* ಗೊಬ್ಬರಕ್ಕಾಗಿ ಮುಗಿಬಿದ್ದಿದ್ದ ರೈತರು* ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಯೂರಿಯಾ ಗೊಬ್ಬರದ ಬೇಡಿಕೆ* ಯೂರಿಯಾ ಖರೀದಿಗೆ ಉಂಟಾಗಿರುವ ಗಲಾಟೆ ತಡೆಗಟ್ಟಲು ಈ ಕ್ರಮ

ಹೂವಿನಹಡಗಲಿ(ಜು.17): ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗೊಬ್ಬರ ಖರೀದಿಗೆ ಪಹಣಿ ಮತ್ತು ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಲಾಗಿದೆ.

ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ 45 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಮಳೆಯಾಗುತ್ತಿರುವ ಕಾರಣ ತೇವಾಂಶ ಹೆಚ್ಚಾಗುತ್ತಿದ್ದು ಮೆಕ್ಕೆಜೋಳಕ್ಕೆ ಇದೀಗ ಯೂರಿಯಾ ಹಾಕಲೇಬೇಕಾಗಿದೆ. ಆದ್ದರಿಂದ ಬೇಡಿಕೆ ಹೆಚ್ಚಾಗಿದ್ದು, ಟಿಎಪಿಸಿಎಂಎಸ್‌ ಹಾಗೂ ಸೊಸೈಟಿಗಳ ಮುಂದೆ ಗೊಬ್ಬರಕ್ಕಾಗಿ ನೂಕುನುಗ್ಗಲು ಉಂಟಾಗಿತ್ತು. 

ಹೂವಿನಹಡಗಲಿ: ಯೂರಿಯಾ ಗೊಬ್ಬರಕ್ಕೆ ಮತ್ತೆ ನೂಕುನುಗ್ಗಲು

ಈ ಹಿನ್ನೆಲೆಯಲ್ಲಿ ಯೂರಿಯಾ ಖರೀದಿಗೆ ಉಂಟಾಗಿರುವ ಗಲಾಟೆಯನ್ನು ತಡೆಗಟ್ಟಲು ಬಳ್ಳಾರಿ ಜಂಟಿ ಕೃಷಿ ನಿರ್ದೇಶಕರ ಸೂಚನೆ ಮೇರೆಗೆ ಸೊಸೈಟಿಗಳಲ್ಲಿ ರೈತರು ತಮ್ಮ ಪಹಣಿ ಹಾಗೂ ಆಧಾರ್‌ ಕಾರ್ಡ್‌ ನೀಡಬೇಕೆಂದು ಕಡ್ಡಾಯ ಮಾಡಲಾಗಿದೆ. ಯೂರಿಯಾ ಗೊಬ್ಬರ ಪಡೆಯಲು ಪಹಣಿ, ಆಧಾರ್‌ ಕಾರ್ಡ್‌ ಕಡ್ಡಾಯ ಎಂಬ ಮಾಹಿತಿ ತಿಳಿಯುತ್ತಿದಂತೆಯೆ, ಗೊಬ್ಬರ ಖರೀದಿಗೆ ರೈತರ ಸರದಿ ಸಾಲು ಕಡಿಮೆಯಾಗಿತ್ತು.