ದೇವಸ್ಥಾನದ ಪ್ರಸಾದ ಸೇವಿಸಿ 70 ಜನರು ಅಸ್ವಸ್ಥ
ದೇವಾಲಯದಲ್ಲಿ ಪೂಜೆ ಹಿನ್ನೆಲೆಯಲ್ಲಿ ಪ್ರಸಾದ ಹಂಚಿದ್ದು ಈ ಪ್ರಸಾದ ಸೇವಿಸಿದ 70ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ.
ಹಲಗೂರು (ಅ.29): ಲಿಂಗಪಟ್ಟಣ ಗ್ರಾಮದ ಗ್ರಾಮದೇವತೆ ಮಾರಮ್ಮನ ದೇವಸ್ಥಾನದಲ್ಲಿ ರಾತ್ರಿ ಪೂಜೆ ಪುನಸ್ಕಾರ ಮುಗಿದ ನಂತರ ಪುಳಿಯೋಗರೆ ಪ್ರಸಾದ ಸೇವಿಸಿದ ಸುಮಾರು 70 ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಬುಧವಾರ ಬೆಳಗ್ಗೆ ಮತ್ತು ಮಧ್ಯಾಹ್ನದ ನಂತರ ಸ್ವಲ್ಪ ಜನರಿಗೆ ವಾಂತಿಭೇದಿ ಕಾಣಿಸಿಕೊಂಡು ತಕ್ಷಣ ಹಲಗೂರು ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗೊಂಡಾಗ ಇವರು ಆಹಾರ ಸೇವಿಸಿದರಲ್ಲಿ ವ್ಯತ್ಯಾಸ ಇದೆ ಎಂದು ಸುಮಾರು 15 ಜನರಿಗೆ ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ವಾಪಸ್ ಸ್ವಗ್ರಾಮಕ್ಕೆ ಕಳುಹಿಸಲಾಗಿತ್ತು.
ಗ್ರಾಮದಲ್ಲಿ ಇನ್ನೂ ಹಲವರಿಗೆ ವಾಂತಿಭೇದಿ ಇದೆ ಎಂಬ ಸುದ್ದಿ ತಿಳಿದ ತಕ್ಷಣ ತಾಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಮತ್ತು ಅವರ ತಂಡ ಲಿಂಗಪಟ್ಟಣ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸುಮಾರು ಪ್ರಸಾದ ಸೇವಿಸಿದ ಚಿಕ್ಕ ಮಕ್ಕಳು ಸೇರಿದಂತೆ ಮಹಿಳೆಯರು ಹಾಗೂ ಇನ್ನು ಇತರ 70 ಜನರನ್ನು ತಪಾಸಣೆ ಮಾಡಿ ಅದರಲ್ಲಿ 15 ಜನರಿಗೆ ಸುಸ್ತು ಜಾಸ್ತಿ ಇದ್ದ ಕಾರಣ ಚಿಕಿತ್ಸೆ ನೀಡಲಾಗಿದೆ.
ಪುಳಿಯೋಗರೆ ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಪರೀಕ್ಷೆ ಬಂದ ನಂತರ ನಿಖರ ಮಾಹಿತಿ ದೊರಕುತ್ತದೆ. ಮುಂಜಾಗ್ರತೆ ಕ್ರಮವಾಗಿ ತುರ್ತು ವಾಹನವನ್ನು ಇಲ್ಲೇ ಇರಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ವೀರಭದ್ರಪ್ಪ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕದಿಯುತ್ತಿದ್ದ 7 ಆರೋಪಿಗಳ ಸೆರೆ
ಸ್ಥಳದಲ್ಲಿ ದಳವಾಯಿ ಕೋಡಳ್ಳಿ ವೈದ್ಯಾಧಿಕಾರಿ ಉದಯಕುಮಾರ್ , ನಂದೀಶ…, ಶಿವಮೂರ್ತಿ, ಉದಯ…, ವೀರಣ್ಣಗೌಡ ಸೇರಿದಂತೆ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ ವರ್ಗದವರು ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.
ನಾಲ್ವರು ತಾಲೂಕು ಆಸ್ಪತ್ರೆಗೆ ದಾಖಲು: ಲಿಂಗಪಟ್ಟಣದಲ್ಲಿ ಮಾರಮ್ಮನ ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದ 70 ಮಂದಿಯಲ್ಲಿ ನಾಲ್ವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮದ 14 ವರ್ಷದ ಶ್ರೇಯ, 16 ವರ್ಷದ ಐಶ್ವರ್ಯ, 26 ವರ್ಷ ರೋಜಾ, 53 ವರ್ಷದ ಪುಟ್ಟಮ್ಮ ನಾಲ್ವರನ್ನು ಹೆಚ್ಚಿನ ಚಿಕಿತ್ಸಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಡಿಎಚ್ಒ ಭೇಟಿ ಘಟನೆ ಕುರಿತು ಮಾಹಿತಿ
ಹಲಗೂರು: ಲಿಂಗಪಟ್ಟಣದಲ್ಲಿ ಮಾರಮ್ಮನ ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಮಂಚೇಗೌಡರು ಘಟನೆ ಬಗ್ಗೆ ಮಾಹಿತಿ ಪಡೆದರು. ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಡಿಎಚ್ ಒ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವೈದ್ಯಾಧಿಕಾರಿಗಳಿಂದ ಪೂರ್ಣ ಮಾಹಿತಿ ಪಡೆದುಕೊಂಡು ಗ್ರಾಮದಲ್ಲಿ ಮಂಗಳವಾರ ರಾತ್ರಿ ಆಹಾರ ಸೇವನೆಯಿಂದ ಅಥವಾ ನೀರಿನ ವ್ಯತ್ಯಾಸದಿಂದ ಆಗಿದೆ ಎಂಬುದನ್ನು ಪರೀಕ್ಷಾ ವರದಿ ಬಂದ ಗೊತ್ತಾಗಲಿದೆ ಎಂದರು. ಘಟನೆಯಿಂದ ಇಬ್ಬರು ಅಸ್ವಸ್ಥರಾಗಿದ್ದಾರೆ. ಅವರನ್ನು ಮಳವಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಹೆಚ್ಚಿನ ಚಿಕಿತ್ಸೆಯನ್ನು ಗ್ರಾಮದ ಶಾಲೆಯಲ್ಲಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಹೆಚ್ಚಿನ ಅಪಾಯ ಸಂಭವಿಸಿಲ್ಲ. ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು ಈ ವೇಳೆ ಡಿವೈಎಸ್ಪಿ ಪೃಥ್ವಿ, ಸಿಪಿಐ ಶಿವಮಲ್ಲವಯ್ಯ, ಸಿದ್ದೇಗೌಡ ಇದ್ದರು.