. ಪ್ರತಿನಿತ್ಯ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದ್ದ ಅಂಚೆ ವಿತರಕ ಸಾರ್ವಜನಿಕರ ಅಂಚೆ ನೀಡದೇ ಕಾಣೆಯಾಗಿದ್ದಾನೆ.

ಹೊಳವನಹಳ್ಳಿ (ಜ.17) : ನೂರಾರು ಗ್ರಾಹಕರ ಕೈಸೇರಬೇಕಿದ್ದ ಅಂಚೆ ಪತ್ರಗಳು ಕಳೆದ 45 ದಿನಗಳಿಂದ ಮಲ್ಲೇಕಾವು ಅಂಚೆ ಕಚೇರಿಯಲ್ಲಿ ಧೂಳು ಹಿಡಿಯುತ್ತಿವೆ. ಪ್ರತಿನಿತ್ಯ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದ್ದ ಅಂಚೆ ವಿತರಕ ಸಾರ್ವಜನಿಕರ ಅಂಚೆ ನೀಡದೇ ಕಾಣೆಯಾಗಿದ್ದಾನೆ. ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟಗ್ರಾಪಂ ವ್ಯಾಪ್ತಿಯ ಮಲ್ಲೇಕಾವು ಗ್ರಾಮದ ಅಂಚೆ ಕಚೇರಿಯ ಅಂಚೆ ಪಾಲಕ ನಾಗೇಂದ್ರ ಕಳೆದ 45 ದಿನಗಳಿಂದ ಕತ್ಯವ್ಯಕ್ಕೆ ಗೈರು ಹಾಜರಿಯಾಗಿದ್ದಾನೆ.

ಆಧಾರ್‌ ಕಾರ್ಡ್‌, ಕೋರ್ಚ್‌ ನೋಟಿಸ್‌, ಎಟಿಎಂ ಕಾರ್ಡ್‌, ರೇಷನ್‌ಕಾರ್ಡ್‌, ಎಲ್‌ಐಸಿ ಬಾಂಡ್‌, ರಿಜಿಸ್ಟರ್‌ ಪೋಸ್ಟ್‌, ಸ್ಪೀಡ್‌ ಪೋಸ್ಟ್‌, ಜಾಬ್‌ ನೋಟಿಸ್‌, ಕೊರಿಯರ್‌, ಪಾರ್ಸಲ್‌ಗಳು ಗ್ರಾಹಕರ ಕೈ ಸೇರದೇ ಅಂಚೆ ಕಚೇರಿಯಲ್ಲಿ ಧೂಳು ಹಿಡಿಯುತ್ತಿದ್ದು, ಕರ್ತವ್ಯಲೋಪ ಪ್ರಶ್ನಿಸುವ ಅಂಚೆ ನಿರೀಕ್ಷಕರು ನಿರ್ಲಕ್ಷ್ಯವಹಿಸಿದ್ದಾರೆ.

ಚರ್ಚೆಗೆ ಗ್ರಾಸವಾಯ್ತು ಸಂಸದ ಜಿ.ಎಸ್‌. ಬಸವರಾಜು ರಾಜಕೀಯ ನಿವೃತ್ತಿ!

ಅಂಚೆ ಪಾಲಕ ಕಚೇರಿಗೆ ಬರೋದೆ ಇಲ್ವಂತೆ:

ಮಲ್ಲೇಕಾವು ಅಂಚೆ ಇಲಾಖೆಯ ಅಂಚೆ ಪಾಲಕನ ತಂದೆಯ ಕೆಲಸವನ್ನು ಮಗ ನಾಗೇಂದ್ರನಿಗೆ ನೀಡಲಾಗಿದೆ. ನಾಗೇಂದ್ರ ತನ್ನ ಕೆಲಸವನ್ನೇ ಮರೆತು ಸಂಬಳ ಪಡೆಯುವುದಕ್ಕೇ ಮಾತ್ರ ಸೀಮಿತ ಆಗಿದ್ದಾರೆ. ಅಂಚೆ ಇಲಾಖೆಯ ದಾಖಲೆಗಳು ತನ್ನ ಮನೆಯಲ್ಲಿಯೇ ಶೇಖರಣೆ ಮಾಡಿ ಕೊಂಡಿರುವ ಆರೋಪವು ಸಹ ಇದೆ. 30 ದಿನದ ಹಿಂದೆಯೇ ತನಿಖೆ ನಡೆಸಿರುವ ಅಂಚೆ ನಿರೀಕ್ಷಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಪರಿಣಾಮ ಸಮಸ್ಯೆಯು ದ್ವಿಗುಣವಾಗಿದೆ. ಮಲ್ಲೇಕಾವು ಅಂಚೆ ಉಪಕಚೇರಿಯು ಚನ್ನರಾಯನದುರ್ಗ, ಬೇಂಡೋಣಿ, ಮಲ್ಲೇಕಾವು, ಗೌರಿಗಲ್ಲು, ದೊಗ್ಗನಹಳ್ಳಿ, ಹಂಚಿಮಾರನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸೇವೆ ನೀಡಬೇಕು. ಆದರೆ ಗ್ರಾಹಕನಿಗೆ ಇಲ್ಲಿ ಸೇವೆ ದೊರೆಯದಂತಾಗಿದೆ.

ಅಂಚೆ ನಿರೀಕ್ಷಕನ ನಿರ್ಲಕ್ಷ್ಯ:

ಕೊರಟಗೆರೆಯ 16 ಅಂಚೆ ಉಪಕಚೇರಿಗಳಿಗೆ ಹರ್ಷ ಎಂಬುವರೇ ಅಂಚೆ ನಿರೀಕ್ಷಕ. ತುಮಕೂರು ನಗರಕ್ಕೆ ಮಾತ್ರ ಇವರು ಸೀಮಿತವಾಗಿದ್ದು, ಕೊರಟಗೆರೆಗೆ ಸದಾ ಗೈರಾಗಿರುತ್ತಾರೆ. ಇವರು ಕೊರಟಗೆರೆಗೆ ಬರೋದು ಯಾರಿಗೂ ಗೊತ್ತಾಗಲ್ಲ-ಮತ್ತೇ ಹೋಗುವ ದಿನಚರಿಯೇ ತಿಳಿಯೋಲ್ಲ. ಮಲ್ಲೇಕಾವು ಕಚೇರಿಗೆ 30 ದಿನದ ಹಿಂದೆಯಷ್ಟೆಭೇಟಿ ನೀಡಿ ಹತ್ತಾರು ಸಮಸ್ಯೆಯನ್ನು ಕಣ್ಣಾರೇಕಂಡ್ರು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದು, ಅಂಚೆ ಇಲಾಖೆಯು ಇವರ ಮೇಲೆ ಮೊದಲು ಶಿಸ್ತು ಕ್ರಮ ಜರುಗಿಸಬೇಕಿದೆ ಎಂಬುದು ಗ್ರಾಹಕರ ಆಗ್ರಹವಾಗಿದೆ.

ಅಂಚೆ ಇಲಾಖೆಯಲ್ಲಿ ಮೇಲ್ವಿಚಾರಕ ತನಿಖೆ:

ಕೊರಟಗೆರೆ ಅಂಚೆ ನಿರೀಕ್ಷಕ ಹರ್ಷ ಗೈರು ಹಾಜರಿಯಲ್ಲಿ ನೆಪಮಾತ್ರಕ್ಕೆ ಶಿವಕುಮಾರ್‌ ಮತ್ತು ಮಂಜುನಾಥ ತಂಡದಿಂದ ತನಿಖೆ ನಡೆದಿದೆ. ತನಿಖೆಯ ವೇಳೆ ತಿಂಗಳಿಂದ ಧೂಳು ಹಿಡಿಯುತ್ತಿದ್ದ ಗ್ರಾಹಕರ ನೂರಾರು ದಾಖಲೆಗಳು ದೊರೆತಿವೆ. ತಿಂಗಳ ಹಿಂದೆಯೇ ತನಿಖೆ ನಡೆಸಿದ ಅಂಚೆ ನಿರೀಕ್ಷಕರ ತನಿಖೆಯು ಎಲ್ಲಿಗೇ ಬಂತು ಎಂಬುದೇ ಯಕ್ಷಪ್ರಶ್ನೆಯಾಗಿ ಜನರ ಮುಂದೆ ಉಳಿದಿದೆ.

ಮನೆ ಬಳಕೆ ಗ್ಯಾಸ್ ಸಿಲಿಂಡರ್‌ಗೆ ದೇಶದಲ್ಲಿ ತುಮಕೂರಲ್ಲೇ ಅತೀ ಕಡಿಮೆ ದರ

ಅಂಚೆ ಇಲಾಖೆ ಮೂಲಕ ಜನರಿಗೆ ತಲುಪುವ ಯಾವುದೇ ದಾಖಲೆ ನಿಗದಿತ ಸಮಯಕ್ಕೆ ಸಿಗುತ್ತಿಲ್ಲ. ಅಂಚೆ ಪಾಲಕ ಕಳೆದ 45 ದಿನಗಳಿಂದ ಗೈರು ಹಾಜರಾಗಿ ಸಮಸ್ಯೆ ಸೃಷ್ಟಿಯಾಗಿದೆ. ನೂರಾರು ಜನರ ದಾಖಲೆಗಳು ಅಂಚೆ ಇಲಾಖೆಯಲ್ಲಿ ಕೊಳೆಯುತ್ತಿವೆ. ಕೊರಟಗೆರೆಯ ಅಂಚೆ ನಿರೀಕ್ಷಕರಿಗೆ ಸ್ಥಳೀಯರು ದೂರು ನೀಡಿದ್ರು ಪ್ರಯೋಜನ ಆಗಿಲ್ಲ.

ರಾಘವೇಂದ್ರ ಸ್ಥಳೀಯ ನಿವಾಸಿ, ಸಿ.ಎನ್‌.ದುರ್ಗ

ಮಲ್ಲೇಕಾವು ಅಂಚೆ ಪಾಲಕ ಗೈರು ಹಾಜರಿಯ ಬಗ್ಗೆ ಈಗಾಗಲೇ ತನಿಖೆ ನಡೆದಿದೆ. ಅಂಚೆ ಪಾಲಕ ನಾಗೇಂದ್ರಗೆ ಕಾರಣ ಕೇಳಿ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ತನಿಖೆಯಲ್ಲಿ ಲೋಪದೋಷ ಕಂಡುಬಂದರೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ತುರ್ತುಸೇವೆಗೆ ಸಮಸ್ಯೆ ಆಗದಂತೆ ಕ್ರಮಕ್ಕೆ ಈಗಾಗಲೇ ಅಂಚೆ ನಿರೀಕ್ಷಕರಿಗೆ ಸೂಚಿಸಿದ್ದೇನೆ.

ಗೋವಿಂದರಾಜು ಅಧೀಕ್ಷಕ, ಅಂಚೆ ಇಲಾಖೆ, ತುಮಕೂರು