Asianet Suvarna News Asianet Suvarna News

Tumakuru: ಶೇ. 89ರಷ್ಟು ಸಾಕ್ಷರರಿಂದಲೇ ಆತ್ಮಹತ್ಯೆಗೆ ಪ್ರಯತ್ನ: ನ್ಯಾಯಾಧೀಶೆ ನೂರುನ್ನಿಸ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶೇ.89ರಷ್ಟು ಮಂದಿ ಸಾಕ್ಷರರೇ ಆತ್ಮಹತ್ಯೆಗೆ ಪ್ರಯತ್ನ ಪಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ತಿಳಿಸಿದರು.

89 percent of literate people attempt suicide says senior civil Judge noorunnisa gvd
Author
First Published Sep 15, 2022, 9:57 AM IST

ತುಮಕೂರು (ಸೆ.15): ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶೇ.89ರಷ್ಟು ಮಂದಿ ಸಾಕ್ಷರರೇ ಆತ್ಮಹತ್ಯೆಗೆ ಪ್ರಯತ್ನ ಪಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಚೇರಿಯ ಮಾಸಿಕ ಆರೋಗ್ಯ ವಿಭಾಗ, ಸ್ನೇಹ ಮನೋವಿಕಾಸ ಕೇಂದ್ರ, ಅಚರ್ಡ್‌ ಮದ್ಯವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತುಮಕೂರಿನಲ್ಲಿ ಹಿಂದಿ ದಿವಸ್‌ಗೆ ಜೆಡಿಎಸ್‌ ತೀವ್ರ ವಿರೋಧ: ಪ್ರತಿಭಟನೆ

ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಡಾ. ಲೋಕೇಶ್‌ಬಾಬು ಮಾತನಾಡಿ, ಮನುಷ್ಯನಾಗಿ ಹುಟ್ಟಿದ ಮೇಲೆ ಒಂದು ಬಾರಿಯಾದರೂ ಆತ್ಮಹತ್ಯೆ ವಿಚಾರ ಬಂದು ಹೋಗುತ್ತದೆ. ಅತಿಯಾದ ನಿರೀಕ್ಷೆಗಳು ಆತ್ಮಹತ್ಯೆಗೆ ಪ್ರಮುಖ ಕಾರಣ. ಗಂಡ-ಹೆಂಡತಿ, ಪೋಷಕರು-ಮಕ್ಕಳು, ಪರಸ್ಪರ ನೋವನ್ನು ಹಂಚಿಕೊಳ್ಳಬೇಕು. ಕುಟುಂಬದಲ್ಲಿ ಅನ್ಯೋನ್ಯತೆ ಇದ್ದಲ್ಲಿ ಆತ್ಮಹತ್ಯೆ ಆಲೋಚನೆ ಬಾರದಂತೆ ತಡೆಯಬಹುದು. ಕೆಲವು ಪ್ರಕರಣಗಳಲ್ಲಿ ಮಾನಸಿಕ, ಕೌಟುಂಬಿಕ, ಆರ್ಥಿಕ ಕಾರಣಗಳಿಲ್ಲದಿದ್ದರೂ ಎಚ್‌ಐವಿ, ಕ್ಯಾನ್ಸರ್‌ಗಳಂತಹ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು ಆತ್ಮಹತ್ಯೆಗೆ ಯತ್ನಿಸುವ ಸಾಧ್ಯತೆಯಿರುತ್ತದೆ. ಇಂತಹವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಅಚರ್ಡ್‌ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಡಾ. ಎಚ್‌.ಜಿ. ಸದಾಶಿವಯ್ಯ ಮಾತನಾಡಿ, ಆತ್ಮಹತ್ಯೆಯು ಸಮಾಜಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮಾದಕ/ಮದ್ಯ ವ್ಯಸನಿಗಳು ಹೆಚ್ಚಾಗಿ ಆತ್ಮಹತ್ಯೆಗೊಳಗಾಗುತ್ತಾರೆ. ನೆಮ್ಮದಿ ಕೊರತೆ, ಜೀವನದಲ್ಲಿ ಜಿಗುಪ್ಸೆ, ಒಂಟಿತನ, ಮತ್ತಿತರ ಕಾರಣಗಳಿಂದ ಬದುಕಿನಲ್ಲಿ ಭರವಸೆ ಕಳೆದುಕೊಂಡಿರುತ್ತಾರೆ. ಇಂಥವರಿಗೆ ಸೂಕ್ತ ಸಮಾಲೋಚನೆ ಮಾಡುವುದರಿಂದ ಅವರಲ್ಲಿರುವ ಆತ್ಮಹತ್ಯೆ ಯೋಚನೆಯನ್ನು ದೂರ ಮಾಡಬಹುದೆಂದು ತಿಳಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋವೈದ್ಯ ಡಾ. ಸರ್ವೇಶ್‌ಕುಮಾರ್‌ ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಡಿ.ಎಂ. ಮಂಜುನಾಥ್‌ ಅವಿಭಕ್ತ ಕುಟುಂಬಗಳು ವಿರಳವಾಗಿರುವುದರಿಂದಲೂ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದರು. ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಹಾಗೂ ಮಾನಸಿಕ ರೋಗ ನಿವಾರಣಾಧಿಕಾರಿ ಡಾ. ಶ್ರೀದೇವಿ ಚಂದ್ರಿಕಾ ಎಂ., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಾಜಣ್ಣ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ರೈತರ ಆಶೋತ್ತರಗಳಿಗೆ ನಮ್ಮ ಸರ್ಕಾರ ಸ್ಪಂದಿಸುತ್ತಿದೆ: ಸಚಿವ ನಾಗೇಶ್‌

ಬಹುತೇಕ ಗಂಡ-ಹೆಂಡತಿ ನಡುವೆ ವೈಮನಸ್ಯ, ನಿರುದ್ಯೋಗ, ಜೀವನದಲ್ಲಿ ಅತೃಪ್ತಿ, ಪರೀಕ್ಷೆ ಫಲಿತಾಂಶ ನಪಾಸು, ವಿಚ್ಛೇದನ, ವಿವಾಹೇತರ ಸಂಬಂಧ, ಪ್ರೇಮ ವೈಫಲ್ಯ, ಅತಿಯಾದ ನಿರೀಕ್ಷೆ ಮತ್ತಿತರ ಸಮಸ್ಯೆಗಳಿಂದ ಒತ್ತಡಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
-ನೂರುನ್ನಿಸ ನ್ಯಾಯಾಧೀಶರು

Follow Us:
Download App:
  • android
  • ios